ಜುಲೈ ೨೧ ರಿಂದ ಹಾಸನದಲ್ಲಿ ಚಾತುರ್ಮಾಸ ವ್ರತಾಚರಣೆ

| Published : Jul 18 2024, 01:33 AM IST

ಜುಲೈ ೨೧ ರಿಂದ ಹಾಸನದಲ್ಲಿ ಚಾತುರ್ಮಾಸ ವ್ರತಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದಲ್ಲಿ ಜು.೨೧ ರಿಂದ ಸೆ.೧೮ರ ವರೆಗೂ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತೀ ಮಹಾಸ್ವಾಮಿಗಳ ಚಾತುರ್ಮಾಸ ವ್ರತವನ್ನು ಆಯೋಜಿಸಲಾಗಿದೆ ಎಂದು ಹಾಸನ ಜಿಲ್ಲಾ ಬ್ರಾಹ್ಮಣ ಸಭಾದ ನೂತನ ಅಧ್ಯಕ್ಷ ಎಚ್.ಎಸ್.ಮಂಜುನಾಥ ಮೂರ್ತಿ ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಹಾಸನ ಬ್ರಾಹ್ಮಣ ಸಭಾದ ಅಧ್ಯಕ್ಷ ಎಚ್.ಎಸ್.ಮಂಜುನಾಥ ಮಾಹಿತಿ

ಹಾಸನ: ನಗರದ ಎಂ.ಜಿ.ರಸ್ತೆ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಹಿಂಬಾಗ ದಿವ್ಯ ಚೈತನ್ಯ ಮಂದಿರದಲ್ಲಿ ಜು.೨೧ ರಿಂದ ಸೆ.೧೮ರ ವರೆಗೂ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತೀ ಮಹಾಸ್ವಾಮಿಗಳ ಚಾತುರ್ಮಾಸ್ಯ ವ್ರತವನ್ನು ಆಯೋಜಿಸಲಾಗಿದೆ ಎಂದು ಹಾಸನ ಜಿಲ್ಲಾ ಬ್ರಾಹ್ಮಣ ಸಭಾದ ನೂತನ ಅಧ್ಯಕ್ಷ ಎಚ್.ಎಸ್.ಮಂಜುನಾಥ ಮೂರ್ತಿ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ನೂತನವಾಗಿ ಆಯ್ಕೆಗೊಂಡಿರುವ ಹಾಸನ ಜಿಲ್ಲಾ ಬ್ರಾಹ್ಮಣ ಸಭಾದ ಆಡಳಿತ ಮಂಡಳಿಯು ಶೃಂಗೇರಿ ಜಗದ್ಗುರು ಭಾರತೀತೀರ್ಥ ಮಹಾಸನ್ನಿಧಾನಂಗಳವರ ಸನ್ಯಾಸ ಸ್ವೀಕಾರದ ಸುವರ್ಣ ವರ್ಷದ ಹಿನ್ನೆಲೆಯಲ್ಲಿ ಚಾತುರ್ಮಾಸ್ಯ ವ್ರತವನ್ನು ಆಯೋಜಿಸಲು ನಿಶ್ಚಯಿಸಿದೆ. ಈ ಚಾತುರ್ಮಾಸ್ಯ ವ್ರತಾಚರಣೆಯು ಹಾಸನದ ಎಂ.ಜಿ. ರಸ್ತೆಯಲ್ಲಿರುವ ದಿವ್ಯ ಚೈತನ್ಯ ಮಂದಿರದಲ್ಲಿ ನಡೆಯಲಿದ್ದು, ಆದೋನಿಯ ಯಾದವಗಿರಿಯ ಶ್ರೀ ಶಂಕರಾನಂದ ಸರಸ್ವತೀ ಮಹಾಸಂಸ್ಥಾನದ ಶಾರದಾ ದತ್ತಪೀಠದ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತೀ ಮಹಾಸ್ವಾಮಿಗಳು ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.

ಜು.೨೦ ರಂದು ಶ್ರೀಗಳ ಪುರಪ್ರವೇಶವು ವೇದಘೋಷ, ವಾದ್ಯಘೋಷಗಳೊಂದಿಗೆ ಸಂಜೆ ೫.೩೦ಕ್ಕೆ ಪ್ರಾರಂಭವಾಗಿ ಸೆ.18ರ ಬುಧವಾರ ಸೀಮೋಲ್ಲಂಘನದೊಂದಿಗೆ ಸಂಪನ್ನವಾಗುತ್ತದೆ. ಪ್ರತಿದಿನ ಬೆಳಿಗ್ಗೆ ಶ್ರೀಗಳಿಂದ ಚಂದ್ರಮೌಳೀಶ್ವರ ಪೂಜೆ, ಭಿಕ್ಷಾವಂದನೆ ಹಾಗೂ ಪಾದಪೂಜೆಯು ನಡೆಯುತ್ತದೆ. ಸಂಜೆ ಶ್ರೀಗಳಿಂದ ಸಂಧ್ಯಾರಾಧನೆ, ಚಂದ್ರಮೌಳೀಶ್ವರ ಪೂಜೆ, ಶ್ರೀಚಕ್ರಾರ್ಚನೆ ಇರುತ್ತದೆ. ಈ ನಡುವೆ ಭಜನೆ, ಸಂಗೀತ, ಉಪನ್ಯಾಸ ಕಾಯಕ್ರಮ ನಡೆಯಲಿದೆ ಎಂದು ಹೇಳಿದರು.

ಈ ಗುರುಸೇವಾ ಕೈಂಕರ್ಯದಲ್ಲಿ ಹಾಸನದ ಸಮಸ್ತ ಗುರುಭಕ್ತರೂ ಚಾತುರ್ಮಾಸ್ಯ ಪರ್ಯಂತ ಭಾಗಿಯಾಗಿ ಗುರುಕೃಪೆಗೆ ಪಾತ್ರರಾಗಬೇಕು ಎಂದು ಚಾತುರ್ಮಾಸ್ಯ ವ್ರತಾಚರಣೆ ಸಂಚಾಲನಾ ಸಮಿತಿಯು ಮಹಾಜನರಲ್ಲಿ ವಿನಂತಿಸಿದರು.

ಹಾಸನ ಜಿಲ್ಲಾ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಎಚ್.ಕೆ. ಗುರುಮೂರ್ತಿ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಹಾಗೂ ಜಿಲ್ಲಾ ಸಂಚಾಲಕ ವೆಂಕಟೇಶ್, ಕಾರ್ಯದರ್ಶಿ ಜಿ. ಸುರೇಶ್, ಜಂಟಿ ಕಾರ್ಯದರ್ಶಿ ಎನ್. ಸುಧೀಂದ್ರ, ಖಜಾಂಚಿ ಮಂಜುನಾಥ್, ಬಾಲಸುಬ್ರಮಣ್ಯ ಪ್ರಸಾದ್ ಇತರರು ಹಾಜರಿದ್ದರು.