ಸಾರಾಂಶ
ವೈಮನಸ್ಸು ಮರೆತು ಭೇಟಿಯಾದ ಹಳೆ ದೋಸ್ತಿಗಳು
ಕನ್ನಡಪ್ರಭ ವಾರ್ತೆ ಮೈಸೂರುಹಳೆಯ ವೈಮನಸ್ಸು ಮರೆತು ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ವಿ. ಶ್ರೀನಿವಾಸಪ್ರಸಾದ್ ಅವರ ಮನೆಗೆ ತೆರಳಿದ ಸಿದ್ದರಾಮಯ್ಯ ಅವರು, ಶ್ರೀನಿವಾಸಪ್ರಸಾದ್ ಅವರಿಗಾಗಿ ಕೊಂಚವು ಬೇಸರ ಮಾಡಿಕೊಳ್ಳದೆ 10 ನಿಮಿಷ ಕಾದು ಕುಳಿತಿದ್ದರು. ಶ್ರೀನಿವಾಸಪ್ರಸಾದ್ ಬಂದ ಕೂಡಲೆ ಕೂತಿದ್ದ ಸ್ಥಳದಿಂದ ಮೇಲೆದ್ದು ನಿಂತು ಗೌರವ ತೋರಿದರು. ಅಲ್ಲದೆ, ತಮ್ಮ ಪಕ್ಷದ ನಾಯಕರನ್ನೆಲ್ಲ ಪರಿಚಯ ಮಾಡಿಕೊಟ್ಟರು.ಮೈಸೂರಿಗೆ ಭಾನುವಾರ ಪ್ರಧಾನಿ ಮೋದಿ ಬರಲಿದ್ದು, ಅವರೊಂದಿಗೆ ಶ್ರೀನಿವಾಸಪ್ರಸಾದ್ ವೇದಿಕೆ ಹಂಚಿಕೊಂಡರೇ ಸಮಸ್ಯೆ ಆಗುತ್ತೆ ಎಂದು ಅಲರ್ಟ್ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಠ ಪ್ರತಿಷ್ಠೆ ಎರಡು ಬಿಟ್ಟು ಶ್ರೀನಿವಾಸಪ್ರಸಾದ್ ಅವರ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಬಗ್ಗೆ ಸಿಂಪಥಿ ಇರಲಿಶ್ರೀನಿವಾಸಪ್ರಸಾದ್ ಭೇಟಿಯ ಬಳಿಕ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನೀವು (ಶ್ರೀನಿವಾಸಪ್ರಸಾದ್) ಕಾಂಗ್ರೆಸ್ ನಲ್ಲಿ ಇದ್ದವರು, ಕಾಂಗ್ರೆಸ್ ಬಗ್ಗೆ ಸಿಂಪಥಿ ಇರಲಿ ಎಂದು ಹೇಳಿದ್ದೇನೆ. ಸುದೀರ್ಘವಾಗಿ ರಾಜಕೀಯದ ಬಗ್ಗೆ ಚರ್ಚೆ ಮಾಡಿಲ್ಲ. ಅವರು ರಾಜಕೀಯವಾಗಿ ನಿವೃತ್ತಿ ತೆಗೆದುಕೊಂಡಿದ್ದಾರೆ. ಹೀಗಾಗಿ, ಅವರ ಬಳಿ ರಾಜಕೀಯದ ಬಗ್ಗೆ ಹೆಚ್ಚು ಏನು ಮಾತನಾಡಿಲ್ಲ ಎಂದರು.ಶ್ರೀನಿವಾಸಪ್ರಸಾದ್ ಅವರು ನಮ್ಮ ಹಳೆಯ ಸ್ನೇಹಿತರು. ರಾಜಕೀಯವಾಗಿ ಅವರು ಬಿಜೆಪಿಗೆ ಹೋಗಿದ್ದರು. ಈಗ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ ಅಷ್ಟೆ ಎಂದು ಅವರು ಹೇಳಿದರು. ಮೋದಿ ಸಮಾವೇಶಕ್ಕೆ ಆಹ್ವಾನಿಸಿಲ್ಲ, ಚಾಮರಾಜನಗರದಲ್ಲಿ ಕಾಂಗ್ರೆಸ್ಗೆ ಉತ್ತಮ ವಾತಾವರಣ ಇದೆ- ಶ್ರೀನಿವಾಸಪ್ರಸಾದ್----ಮೋದಿ ಸಮಾವೇಶಕ್ಕೆ ನನಗೆ ಆಹ್ವಾನ ಬಂದಿಲ್ಲ, ಬರುವುದೂ ಇಲ್ಲ. ಕರೆದಿಲ್ಲ, ಕರೆಯೋದೂ ಇಲ್ಲ, ನಾನು ಹೋಗೋದೂ ಇಲ್ಲ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರ ಭೇಟಿ ನನಗೆ ಸಹಜವಾಗಿ ಖುಷಿ ಕೊಟ್ಟಿದ್ದೆ. ಅವರು ನನ್ನ ಬೆಂಬಲ ಕೇಳಿದ್ದಾರೆ. ನಾನು ರಾಜಕೀಯ ನಿವೃತ್ತಿಯಾಗಿದ್ದೇನೆ ಅಂತ ಹೇಳಿದ್ದೇನೆ ಅಷ್ಟೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆ ಉತ್ತಮವಾದ ವಾತಾವರಣ ಇದೆ ಎಂದು ಹೇಳಿದರು.