ಸಾರಾಂಶ
ಖ್ಯಾತ ರಂಗಭೂಮಿ ಕಲಾವಿದ ಗೋಪಾಲಕೃಷ್ಣ ನಾಯರಿ ಸಂಸ್ಮರಣಾ ಕಾರ್ಯಕ್ರಮ ಭಾನುವಾರ ಸಂಜೆ 5 ಗಂಟೆಗೆ ಸಾಲಿಗ್ರಾಮ ಚೇಂಪಿ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ‘ಗೋಪಾಲಕೃಷ್ಣ ನಾಯರಿ’ ರಂಗ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ
‘ಸಮಸ್ತರು ಬೆಂಗಳೂರು’ ಸಂಯೋಜನೆಯಲ್ಲಿ ದೇಶಿ ಖ್ಯಾತಿಯ ರಂಗ ನಿರ್ದೇಶಕ, ಖ್ಯಾತ ರಂಗಭೂಮಿ ಕಲಾವಿದ ಗೋಪಾಲಕೃಷ್ಣ ನಾಯರಿ ಸಂಸ್ಮರಣಾ ಕಾರ್ಯಕ್ರಮ ಭಾನುವಾರ ಸಂಜೆ 5 ಗಂಟೆಗೆ ಸಾಲಿಗ್ರಾಮ ಚೇಂಪಿ ಯಕ್ಷಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ‘ಗೋಪಾಲಕೃಷ್ಣ ನಾಯರಿ’ ರಂಗ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಹೊನ್ನಾವರದ ಕೆಕ್ಕಾರಿನ, ೨೦೧೪ ರ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ರಂಗ ನಿರ್ದೇಶಕ ಗೋಪಾಲಕೃಷ್ಣ ದೇವರು ಭಟ್ಗೆ (ಜಿಡಿ ಭಟ್) ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹೊನ್ನಾವರದ ಮೇಲಿನ ಮಣ್ಣಿಗೆಯ ಸಂತೋಷ ಯಾಜಿ ಮಣ್ಣಿಗೆ ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ
ಕಲಾಕೇಂದ್ರದ ಆನಂದ ಸಿ.ಕುಂದರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬ್ರಹ್ಮಾವರ ತಾಲೂಕು ಅಧ್ಯಕ್ಷ ವೈಕುಂಠ ಹೇರ್ಳೆ ಸಂಸ್ಮರಣಾ ಮಾತುಗಳನ್ನಾಡಲಿರುವರು.ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಮಂಗಳೂರಿನ ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಬದರಿನಾಥ್ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಉದಯೋನ್ಮುಖ ಬಾಲ ಕಲವಿದರಿಂದ ಸಾಂಸ್ಕೃತಿಕ ಸಿಂಚನ, ಸಭಾಕಾರ್ಯಕ್ರಮದ ನಂತರ ಆರಾಧನಾ ಮೆಲೋಡಿಸ್ ಸಾಲಿಗ್ರಾಮ ಇವರಿಂದ ಭಾವಗೀತೆ ಮತ್ತು ಜಾನಪದ ಹಾಡುಗಳ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ.