ಕನ್ನಡಪ್ರಭ ವಾರ್ತೆ ಬಾದಾಮಿ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿ ಶನಿವಾರ ಸಂಜೆ 6ಕ್ಕೆ ಮಹಾಕೂಟೇಶ್ವರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.ಶುಕ್ರವಾರ ರಾತ್ರಿ 8ಕ್ಕೆ ಮಹಾಕೂಟೇಶ್ವರ ದೇವರ ಹೂವಿನಿಂದ ಅಲಂಕಾರಗೊಂಡ ಹೂವಿನ ರಥೋತ್ಸವಕ್ಕೂ ಅತ್ಯಧಿಕ ಭಕ್ತರು ಪಾಲ್ಗೊಂಡು ತೇರು ಎಳೆದಿದ್ದರು.
ಚಾಲುಕ್ಯರ ಕಾಲದಲ್ಲಿ ವಿಜಯದ ಸಂಕೇತ ಎಂಬ ಇತಿಹಾಸದ ಪುಟದಲ್ಲಿರುವ ಮಹಾಕೂಟ ಕ್ಷೇತ್ರಕ್ಕೆ ಭಕ್ತಸಾಗರ ಹರಿದು ಬಂದಿತ್ತು. ಎರಡು ದಿನಗಳ ಕಾಲ ಇಲ್ಲಿಯೇ ಬೇಡು ಬಿಟ್ಟು ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಉತ್ತತ್ತಿ, ಹೂವು ಅರ್ಪಿಸಿದರು.ಮಹಾಕೂಟೇಶ್ವರ ಟ್ರಸ್ಟ್ ವತಿಯಿಂದ ಎರಡು ದಿನಗಳ ಕಾಲ ಉಚಿತ ಪ್ರಸಾದ ವ್ಯವಸ್ಥೆ ಮಾಡಿ ಉದುರು ಸಜ್ಜಕ, ಸಿಹಿ ಹುಗ್ಗಿ ಉಣಬಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಟ್ರಸ್ಟ್ ಮುಖ್ಯಸ್ಥ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಕುಮಾರಗೌಡ ಜನಾಲಿ, ಶಾಂತಾದೇವಿ ಪಟ್ಟಣಶೆಟ್ಟಿ, ಎಂ.ಬಿ. ಹಂಗರಗಿ, ಬಿ.ಆರ್. ಪಾಟೀಲ, ಮುತ್ತಣ್ಣ ಕಳ್ಳಿಗುಡ್ಡ, ಮುಕ್ಕನಗೌಡ ಜನಾಲಿ, ಶಂಕರ ಶಾಸ್ತ್ರಿ, ಕುಮಾರ ಪಟ್ಟಣಶೆಟ್ಟಿ, ಮುತ್ತಣ್ಣ ಚಿನಿವಾಲರ, ಮಹಾಂತೇಶ ಬೆಣ್ಣಿ, ಮಹೇಶ ಪಾಟೀಲ, ಪಿಎಸೈ ಹನುಮಂತ ನರಳೆ ಸೇರಿದಂತೆ ಭಕ್ತರು ಇದ್ದರು.