ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 36ನೇ ಚಾತುರ್ಮಾಸ ವ್ರತ ಸಂಕಲ್ಪ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ಮೂರನೇ ಚಾತುರ್ಮಾಸ ವ್ರತ ಸಂಕಲ್ಪ ಜು. 29ರಂದು ಶ್ರೀ ಕ್ಷೇತ್ರ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆಯಲಿದೆ.

ಶಿರಸಿ: ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 36ನೇ ಚಾತುರ್ಮಾಸ ವ್ರತ ಸಂಕಲ್ಪ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ಮೂರನೇ ಚಾತುರ್ಮಾಸ ವ್ರತ ಸಂಕಲ್ಪ ಜು. 29ರಂದು ಶ್ರೀ ಕ್ಷೇತ್ರ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 10 ಗಂಟೆಯಿಂದ ಉಭಯ ಶ್ರೀಗಳವರಿಂದ ಶ್ರೀ ವೇದವ್ಯಾಸ ಪೂಜೆ, ಚಾತುರ್ಮಾಸ್ಯ ವ್ರತ ಸಂಕಲ್ಪ, ಚತುರ್ವೇದ ಪಾರಾಯಣ, 18 ಮಹಾಪುರಾಣಗಳ ಪಾರಾಯಣ, ಸಮಗ್ರ ಶಿಷ್ಯರಿಂದ ಪಾದಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಮಧ್ಯಾಹ್ನ 1 ಗಂಟೆಯಿಂದ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದೆ.

ಸಂಜೆ 4.30ಕ್ಕೆ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಸಮ್ಮಾನಿತರಾಗಿ ಡಿಜಿಪಿ ಮತ್ತು ಪೊಲೀಸ್ ಕಮಿಷನರ್ ಗುಜರಾತ್ ವಡೋದರದ ಐಪಿಎಸ್ ಅಧಿಕಾರಿ ನರಸಿಂಹ ಕೋಮಾರ್ ಭಾಗವಹಿಸಲಿದ್ದು, ಶ್ರೀ ಸಂಸ್ಥಾನದ ಪುರೋಹಿತರು ವೇದಮೂರ್ತಿ ನರಸಿಂಹ ಜೋಶಿ ಬಾಡ್ಲಕೊಪ್ಪ, ಸ್ವರ್ಣವಲ್ಲೀಯ ಮಾಸ ಪತ್ರಿಕೆಯಾದ "ಸ್ವರ್ಣವಲ್ಲೀಪ್ರಭಾ "ದ ಸಂಪಾದಕರಾಗಿ ಸೇವೆ ಸಲ್ಲಿಸಿದ ಗಣಪತಿ ರಾಮಚಂದ್ರ ಭಟ್ಟ (ವನರಾಗ ಶರ್ಮಾ) ಅವರಿಗೆ ಸಮ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಇದೇ ಸಂದರ್ಭದಲ್ಲಿ ಪುಸ್ತಕಗಳ ಬಿಡುಗಡೆ ಕೂಡ ನಡೆಯಲಿದೆ.

ಚಾತುರ್ಮಾಸ್ಯದ ಪ್ರಯುಕ್ತ ಜು. 29ರಿಂದ ಸೆ. 26ರ ವರೆಗೆ ನಿತ್ಯವೂ ಮಹಾಭಾರತದ ಪ್ರವಚನ, ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು, ಶಿಷ್ಯರಿಂದ ಸೇವೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಹಾಸಂಸ್ಥಾನದಲ್ಲಿ ನಿರಂತರವಾಗಿ ನಡೆಯಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುವಂತೆ ಮಹಾಸಂಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.