ಶಂಕರ ಮಠದ ವಾರ್ಷಿಕೋತ್ಸವದ ಅಂಗವಾಗಿ ಚಂಡಿಕಾ ಹೋಮ

ಕನ್ನಡಪ್ರಭ ವಾರ್ತೆ ಬೇಲೂರುಶ್ರೀ ಶೃಂಗೇರಿ ಶಾರದಾ ಪೀಠಂ ಶಂಕರ ಮಠದ ವಾರ್ಷಿಕೋತ್ಸವದ ಅಂಗವಾಗಿ ಸಂಕಲ್ಪ ಪೂಜೆ ಚಂಡಿಕಾ ಹೋಮ ಹಮ್ಮಿಕೊಳ್ಳಲಾಗಿತ್ತು.ಪಟ್ಟಣದ ಕೋಟೆ ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಮುಂಭಾಗದಲ್ಲಿರುವ ಶ್ರೀ ಶೃಂಗೇರಿ ಶಾರದಾ ಪೀಠಂ ಶಂಕರ ಮಠದ ವಾರ್ಷಿಕೋತ್ಸವ ಅಂಗವಾಗಿ ಮೂಲ ವಿಗ್ರಹಕ್ಕೆ ಮಹಾಭಿಷೇಕ ಕುಂಕುಮಾರ್ಚನೆ, ಚಂಡಿಕಾ ಹೋಮ ಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿಯನ್ನು ನಡೆಸಲಾಯಿತು. ಭಾನುವಾರ ಬೆಳಿಗ್ಗೆ ಸಾಮೂಹಿಕ ಸಂಕಲ್ಪ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಯಾವುದೇ ಭೇದಭಾವ ಇಲ್ಲದೆ ಎಲ್ಲಾ ಜನಾಂಗದವರು ಸಂಕಲ್ಪ ಪೂಜೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಬೆಳಗ್ಗೆ ಆರಂಭಗೊಂಡ ಧಾರ್ಮಿಕ ವಿಧಿ ವಿಧಾನಗಳಲ್ಲಿ, ವೇದ ಪಾರಾಯಣ, ಕುಂಕುಮಾರ್ಚನೆ ವಿಶೇಷ ಪೂಜಾ ವಿಧಿಗಳೊಂದಿಗೆ ಮಹಾಚಂಡಿಕಾ ಹೋಮ ನಡೆಯಿತು. ಮಧ್ಯಾಹ್ನ 12.30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ ನಂತರ ಪ್ರಸಾದ ವಿನಿಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಬೇಲೂರು ಶಂಕರ ಮಠ ಧರ್ಮ ಅಧಿಕಾರಿಗಳಾದ ಸಿ ಆರ್‌ ವಿಜಯಕೇಶವ್ ಮಾತನಾಡಿ ಧಾರ್ಮಿಕ ಕಾರ್ಯಗಳಿಂದ ಮನುಷ್ಯನಲ್ಲಿರುವ ಕೆಟ್ಟ ಹವ್ಯಾಸ, ಕೆಟ್ಟ ಚಿಂತನೆ ನಾಶವಾಗಿ ಜ್ಞಾನ, ಉತ್ತಮ ಸಂಸ್ಕಾರ, ಸೌಹಾರ್ದತೆ ಬೆಳೆಯಲು ನೆರವಾಗುತ್ತದೆ. ಮನುಷ್ಯನ ಉತ್ತಮ ಬದುಕಿಗೆ ಚಂಡಿಕಾ ಹೋಮ ಪೂರಕ ಮತ್ತು ಪ್ರೇರಕ ವಾಗುತ್ತದೆ. ಅದರ ಜತೆಯಲ್ಲಿ ಯಜ್ಞ ಯಾಗಾದಿಗಳಿಂದ ಪ್ರಕೃತಿ ಮಾತೆ ಸಂತುಷ್ಟಳಾಗಿ ಎಲ್ಲ ಕಡೆ ಸುವೃಷ್ಟಿಯನ್ನು ಅನುಗ್ರಹಿಸಲಿ, ಶಾಂತಿ ನೆಮ್ಮದಿ ಸೌಹಾರ್ದತೆಯ ಬದುಕು ಪ್ರಾಪ್ತವಾಗಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರೋಹಿತರಾದ ನರಸಿಂಹಸ್ವಾಮಿ, ವೇದ ಬ್ರಹ್ಮ ಕೆ ಆರ್‌ ಮಂಜುನಾಥ್, ರಾಘವೇಂದ್ರ, ಸುಮಂತ್ ಕುಮಾರ್ ಶರ್ಮಾ, ಪ್ರಶಾಂತ್ ಕುಮಾರ್ ಹೇಮಂತ್, ಹಾನಂಬಿ ರಮೇಶ್, ಕಾಫಿ ಬೋರ್ಡ್ ಸುರೇಶ್, ತೊ ಚ ಅನಂತ ಸುಬ್ಬರಾಯ, ನಾರಾಯಣರಾವ್, ರಾಮಣ್ಣ, ಶ್ರೀಧರ, ನಾಗರಾಜ, ಪ್ರಸನ್ನ ಕುಮಾರ್, ರಘು, ಗಾಯತ್ರಿ ಭಜನಾ ಮಂಡಳಿ ಮಹಿಳೆಯರು ಹಾಜರಿದ್ದರು. ಹಾಸನದ ಕಾರ್ತಿಕ್ ಭಾರದ್ವಾಜ್ ತಂಡದವರಿಂದ ಕೊಳಲು ವಾದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.