ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಧನೆ ಮಾಡಬೇಕೆಂದರೆ ಅರಿವು ಅತ್ಯಂತ ಅಗತ್ಯವಾಗಿದೆ ಎಂದು ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯ ನಿರ್ದೇಶಕ ಹಾಗೂ ಇಸ್ರೋದ ಹಿರಿಯ ವಿಜ್ಞಾನಿ ಡಾ.ಬಿ.ಆರ್.ಗುರುಪ್ರಸಾದ್ ಹೇಳಿದರು.ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಜೆಎಸ್ಎಸ್ ಮಹಿಳಾ ಕಾಲೇಜು ಮತ್ತು ಗ್ರ್ಯಾವಿಟಿ ಸೈನ್ಸ್ ಫೌಂಡೇಶನ್ ಹಾಗೂ ಜವಾಹರಲಾಲ್ ನೆಹರು ತಾರಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಿಜ್ಞಾನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸ್ವಾತಂತ್ರ್ಯ ನಂತರ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು ಅದರಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಅದ್ವಿತೀಯ ಸಾಧನೆ ಮಾಡಿದೆ. ಇದಕ್ಕೆ ಚಂದ್ರಯಾನ-೩ ಸಾಕ್ಷಿ, ಬೇರೆಲ್ಲ ದೇಶಗಳು ಬಾಹ್ಯಾಕಾಶದಲ್ಲಿ ಸಾಧನೆ ಮಾಡಿದ್ದರೂ, ಚಂದ್ರ ಗ್ರಹದಲ್ಲಿ ನೀರಿದೆ ಎಂದು ತೋರಿಸಿ ಕೊಟ್ಟದ್ದೇ ಭಾರತ. ಈ ನಿಟ್ಟಿನಲ್ಲಿ ಮತ್ತಷ್ಟು ಸಾಧನೆಗೆ ಜನಸಾಮಾನ್ಯರಿಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.ವಿಜ್ಞಾನ ಮತ್ತು ತಂತ್ರಜ್ಞಾನ ಒಂದು ಭಾಗವಾಗಿ, ಅಂತರಿಕ್ಷವನ್ನು ತಮ್ಮ ಪ್ರಯೋಜನಕ್ಕಾಗಿ ಬಳಸಿಕೊಳ್ಳವಲ್ಲಿ ಇಂದು ಭಾರತ ಮುಂದೆ ಇದ್ದು ೧೦೦ ಉಪಗ್ರಹಗಳನ್ನು ಉಡಾವಣೆ ಮಾಡುವುದಲ್ಲದೇ ಬೇರೇ ದೇಶಗಳ ಸುಮಾರು ೧೦೦ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದೆ ಇದಕ್ಕೆ ಸರ್ಕಾರಗಳು ವಿಜ್ಞಾನ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿದ್ದೇ ಕಾರಣ ಎಂದರು.ಇಸ್ರೋ ಸಂಸ್ಥೆ ಮೊದಲ ಪ್ರಯತ್ನದಲ್ಲೇ ಮಂಗಳಯಾನದಲ್ಲಿ ನೂರಕ್ಕೆ ನೂರು ಮೂಲ ಉದ್ದೇಶಗಳನ್ನು ಈಡೇರಿಸಿಕೊಂಡಿದ್ದು ಹೆಮ್ಮೆ ವಿಷಯ, ವಿಜ್ಞಾನ ಆಸಕ್ತಿದಾಯಕ, ಆಶ್ಚರ್ಯಕರ ಹಾಗೂ ಕುತೂಹಲಕಾರಿಯಾಗಿದ್ದು ಸಾಧನೆ ಮಾಡಲು ವಿಫುಲ ಅವಕಾಶವನ್ನು ಹೊಂದಿದೆ ಎಂದರು. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು ನಮ್ಮವರೇ. ವಿದ್ಯಾರ್ಥಿಗಳಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕಲಿತು ದೇಶಕ್ಕೆ ಉತ್ತಮ ಸಾಧನೆ ಮಾಡಿದ್ದಾರೆ, ಇದು ನಿಮಗೆ ಪ್ರೇರಣೆಯಾಗಬೇಕು, ಇಂತಹ ಕಾರ್ಯಕ್ರಮಗಳ ಮೂಲಕ ವಿಜ್ಞಾನ ತಂತ್ರಜ್ಞಾನ ಅರಿವು ಮೂಡಿಸಿಕೊಳ್ಳುವುದರ ಜೊತೆಗೆ ಸಾಧನೆಯನ್ನು ಮಾಡಿ ಜನಸಾಮಾನ್ಯರಿಗೂ ಅರಿವು ಮೂಡಿಸಿ ಎಂದರು.
ಇಸ್ರೋದ ಮಾಜಿ ಅಧ್ಯಕ್ಷ ಕಿರಣ್ಕುಮಾರ್ ಮಾತನಾಡಿ, ವಿಜ್ಞಾನ ತಂತ್ರಜ್ಞಾನದ ಅರಿವು ಹಲವು ಕಾರ್ಯಕ್ರಮಗಳಿಗೆ ಪ್ರೋತ್ಸಾಹದಾಯಕವಾಗಿದೆ. ಇಂತಹ ಕಾರ್ಯಕ್ರಮಗಳು ಇನ್ನು ಹೆಚ್ಚು ನಡೆಯಬೇಕು, ಜನಸಾಮಾನ್ಯರಿಗೂ ವಿಜ್ಞಾನ ತಂತ್ರಜ್ಞಾನದ ಅರಿವು ಮೂಡಬೇಕು, ಇದಕ್ಕೆ ನಮ್ಮ ಜವಹರಲಾಲ್ ನೆಹರು ತಾರಾಲಯ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರ್ಯಾವಿಟಿ ಸೈನ್ಸ್ ಫೌಂಡೇಶನ್ನ ಸಂಸ್ಥಾಪಕ ಕಾರ್ಯದರ್ಶಿ ಅಭಿಷೇಕ್ ಎಲ್ಲರಿಗೂ ವಿಜ್ಞಾನ ತಂತ್ರಜ್ಞಾನದ ಅರಿವು ಮೂಡಿಸಬೇಕು. ನಮ್ಮ ಜಿಲ್ಲೆಯ ವಿಜ್ಞಾನ ತಂತ್ರಜ್ಞಾನ ವಿದ್ಯಾರ್ಥಿಗಳು ಮುಂದೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜವಹರಲಾಲ್ ನೆಹರು ತಾರಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ತಂತ್ರಜ್ಞರು, ವಿಜ್ಷಾನಿಗಳು ಇಲ್ಲಿಗೆ ಬಂದಿದ್ದಾರೆ, ಪ್ರಾತ್ಯಕ್ಷಿತೆಯ ಮೂಲಕ ವಿಜ್ಞಾನ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲಿದ್ದಾರೆ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ವಹಿಸಿದ್ದರು.ಐಕ್ಯುಎಸಿ ಸಂಚಾಲಕ ಭೌತಶಾಸ್ರ್ತದ ಮುಖ್ಯಸ್ಥ ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಎಸ್.ಚೈತ್ರ ನಿರೂಪಿಸಿ, ಕೆ.ಸುಮ ಸ್ವಾಗತಿಸಿದರು, ಎಚ್.ವಿ.ಪೂಜಾ ನಿರೂಪಿಸಿದರು.