ಇಂಗಳೇಶ್ವರ ವಚನಶಿಲಾ ಮಂಟಪದ ನಿರ್ಮಾತೃಗಳಾಗಿದ್ದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಪೀಠಾಧಿಪತಿ ಚನ್ನಬಸವ ಸ್ವಾಮೀಜಿ (93) ಗುರುವಾರ ಲಿಂಗೈಕ್ಯರಾದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಾದಯಾತ್ರೆ ಮೂಲಕವೇ ಇಡೀ ಭರತಖಂಡ ಸುತ್ತಿ ನಡೆದಾಡುವ ಬಸವೇಶ್ವರ ಎಂದೇ ಖ್ಯಾತರಾಗಿದ್ದ ಹಾಗೂ ಇಂಗಳೇಶ್ವರ ವಚನಶಿಲಾ ಮಂಟಪದ ನಿರ್ಮಾತೃಗಳಾಗಿದ್ದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಪೀಠಾಧಿಪತಿ ಚನ್ನಬಸವ ಸ್ವಾಮೀಜಿ (93) ಗುರುವಾರ ಲಿಂಗೈಕ್ಯರಾದರು.ಚನ್ನಬಸವ ಶ್ರೀಗಳು ಅಪಾರ ಭಕ್ತಸಮೂಹ ಹೊಂದಿದ್ದು, ಶ್ರೀಗಳ ಅಗಲಿಕೆ ಸುದ್ದಿ ತಿಳಿಯುತ್ತಿದ್ದಂತೆಯೇ ಅಂತಿಮ ದರ್ಶನಕ್ಕಾಗಿ ವಿವಿಧೆಡೆಗಳಿಂದ ಭಕ್ತರು ಇಂಗಳೇಶ್ವರ ಕಡೆಗೆ ಧಾವಿಸುತ್ತಿದ್ದಾರೆ. ಡಿ.12ರಂದು ಸಂಜೆ 5ಕ್ಕೆ ಇಂಗಳೇಶ್ವರ ವಿರಕ್ತಮಠದ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪೂಜ್ಯರ ಅಂತಿಮ ವಿಧಿ-ವಿಧಾನಗಳು ನೆರವೇರಲಿವೆ ಎಂದು ಶ್ರೀಮಠದ ಕಿರಿಯ ಶ್ರೀಗಳಾದ ಡಾ.ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಚನ್ನಬಸವ ಶ್ರೀಗಳ ಹಿನ್ನೆಲೆ:1932ರಲ್ಲಿ ಅವಿಭಜಿತ ವಿಜಯಪುರ ಜಿಲ್ಲೆಯ ಬೀಳಗಿ ತಾಲೂಕಿನ ನಾಗರಾಳ ಗ್ರಾಮದಲ್ಲಿ ಹುಚ್ಚಮ್ಮ ಹಾಗೂ ವೀರಯ್ಯ ದಂಪತಿ ಉದರದಲ್ಲಿ ಜನಿಸಿದ ಚನ್ನಬಸವ ಶ್ರೀಗಳು ಬಾಗಲಕೋಟೆಯ ಟೀಕಿನಮಠ ಹಾಗೂ ಧಾರವಾಡ ಮುರುಘಾಮಠದಲ್ಲಿ ಗುರುಕುಲ ಪದ್ಧತಿಯಲ್ಲಿ ಮೃತ್ಯುಂಜಯ ಶ್ರೀಗಳ ಸೇವೆ ಮಾಡುತ್ತಾ ಸಂಸ್ಕೃತದಲ್ಲಿ ಶಿಕ್ಷಣ ಪಡೆದು, ಭಾಷಾ ಪಾಂಡಿತ್ಯ ಪಡೆದಿದ್ದರು. ಈ ಹಂತದಲ್ಲೇ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ತಮ್ಮ ಉತ್ತರಾಧಿಕಾರಿ ಶೋಧದಲ್ಲಿದ್ದಾಗ ಚನ್ನಬಸವ ಶ್ರೀಗಳು ಕಣ್ಣಿಗೆ ಬೀಳುತ್ತಾರೆ. ಚನ್ನಬಸವ ಶ್ರೀಗಳಲ್ಲಿನ ವಿದ್ವತ್ಪೂರ್ಣ ಜ್ಞಾನ, ವಿಶೇಷವಾಗಿ ಬಸವಾದಿ ಶರಣರ ವಚನಗಳ ವಿಶ್ಲೇಷಣೆ, ಬಸವ ಸಿದ್ಧಾಂತದಲ್ಲಿನ ಬದ್ಧತೆ, ಶರಣ ಪರಂಪರೆಯ ಪ್ರಸಾರದ ಕಟಿಬದ್ಧತೆ ಅರಿತ ಸಿದ್ಧಲಿಂಗ ಶ್ರೀಗಳು ತಮ್ಮ ಉತ್ತರಾಧಿಕಾರಿ ಚನ್ನಬಸವ ಶ್ರೀಗಳೇ ಎಂದು ನಿರ್ಧರಿಸುತ್ತಾರೆ.
1948ರಲ್ಲಿ ಪೀಠಾಧಿಕಾರಿಯಾಗಿ ನಿಯೋಜಿತರಾಗುತ್ತಾರೆ. ಬಳಿಕ ಮುದ್ದೇಬಿಹಾಳದ ಖಾಸ್ಗತೇಶ್ವರ ಮಠದ ಗುರುಗಳಿಂದ ತಮ್ಮ 16ನೇ ವಯಸ್ಸಿನಲ್ಲಿ ಪಟ್ಟಾಧಿಕಾರದ ದೀಕ್ಷೆ ಪಡೆದು ಬಳಿಕ ತಮ್ಮ ಗುರುಗಳ ಆಶಯದಂತೆ ಬಸವತತ್ವ ಪ್ರಸಾರಕ್ಕೆ ತಮ್ಮನ್ನು ಮುಡಿಪಾಗಿ ಇರಿಸಿಕೊಂಡ ಶ್ರೀಗಳು ಇಂಗಳೇಶ್ವರ ವಿರಕ್ತ ಶ್ರೀ ಮಠದಲ್ಲಿ ಸಜ್ಜಕ-ತುಪ್ಪದ ನಿತ್ಯ ದಾಸೋಹಕ್ಕೆ ಚಾಲನೆ ನೀಡಿದ್ದು, ಅದು ಇಂದಿಗೂ ಮುಂದುವರೆದಿದೆ.ಸಂಚಾರಿ ಬಸವರೆಂದೇ ಖ್ಯಾತಿ:
ದೀಕ್ಷೆಯ ಬಳಿಕ ಮಠದಲ್ಲಿ ಕುಳಿತುಕೊಳ್ಳದ ಚನ್ನಬಸವ ಶ್ರೀಗಳು, ಬಸವ ತತ್ವ ಪ್ರಸಾರಕ್ಕಾಗಿ ಪಾದಯಾತ್ರೆ ಮೂಲಕ ಅಖಂಡ ಭಾರತ ಸುತ್ತಲು ಆರಂಭಿಸುತ್ತಾರೆ. ಪೀಠಾಧಿಪತಿಗಳಾದ ಮೂರೇ ವರ್ಷಕ್ಕೆ ಅಂದರೆ 1951ರಲ್ಲಿ ಮೊಟ್ಟಮೊದಲ ಬಾರಿಗೆ ಇಂಗಳೇಶ್ವರ ಗ್ರಾಮದಿಂದ ಅಥಣಿಗೆ ಪಾದಯಾತ್ರೆ ಆರಂಭಿಸಿದ್ದ ಶ್ರೀಗಳು, 2018ರಲ್ಲಿ ಎರಡನೇ ಬಾರಿಗೆ ಸಿದ್ಧಲಿಂಗೇಶ್ವರರ ಪುಣ್ಯಕ್ಷೇತ್ರವಾದ ಯಡಿಯೂರಕ್ಕೆ ಪಾದಯಾತ್ರೆ ನಡೆಸಿದ್ದಾರೆ. ಸುದೀರ್ಘ ಸುಮಾರು ಏಳು ದಶಕಗಳ ಅವಧಿಯಲ್ಲಿ 37 ಬಾರಿ ಭಾರತದ ವಿವಿಧ ಧರ್ಮ ಕ್ಷೇತ್ರಗಳಿಗೆ ಪಾದಯಾತ್ರೆ ನಡೆಸಿದ್ದರು.ವಚನ ಸಂರಕ್ಷಕ ಧೀರ ಶರಣ ಚನ್ನಬಸವಣ್ಣನ ಜನ್ಮಭೂಮಿ ಇಂಗಳೇಶ್ವರ ಕ್ಷೇತ್ರದಿಂದ ಐಕ್ಯಸ್ಥಳವಾದ ಉಳವಿ ಕ್ಷೇತ್ರದ ವರೆಗೆ 32 ವರ್ಷಗಳ ವರೆಗೆ ಸತತವಾಗಿ ಪಾದಯಾತ್ರೆ ನಡೆಸಿದ್ದರು. ಭಾರತದಾದ್ಯಂತ ಬಸವ ತತ್ವ ಬಿತ್ತರಿಸಲು ವಾರಣಾಸಿಯ ವಿಶ್ವನಾಥ, ಕೇದಾರನಾಥ, ರಾಮೇಶ್ವರ ಸೇರಿದಂತೆ ನೂರಾರು ಧಾರ್ಮಿಕ ಶ್ರದ್ಧಾ ಕೇಂದ್ರಗಳ ದರ್ಶನ ಮಾಡಿದ್ದರು.
ಈ ಅವಧಿಯಲ್ಲಿ ಕೇದಾರನಾಥ ಪಾದಯಾತ್ರೆ ಮುಗಿಸಿ ಮರಳುವಾಗ ಋಷಿಕೇಶದ ಪಾರಮಾರ್ಥ ಆಶ್ರಮದಲ್ಲಿ ತಂಗಿದ್ದರು. ಆಶ್ರಮದ ಗೋಡೆಗಳ ಮೇಲೆ ಭಗವದ್ಗೀತೆಯ ಸಾರವನ್ನು ವಿಸ್ತಾರವಾಗಿ ಬರೆದುದ್ದನ್ನು ಗಮನಿಸಿದ ಶ್ರೀಗಳು ಬಸವಾದಿ ಶರಣರ ವಚನಗಳನ್ನು ಇದೇ ಮಾದರಿ ರೂಪಿಸಲು ಯೋಚಿಸಿದ್ದರು. ಇಂಗಳೇಶ್ವರ ಮಠಕ್ಕೆ ಮರಳುವ ಹಂತದಲ್ಲಿ ಶ್ರೀಗಳ ಮನದಲ್ಲಿ ಮಂಕಾಗಿ, ಅಳಿಸಿಹೋಗುವ ಗೋಡೆ ಬರಹದ ಬದಲಾಗಿ ಸುಲಭವಾಗಿ ಅಳಿಸಲಾಗದ ಶಿಲೆಗಳಲ್ಲಿ ಅದರಲ್ಲೂ ಪ್ರತಿಬಿಂಬ ಶಿಲೆಗಳಲ್ಲಿ ವಚನಗಳನ್ನು ಕೆತ್ತಿಸಿ, ಅದರಿಂದಲೇ ಮಂಟಪ ನಿರ್ಮಿಸಲು ಮುಂದಾದರು.ಐತಿಹಾಸಿಕ ವಚನಶಿಲಾ ಮಂಟಪ ನಿರ್ಮಾಣ:
ವಚನಶಿಲಾ ಮಂಟಪ ನಿರ್ಮಾಣದ ದಿಟ್ಟ ಸಂಕಲ್ಪ ಮಾಡಿದ ಚನ್ನಬಸವ ಶ್ರೀಗಳು, 1972 ರಲ್ಲಿ ವಚನಶಿಲಾ ಮಂಟಪ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇಸಿದ್ದರು.ಜಗದ್ವಿಖ್ಯಾತಿ ಪಡೆಯಲಿರುವ ವಚನಶಿಲಾ ಮಂಟಪದ ಐತಿಹಾಸಿಕ ದೂರಗಾಮಿ ಯೋಜನೆ ಅನುಷ್ಠಾನಕ್ಕಾಗಿ ಜೋಳಿಗೆ ಹಿಡಿದ ಶ್ರೀಗಳಿಗೆ ಆರಂಭದಲ್ಲಿ ಉತ್ತಮ ಸ್ಪಂದನೆ ಸಿಗಲಿಲ್ಲ. ಆದರೆ ಬಸವೇಶ್ವರರ ಇಚ್ಛಾಶಕ್ತಿ, ಚನ್ನಬಸಣ್ಣನ ಧೀರತನ ಸೇರಿದಂತೆ ಬಸವಾದಿ ಶರಣರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಚನ್ನಬಸವ ಶ್ರೀಗಳು ಅಧೀರರಾಗದೇ ಸುದೀರ್ಘ ಅರ್ಧ ಶತಮಾನದ ಪರಿಶ್ರಮದಿಂದ ತಮ್ಮ ಪರಿಕಲ್ಪನೆಯ ವಚನಶಿಲಾ ಮಂಟಪ ನಿರ್ಮಿಸಿಯೇ ದೈಹಿಕವಾಗಿ ನಿಗರ್ಮಿಸಿದ್ದಾರೆ.
ಪೂರ್ಣಗೊಂಡಿದ್ದ ವಚನ ಶಿಲಾಮಂಟಪವನ್ನು ರಾಷ್ಟ್ರಪತಿ ಪ್ರಣವ ಮುಖರ್ಜಿ ಅವರಿಂದ ಲೋಕಾರ್ಪಣೆ ಗೊಳಿಸಬೇಕೆಂಬ ಹಂಬಲವಿತ್ತು. ಹಲವು ಕಾರಣಗಳಿಂದ ಸಾಧ್ಯವಾಗದಿದ್ದಾಗ, ರಾಜ್ಯದ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅವರಿಂದ 2022 ರಲ್ಲಿ ಲೋಕಾರ್ಪಣೆ ಆಗಿತ್ತು.ಷಟ್ ಕೋನದಲ್ಲಿ 1700 ವಚನಗಳ ಶಿಲಾ ಮಂಟಪ:
ಇಂಗಳೇಶ್ವರದಲ್ಲಿ ಷಟ್ ಕೋನಗಳಲ್ಲಿ ನಿರ್ಮಾಣಗೊಂಡಿದ್ದು, ವಚನ ಶಿಲಾಮಂಟಪ 1700 ವಚನಗಳನ್ನು ಶಿಲೆಗಳಲ್ಲಿ ಕೆತ್ತಿ ರೂಪಿಸಲಾಗಿದೆ. ಇದರಲ್ಲಿ ಬಸವೇಶ್ವರರು ರಚಿಸಿದ 1300 ವಚನ ಕೆತ್ತಲಾಗಿದೆ. ಉಳಿದಂತೆ ಚೆನ್ನಬಸವಣ್ಣ, ಅಲ್ಲಮ ಪ್ರಭುದೇವರು, ಸಿದ್ದರಾಮೇಶ್ವರರು ಹಾಗೂ ಅಕ್ಕಮಹಾದೇವಿ ಇವರ ವಚನಗಳನ್ನು ಕೆತ್ತಲಾಗಿದೆ.ಚನ್ನಬಸವಣ್ಣನವರ ಕರಣ ಹಸಿಗೆ ಗ್ರಂಥವನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ರಾಜ್ಯದ ಕೆಲವೇ ಮಠಾಧೀಶರಲ್ಲಿ ಇವರು ಪ್ರಮುಖರಾಗಿದ್ದರು. ಚಾಮರಸನ ಪ್ರಭುಲಿಂಗ ಲೀಲೆ ಗ್ರಂಥವನ್ನು ಕರಗತ ಮಾಡಿಕೊಂಡಿದ್ದರು. ಅಲ್ಲಮಪ್ರಭುಗಳ ವಚನಗಳು ವಿಶ್ಲೇಷಣೆ ಮಾಡುವುದರಲ್ಲಿ ಇವರು ಎತ್ತಿದ ಕೈ. ಇತ್ತೀಚೆಗೆ ವಿಜಯಪುರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಾಡಿನ ಖ್ಯಾತ ಸಾಹಿತಿ ಡಾ.ಸೋಮನಾಥ ಯಳವಾರ ಅವರ ಸಂಪಾದಕತ್ವದಲ್ಲಿ ನಿರಂಜನ ಜ್ಯೋತಿ ಎನ್ನುವ ಅಭಿನಂದನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ.