ಚಾಮರಾಜನಗರ ಕನ್ನಡ ರಾಜ್ಯೋತ್ಸವದಲ್ಲಿ ಗಮನ ಸೆಳೆದ ಆಕರ್ಷಕ ಪಥಸಂಚಲನ

| Published : Nov 02 2024, 01:21 AM IST

ಚಾಮರಾಜನಗರ ಕನ್ನಡ ರಾಜ್ಯೋತ್ಸವದಲ್ಲಿ ಗಮನ ಸೆಳೆದ ಆಕರ್ಷಕ ಪಥಸಂಚಲನ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ತುಕಡಿಗಳು ಹಾಗೂ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಪೊಲೀಸ್‌ ತುಕಡಿ, ಶಾಲಾ ಮಕ್ಕಳಿಂದ ಪ್ರದರ್ಶನ । ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ । ಸಾಂಸ್ಕೃತಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ತುಕಡಿಗಳು ಹಾಗೂ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಪಶು ಸಂಗೋಪನೆ, ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರು ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ, ತೆರೆದ ವಾಹನದಲ್ಲಿ ವಿವಿಧ ಪೊಲೀಸ್ ತುಕಡಿಗಳಿಂದ ಧ್ವಜ ವಂದನೆ ಸ್ವೀಕರಿಸಿದರು.

ಬಳಿಕ ಜಿಲ್ಲಾ ಪೊಲೀಸ್ ಮೀಸಲು ಪಡೆ, ಸಿವಿಲ್ ಪೊಲೀಸ್ ಪಡೆ, ಗಸ್ತು ಅರಣ್ಯ ರಕ್ಷಕ ಪಡೆ, ಗೃಹರಕ್ಷಕ ದಳ ಹಾಗೂ ಜೆ.ಎಸ್.ಎಸ್. ಬಾಲಕ, ಬಾಲಕಿಯರ ಶಾಲೆ, ಸಂತ ಜೋಸೆಫರ ಶಾಲೆ, ಸೇವಾ ಭಾರತಿ ಶಾಲೆ, ಸಂತ ಪೌಲರ ಶಾಲೆ, ಬಂಜಾರ ಇಂಡಿಯನ್ಸ್ ಶಾಲೆ, ಎಂ.ಸಿ.ಎಸ್. ಪಬ್ಲಿಕ್ ಶಾಲಾ ಮಕ್ಕಳು ನಡೆಸಿಕೊಟ್ಟ ಪಥಸಂಚಲನ ಅಕರ್ಷಿಣೀಯವಾಗಿತ್ತು.

ಸಚಿವ ಕೆ. ವೆಂಕಟೇಶ್ ರಾಜ್ಯೋತ್ಸವದ ಸಂದೇಶ ನೀಡಿ ಕವಿಗಳ ನೆಲೆವೀಡಾಗಿರುವ ಶಿಲ್ಪಕಲೆಗಳ ತವರೂರು ಎನಿಸಿರುವ ಕನ್ನಡ ನಾಡಿನಲ್ಲಿ ಕನ್ನಡಿಗರು ಶಾಂತಿಯಿಂದ ಸ್ವಾಭಿಮಾನಿಗಳಾಗಿ ಸಹಬಾಳ್ವೆ ನಡೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಸಾಮರಸ್ಯ ಸಹೋದರತೆಗೆ ಮತ್ತೊಂದು ಹೆಸರೇ ಕರ್ನಾಟಕ ಎಂಬುದನ್ನು ಕನ್ನಡಿಗರು ಸಾರಿದ್ದಾರೆ ಎಂದರು.

ಇದೇ ವೇಳೆ ಭುವನೇಶ್ವರಿ, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಗಣ್ಯರು. ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಜಿಲ್ಲೆಯ 21 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಗೃಹಭಾಗ್ಯ ಯೋಜನೆಯಡಿ ಕಾಯಂ ಪೌರಕಾರ್ಮಿಕರಿಗೆ ಉಚಿತ ನಿವೇಶನದ ಹಕ್ಕುಪತ್ರ ವಿತರಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಶಾಲಾ ಮಕ್ಕಳಿಂದ ನಾಡು-ನುಡಿ ಸ್ಮರಿಸುವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.