ಮಳೆ, ಪ್ರವಾಹ ಸ್ಥಿತಿಗತಿ ಪರಿಶೀಲಿಸಿದ ಸಿಇಒ ಶಿಂಧೆ

| Published : Jun 26 2025, 01:32 AM IST

ಸಾರಾಂಶ

ಪಟ್ಟಣದ ಮಲಪ್ರಭಾ ನದಿ ತೀರ ಸೇರಿದಂತೆ ತಾಲೂಕಿನ ವಿವಿಧೆಡೆ ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆ ಮಂಗಳವಾರ ಭೇಟಿ ನೀಡಿ ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹದ ಸ್ಥಿತಿಗತಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಪಟ್ಟಣದ ಮಲಪ್ರಭಾ ನದಿ ತೀರ ಸೇರಿದಂತೆ ತಾಲೂಕಿನ ವಿವಿಧೆಡೆ ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆ ಮಂಗಳವಾರ ಭೇಟಿ ನೀಡಿ ತಾಲೂಕಿನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹದ ಸ್ಥಿತಿಗತಿ ಪರಿಶೀಲನೆ ನಡೆಸಿದರು.

ತಾಲೂಕಿನ ಇದ್ದಲಹೊಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಟ್ಟಣದ ಹೊರವಲಯದ ಮಲಪ್ರಭಾ ನದಿ ತೀರ, ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಯ ಮಂತುರ್ಗಾ ಬಳಿಯ ಅಲಾತ್ರಿ ಸೇತುವೆ, ಪಾಂಡರಿ ನದಿಯಿಂದ ಪ್ರವಾಹ ಉಂಟಾದ ಸಂದರ್ಭದಲ್ಲಿ ಜಲಾವೃತಗೊಳ್ಳುವ ಲೋಂಡಾ ಗ್ರಾಮದ ಸಂಭವನೀಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಇದ್ದಲಹೊಂಡ ಮತ್ತು ಲೋಂಡಾ ಗ್ರಾಮದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಅವರು, ಶಾಲಾ ಕಟ್ಟಡ, ಮೂಲಸೌಕರ್ಯಗಳು, ಶಿಕ್ಷಕರು ಹಾಗೂ ಮಕ್ಕಳ ಹಾಜರಾತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಲೋಂಡಾ ಗ್ರಾಪಂ ಕಚೇರಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಬಳಿಕ ಲೋಂಡಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಆಸ್ಪತ್ರೆಯಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿ ಹಾಜರಾತಿಯನ್ನು ಪರಿಶೀಲಿಸಿದರು.ಬಳಿಕ ಅಧಿಕಾರಿಗಳ ಜೊತೆ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಿದ ಅವರು, ಮಳೆ ಸುರಿಯುವ ಸಂದರ್ಭದಲ್ಲಿ ಮಲಪ್ರಭಾ ನದಿ, ಅಲಾತ್ರಿ ಹಳ್ಳ ಸೇರಿದಂತೆ ಜಲಮೂಲಗಳ ಮೂಲಕ ಹರಿದು ಬಂದು ಸೇತುವೆಗೆ ಅಡ್ಡಲಾಗಿ ನಿಲ್ಲುವ ಮರದ ಕೊಂಬೆ ಮತ್ತು ತ್ಯಾಜ್ಯವನ್ನು ಮೇಲಿಂದ ಮೇಲೆ ತೆರವುಗೊಳಿಸಬೇಕು. ಪಾಂಡರಿ ನದಿ ಪ್ರವಾಹದಿಂದ ಮುಳುಗಡೆಯಾಗುವ ಸಂಭವನೀಯ ಲೋಂಡಾ ಗ್ರಾಪಂ ವ್ಯಾಪ್ತಿಯ ಗಾಂಧಿನಗರದ ಪ್ರವಾಹ ಪರಿಸ್ಥಿತಿಯ ಮೇಲೆ ಗಮನಹರಿಸಬೇಕು. ವಿದ್ಯುತ್ ಸಂಪರ್ಕ ಕಡಿತದಿಂದ ಮಕ್ಕಳಿಗೆ ತೊಂದರೆಯಾಗದಂತೆ ಸರ್ಕಾರಿ ಶಾಲೆಗಳ ಮತ್ತು ಕಚೇರಿಗಳ ಎಲ್ಲ ಕೊಠಡಿಗಳಿಗೆ ಚಾರ್ಜಿಂಗ್‌ ಬಲ್ಬ್ ಅಥವಾ ಸೋಲಾರ್‌ ಮೂಲಕ ವಿದ್ಯುತ್ ಸಂಪರ್ಕದ ವ್ಯವಸ್ಥೆ ಕಲ್ಪಿಸಬೇಕು. ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ಇಲಾಖೆ ಅಧಿಕಾರಿಗಳು ಸಮನಯ್ವತೆಯಿಂದ ಕೆಲಸ ನಿರ್ವಹಿಸಬೇಕು. ಹೆಚ್ಚು ಮಳೆ ಸುರಿಯುವಾಗ ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿ ಇರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಲೋಂಡಾ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೋಣೆಯ ಕೊರತೆ ಬಗ್ಗೆ ಶಾಲೆಯ ಪಾಲಕರು ಗಮನ ಸೆಳೆದ ಹಿನ್ನೆಲೆಯಲ್ಲಿ ಕೂಡಲೇ ಮನರೇಗಾ ಯೋಜನೆಯಡಿ ಅಡುಗೆ ಕೋಣೆ ನಿರ್ಮಾಣ ಮಾಡಿಕೊಡುವಂತೆ ತಾಪಂ ಮತ್ತು ಗ್ರಾಪಂ ಅಧಿಕಾರಿಗಳಿಗೆ ಸಿಇಒ ನಿರ್ದೇಶನ ನೀಡಿದರು.ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಡಿಡಿಪಿಐ ಲೀಲಾವತಿ ಹಿರೇಮಠ, ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ, ತಾಪಂ ಇಒ ರಮೇಶ ಮೇತ್ರಿ, ಪಂಚಾಯತರಾಜ್ ಇಲಾಖೆಯ ಎಇಇ ರಾಜೇಂದ್ರ ಜಾಧವ, ತಾಪಂ ಸಹಾಯಕ ನಿರ್ದೇಶಕ ರೂಪಾಲಿ ಬಡಕುಂದ್ರಿ, ವಿಜಯಕುಮಾರ ಕೋತಿನ, ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಪಿಡಿಒಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು ಇದ್ದರು.