ಸಾರಾಂಶ
ಕುಮಟಾ: ಪ್ರತಿಯೊಬ್ಬರೂ ಉತ್ತಮ ಜೀವನ ಮತ್ತು ಆಹಾರ ಶೈಲಿಯ ಜತೆಗೆ ಯೋಗ ಧ್ಯಾನಗಳಿಂದ ಮನಸ್ಥಿತಿಯನ್ನೂ ಕಾಪಾಡಿಕೊಂಡು ಸ್ವಸ್ಥ ಜೀವನ ನಡೆಸಬೇಕು ಎಂದು ಭಾರತೀಯ ಕುಟುಂಬ ಯೋಜನಾ ಸಂಘದ ಆರೋಗ್ಯಾಧಿಕಾರಿ ಡಾ. ಅನುರಾಧಾ ಹೇಳಿದರು.
ತಾಲೂಕಿನ ಧಾರೇಶ್ವರದ ಜನತಾ ವಿದ್ಯಾಲಯದಲ್ಲಿ ಡಾ. ಎ.ವಿ. ಬಾಳಿಗಾ ವಾಣಿಜ್ಯ ಕಾಲೇಜಿನ ಎನ್ಎಸ್ಎಸ್ ಘಟಕದ ಎನ್ಎಸ್ಎಸ್ ವಾರ್ಷಿಕ ವಿಶೇಷ ಸೇವಾ ಶಿಬಿರದಲ್ಲಿ ಭಾರತೀಯ ಕುಟುಂಬ ಯೋಜನಾ ಸಂಘ, ಭಾರತಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಅಭಿಯಾನ, ಉಚಿತ ಆರೋಗ್ಯ ಶಿಬಿರ, ಕ್ಯಾನ್ಸರ್ ಮತ್ತು ರಕ್ತಹೀನತೆ ಕುರಿತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನಶೈಲಿ ಹಾಗೂ ಆಹಾರ ಶೈಲಿಯ ಕಾರಣದಿಂದಲೇ ಹೆಚ್ಚು ಆರೋಗ್ಯ ಸಮಸ್ಯೆ ಉದ್ಭವವಾಗುತ್ತಿದೆ. ಜತೆಗೆ ಮನಸ್ಸಿನ ಅನಾರೋಗ್ಯವು ಹೆಚ್ಚು ಕಾಡುತ್ತಿವೆ ಎಂದರು.ಮುಖ್ಯಅತಿಥಿ ಭಾರತೀಯ ಕುಟುಂಬ ಯೋಜನಾ ಸಂಘದ ವ್ಯವಸ್ಥಾಪಕಿ ಸಂತಾನ್ ಲೂಯಿಸ್ ಮಾತನಾಡಿ, ಭಾರತೀಯ ಕುಟುಂಬ ಯೋಜನಾ ಸಂಘವು ಮಹಿಳೆಯರು, ವಿದ್ಯಾರ್ಥಿನಿಯರು, ಸಾರ್ವಜನಿಕರಿಗಾಗಿ ಹಲವಾರು ಜನಸ್ನೇಹಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಭಾರತಿ ಸಂಸ್ಥೆಯ ನಿರ್ದೇಶಕ ವಿ.ಡಿ. ಭಟ್ ಮಾತನಾಡಿ, ಭಾರತಿ ಸಂಸ್ಥೆಯು ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಕ್ರೀಡೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ . ಉತ್ತಮ ಕಾರ್ಯಕ್ರಮಗಳಿಗೆ ಭಾರತಿ ಸಂಸ್ಥೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.ಗ್ರಾಪಂ ಉಪಾಧ್ಯಕ್ಷ ಎಸ್.ಟಿ. ನಾಯ್ಕ, ಭಾರತಿ ಸಂಸ್ಥೆ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಶ್ರೀನಿವಾಸ ಹರಿಕಾಂತ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ಮಂಜುನಾಥ ವೆರ್ಣೇಕರ, ಕಾರ್ಯದರ್ಶಿ ಶಿವಕುಮಾರ್ ನಾಯಕ, ಅಶ್ವಿನಿ ಭಟ್, ಉಪನ್ಯಾಸಕರಾದ ಮೋಹಿನಿ ನಾಯ್ಕ, ಮೇಘಾ ಪಟಗಾರ ವೇದಿಕೆಯಲ್ಲಿದ್ದರು. ಸಭಾ ಕಾರ್ಯಕ್ರಮದ ಬಳಿಕ ಎನ್ಎಸ್ಎಸ್ ಶಿಬಿರಾರ್ಥಿಗಳು ಗ್ರಾಮದಲ್ಲಿ ಕ್ಯಾನ್ಸರ್, ರಕ್ತಹೀನತೆ ಕುರಿತು ಜಾಗೃತಿ ಜಾಥಾ ನಡೆಸಿದರು.