ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನೇಸರಗಿ ಹಾಗೂ ನಾಗನೂರ ಜಿಪಂ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆ ಇಲ್ಲದೆ ರೈತರು ಹೀನಾಯ ಪರಿಸ್ಥಿತಿ ಅನುಭವಿಸುತ್ತಿದ್ದರು. ಕಳೆದ 15 ವರ್ಷಗಳ ಹೋರಾಟದ ಫಲ ಹಾಗೂ ಈ ಭಾಗದ ಶಾಸಕ ಬಾಬಾಸಾಹೇಬ ಪಾಟೀಲ ಅವರ ಛಲ ಬಿಡದ ಹೋರಾಟದಿಂದಾಗಿ ಇಂದು ಶ್ರೀ ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದ್ದು, 3 ವರ್ಷಗಳಲ್ಲಿ ರೈತರಿಗೆ ನೀರು ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.ತಾಲೂಕಿನ ನೇಸರಗಿಯಲ್ಲಿ ಸೋಮವಾರ ಗ್ರಾಮದ ಎಪಿಎಂಸಿ ಆವರಣದಲ್ಲಿ ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಶ್ರೀ ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಸುಮಾರು ₹520 ಕೋಟಿ ಅನುದಾನದ ಈ ನೀರಾವರಿ ಯೋಜನೆಗೆ ಈಗ ₹200 ಕೋಟಿ ಅನುದಾನ ಸಿಕ್ಕಿದೆ ಎಂದು ಮಾಹಿತಿ ನೀಡಿದರು.ಹಿಂದಿನ ಸರ್ಕಾರದಲ್ಲಿ ಗೊತ್ತು ಗುರಿಯಿಲ್ಲದೇ ಅನೇಕ ಯೋಜನೆಗಳಿಗೆ ಚಾಲನೆ ನೀಡಿದ್ದರು. ಅದಕ್ಕೆ ಬಜೆಟ್ ಅನುಮೋದನೆ ಸಹಿತ ಇರಲಿಲ್ಲ. ಹೀಗಾಗಿ ಅವು ಕಾರ್ಯರೂಪಕ್ಕೆ ಬರಲಿಲ್ಲ. ನೀರಾವರಿ ಯೋಜನೆ ಅನುಷ್ಠಾನಕ್ಕೆ ಶಾಸಕ ಬಾಬಾಸಾಹೇಬ ಪಾಟೀಲರು ಶ್ರಮಿಸಿದ್ದು ಅವರ ಶ್ರಮದ ಫಲವಾಗಿ ಯೋಜನೆ ಪ್ರಾರಂಭವಾಗಿದೆ. ಜಿಲ್ಲೆಯ ಗೋಕಾಕ ಕಣಗಾವಿ ಹತ್ತಿರ 2 ಎಕರೆ ಜಾಗದಲ್ಲಿ ಜಿಲ್ಲಾ ಮಟ್ಟದ 2ನೇ ಜಿಲ್ಲಾಸ್ಪತ್ರೆ ಪ್ರಾರಂಭಗಲಿದ್ದು ಅದರ ಸದುಪಯೋಗ ತಮಗೂ ಸಿಗಲಿದೆ ಎಂದು ತಿಳಿಸಿದರು.ಎಲ್ಲ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸರ್ಕಾರ ಕಾರ್ಯ ಮಾಡುತ್ತಿದ್ದು ಹಿಂದೆ ಡಿ.ಬಿ.ಇನಾಂದಾರ ಅವರ ಚುನಾವಣಾ ಪ್ರಚಾರದಲ್ಲಿ ನೀಡಿದ ಭರವಸೆ ಇಂದು ಈಡೇರಿದೆ ಎಂದ ಅವರು, ನೂತನ ಜಿಲ್ಲಾಧಿಕಾರಿ ಕಚೇರಿ, ಬೆಳಗಾವಿ ಚನ್ನಮ್ಮನ ಸರ್ಕಲ್ದಿಂದ ಸಂಕಮ್ ಹೋಟೆಲ್ವರೆಗೆ ₹200 ಕೋಟಿ ವೆಚ್ಚದಲ್ಲಿ ಡಬ್ಬಲ್ ಡೆಕ್ಕರ್ ರಸ್ತೆ, ಗೋಕಾಕ ಫಾಲ್ಸ್ ಪ್ರವಾಸಿ ಕ್ಷೇತ್ರ ಮಾಡಲು ಕೇಬಲ್ ಕಾರ್ ಮೂಲಕ ವೀಕ್ಷಣೆಗೆ ವ್ಯವಸ್ಥೆ, ಸವದತ್ತಿ ಯಲ್ಲಮ್ಮ ಅಭಿವೃದ್ಧಿ ₹200 ಕೋಟಿ ಅನುದಾನ, ಕ್ಯಾನ್ಸರ್ ಆಸ್ಪತ್ರೆ, ನೇಗಿನಹಾಳ ರಸ್ತೆ, ಗಟಾರ್, ಲೈಟ್ ಬಳಕೆಗೆ ಕ್ರಮ, ಕಿತ್ತೂರು ಉತ್ಸವಕ್ಕೆ ₹5 ಕೋಟಿ ಪ್ರತಿ ವರ್ಷ ಅನುದಾನ, ಟೀಮ್ ಪಾರ್ಕ್ ನಿರ್ಮಾಣಕ್ಕೆ ₹55 ಕೋಟಿ ನೇಸರಗಿ ಬೈಲವಾಡ ಜತ್ತ ಜಂಬೋಟಿ ಡಬ್ಬಲ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆ ಪ್ರಾರಂಭವಾಗಲು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸಹಾಯ ಸಹಕಾರ ಬಹಳ ಇದೆ. ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಈ ಭಾಗ ಮಳೆ ನೀರಾವರಿ ಆಶ್ರಯಿತವಾಗಿದ್ದು, ಈಗ ಭಾಗಕ್ಕೆ ನೀರಾವರಿ ಯೋಜನೆ ಬಂದಿರುವುದರಿಂದ ರೈತರ ಬೆಳವಣಿಗೆಗೆ ಅಡಿಪಾಯ ಆಗುತ್ತದೆ ಎಂದರು.ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರ ಸಹಕಾರವೂ ಇದೆ ಎಂದ ಅವರು, ಒಟ್ಟು ₹520 ಕೋಟಿ ನೀರಾವರಿ ಯೋಜನೆ ಕಾಮಗಾರಿಯ ಅನುದಾನದಲ್ಲಿ ₹200 ಕೋಟಿ ಮಂಜೂರಾಗಿದ್ದು 11600 ಹೆಕ್ಟರ್ ಭೂಮಿಗಳಿಗೆ ನೀರು ಒದಗಿಸುವ ಯೋಜನೆ ಪ್ರಾರಂಭವಾಗಲಿದೆ. ಮೊದಲ ಹಂತದ 18 ಕಿಮೀ ಉದ್ದದ ಪೈಪ್ ಲೈನ್ ಕೆಲಸ ಆರಂಭ ಆಗಲಿದೆ ಎಂದರು.
ನೇಸರಗಿ ಮಲ್ಲಾಪುರ ಗಾಳೇಶ್ವರ ಮಠದ ಚಿದಾನಂದ ಶ್ರೀಗಳು, ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.ರುದ್ರಾಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಯುವ ಮುಖಂಡ ನಾನಾಸಾಹೇಬ ಪಾಟೀಲ, ಸಚಿನ ಪಾಟೀಲ, ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಅಡಿವಪ್ಪ ಮಾಳಣ್ಣವರ, ಶಿವನಗೌಡ ಪಾಟೀಲ, ಕಿತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾವಸಾಹೇಬ ಪಾಟೀಲ, ಬರಮಣ್ಣ ಸತ್ತೇನ್ನವರ, ರವಿ ಸಿದ್ದಮ್ಮನವರ, ಅಬ್ಬಾಸ ಪಿರಜಾದೆ, ಅಶೋಕ ಯರಗೋಪ್ಪ , ಉಮೇಶ ಪಾಟೀಲ, ಸತೀಶ ಜಾರಕಿಹೊಳಿ ಆಪ್ತ ಕಾರ್ಯದರ್ಶಿ ಮಲಗೌಡ ಪಾಟೀಲ, ಶಂಕರ ಹೊಳಿ, ನಿಂಗಪ್ಪ ತಳವಾರ, ರಮೇಶ ಮೇಲಿನಮನಿ, ಮಂಜುನಾಥ್ ಹುಲಮನಿ, ಮಲ್ಲಿಕಾರ್ಜುನ ಕಲ್ಲೋಳಿ, ಪ್ರಕಾಶ ಮುಂಗರವಾಡಿ, ಶಿವಾನಂದ ಕುಂಕುರ, ಆದರ್ಶ ರಾಚನಾಯ್ಕ ಸೇರಿದಂತೆ ನೇಸರಗಿ ಹಾಗೂ ನಾಗನೂರ ಜಿಪಂ ಮತಕ್ಷೇತ್ರದ ಗ್ರಾಮಸ್ಥರು, ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.