ಶ್ರೀಕಂಠಶೆಟ್ಟಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ಶಾಸಕ ಗಣೇಶ್‌ ಪ್ರಸಾದ್‌ ಭಾಗಿ

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜಿಲ್ಲೆಯಾದ್ಯಂತ ದತ್ತಿ ಕಾರ್ಯಕ್ರಮಗಳು ನಡೆಯಬೇಕು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಜೆಎಸ್‌ಎಸ್‌ ಕಾಲೇಜಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಜೆಎಸ್ಎಸ್ ಕಾಲೇಜು ಸಹಯೋಗದಲ್ಲಿ ದಿ.ಎಚ್.ಎನ್.ಶ್ರೀಕಂಠಶೆಟ್ಟಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ದತ್ತಿ ಕಾರ್ಯಕ್ರಮಗಳು ನಡೆದಾಗ ಹಿರಿಯರ ಸಾಧನೆ ಹಾಗೂ ಜೀವನ ಗಾಥೆ ತಿಳಿಯಲಿದೆ’ ಎಂದರು.


ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಕೆ. ರವಿಕುಮಾರ್‌ ಮಾತನಾಡಿ, ‘14ನೇ ಶತಮಾನದಲ್ಲೇ ವಚನಗಳ ಮೂಲಕ ಜಾಗೃತಿ ಮೂಡಿಸಿದ ಶರಣರ ವಚನಗಳು ಯುವ ಪೀಳಿಗೆಗೆ ಭಿತ್ತರಿಸುವ ಉದ್ದೇಶದಿಂದಲೇ ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ’ ಎಂದರು.ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರೂ ಆದ ಚಾಮುಲ್‌ ನಿರ್ದೇಶಕ ಎಚ್.ಎಸ್. ನಂಜುಂಡ ಪ್ರಸಾದ್‌ ದಿ. ಎಚ್.ಎನ್.ಶ್ರೀಕಂಠಶೆಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಮಾತನಾಡಿದರು.

ಸಾನಿಧ್ಯ ವಹಿಸಿದ್ದ ಪಡಗೂರು ಅಡವಿ ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ ಮಾತನಾಡಿ,‘ವಚನ ಹಾಗೂ ಶರಣರ ಸಾಹಿತ್ಯ ಪ್ರಸ್ತುತ ದಿನಗಳಲ್ಲಿ ಅತ್ಯಗತ್ಯ. ಜೊತೆಗೆ ವಿಶ್ವದೆಲ್ಲೆಡೆ ವಚನ ಸಾಹಿತ್ಯ ಪಸರಿಸಲಿ’ ಎಂದರು.

ಎಚ್.ಎನ್. ಶ್ರೀಕಂಠಶೆಟ್ಟರು ಶಿಸ್ತು ಜೀವನ ನಡೆಸುತ್ತಿದ್ದರು. ಶೆಟ್ಟರ ಪುತ್ರ ಮಹದೇವ ಪ್ರಸಾದ್‌ ಶಾಸಕ, ಸಚಿವರಾದರು. ಅವರ ನಿಧನದ ಬಳಿಕ ಅವರ ಸೊಸೆ ಶಾಸಕ, ಸಚಿವರಾದರು. ಈಗ ಮೊಮ್ಮಗ ಶಾಸಕರಾಗಿದ್ದಾರೆ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಜ್ಯೋತಿ ಪ್ರಕಾಶ್‌ ದತ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೆಎಸ್‌ಎಸ್‌ ಕಾಲೇಜಿನ ಪ್ರಾಂಶುಪಾಲೆ ಡಾ.ಪಿ. ಮಹದೇವಮ್ಮ, ಎಪಿಎಂಸಿ ಅಧ್ಯಕ್ಷ ಆರ್‌.ಎಸ್.ನಾಗರಾಜು, ಟಿಎಪಿಸಿಎಂಎಸ್‌ ಅಧ್ಯಕ್ಷ ಜಿ.ಮಡಿವಾಳಪ್ಪ, ಹಾಪ್‌ಕಾಮ್ಸ್‌ ಅಧ್ಯಕ್ಷ ಎಂ.ನಾಗೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್. ಶಿವನಾಗಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಉಮಾಪತಿ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಟಿಎಪಿಸಿಎಂಎಸ್‌ ನಿರ್ದೇಶಕ ಕೆ.ಎಂ. ಮಹದೇವಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ದೀಪು, ಮುಖಂಡರಾದ ಬಿ.ಸಿ. ಮಹದೇವಸ್ವಾಮಿ, ಬಿ. ಕುಮಾರಸ್ವಾಮಿ, ಪುಟ್ಟಸ್ವಾಮಿ ಆಚಾರ್‌, ಶಿವಶಂಕರ್‌, ಶಿವಪ್ಪ, ಕದಳಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪನ್ಯಾಸಕ ಗಿರೀಶ್‌ ಹಾಗೂ ವಿದ್ಯಾರ್ಥಿಗಳಿದ್ದರು.