ಪ್ರಜಾಸೌಧ ನಿರ್ಮಾಣದ ಸ್ಥಳ ಬದಲಾಯಿಸಿ: ರೈತ ಸಂಘ ಪ್ರತಿಭಟನೆ

| Published : Jun 23 2025, 11:46 PM IST / Updated: Jun 23 2025, 11:47 PM IST

ಸಾರಾಂಶ

ಅಳ್ನಾವರ ತಾಲೂಕಿನ ಕಚೇರಿಗಳ ಪ್ರಾರಂಭಕ್ಕೆ ಪ್ರಜಾಸೌಧ ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಜಾಗೆ ಸಾರ್ವಜನಿಕರಿಗೆ ಹೋಗಿ ಬರಲು ಅನಾನುಕೂಲವಾಗಿದ್ದು, ಈ ಕಟ್ಟಡವನ್ನು ಪಟ್ಟಣಕ್ಕೆ ಹೊಂದಿಕೊಂಡಿರುವ ಸೂಕ್ತವಾದ ಜಾಗದಲ್ಲಿ ನಿರ್ಮಿಸಬೇಕು.

ಅಳ್ನಾವರ: ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಪ್ರಜಾಸೌಧದ ಸ್ಥಳವನ್ನು ಬದಲಾಯಿಸಿ ಪಟ್ಟಣಕ್ಕೆ ಸಮೀಪವಾಗುವ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ, ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ತಾಲೂಕಿನ ಕಚೇರಿಗಳ ಪ್ರಾರಂಭಕ್ಕೆ ಪ್ರಜಾಸೌಧ ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಜಾಗೆ ಸಾರ್ವಜನಿಕರಿಗೆ ಹೋಗಿ ಬರಲು ಅನಾನುಕೂಲವಾಗಿದ್ದು, ಈ ಕಟ್ಟಡವನ್ನು ಪಟ್ಟಣಕ್ಕೆ ಹೊಂದಿಕೊಂಡಿರುವ ಸೂಕ್ತವಾದ ಜಾಗದಲ್ಲಿ ನಿರ್ಮಿಸಬೇಕು. ಈಗಾಗಲೇ ಕಾಮಗಾರಿ ಪ್ರಾರಂಭವಾಗಿರುವ ಸ್ಥಳವು ಹಳಿಯಾಳ ತಾಲೂಕಿನ ಗಡಿಗೆ ಹೊಂದಿಕೊಂಡಿದೆ ಮತ್ತು ಅಳ್ನಾವರ ತಾಲೂಕಿನ ಜನರು ಹೋಗಿ ಬರಲು ಅನುಕೂಲತೆ ಹೊಂದಿರುವುದಿಲ್ಲ, ಪಟ್ಟಣಕ್ಕೆ ಹೊಂದಿಕೊಂಡಿದ್ದರೆ ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ, ಈಗಾಗಲೆ ಗೊತ್ತುಪಡಿಸಿದ ಜಾಗವನ್ನು ಕೈಬಿಟ್ಟು ತಾಲೂಕಿನ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.

ಜೂ. 26 ರಂದು ಜಿಲ್ಲಾಧಿಕಾರಿಗಳ ಸಾರ್ವಜನಿಕ ಸಭೆ ಕರೆದು ಕಾಮಗಾರಿ ಪ್ರಗತಿಯಲ್ಲಿರುವ ಸ್ಥಳದ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಳ್ನಾವರ ಪಟ್ಟಣ ಹಾಗೂ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ರವಿ ಕಂಬಳಿ, ಅಲ್ಲಾಭಕ್ಷ ಕುಂದುಭೈನವರ, ಈರಪ್ಪಾ ಶಿಂಧೆ, ರವಿ ವಡ್ಡರ, ಮತ್ತು ಬಿಜೆಪಿಯ ಲಖನ್ ಬರಗುಂಡಿ, ನಾರಾಯಣ ಮೋರೆ, ಲಿಂಗರಾಜ ಮೂಲಿಮನಿ, ಶಿವಾಜಿ ಡೊಳ್ಳಿನ, ಸಂದೀಪ ಪಾಟೀಲ, ಯಲ್ಲಾರಿ ಹುಬ್ಬಳ್ಳಿಕರ, ಪರಶುರಾಮ ಪಾಲಕರ, ನಾಗರಾಜ ಬುಡರಕಟ್ಟಿ, ಪರಶುರಾಮ ರೇಡೆಕರ, ಪ್ರವೀಣ ಪವಾರ, ಪ್ರಕಾಶ ಜಿನ್ನಪ್ಪಗೋಳ ಸೇರಿದಂತೆ ಹಲವರಿದ್ದರು.