ಮುದ್ದುರಾಮನ ಚೌಪದಿಗಳು ಮಾನವೀಯ ಮೌಲ್ಯಗಳನ್ನು ನೆನಪಿಸುವ ಜತೆಗೆ ವ್ಯಕ್ತಿಯ ಅಂತರಂಗ ಶುದ್ಧಿಗೆ ದಾರಿ ತೋರಿಸುವ ಕಾವ್ಯವಾಗಿವೆ. ಇವುಗಳು ಜನರಿಗೆ ತಲುಪಬೇಕು ಮತ್ತು ಪ್ರಸಾರ ಆಗಲು ಎಲ್ಲರೂ ಕೈಜೋಡಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮುದ್ದುರಾಮನ ಚೌಪದಿಗಳು ಅಂತರಂಗ ಬೆಳಗುವ ಸಂವಿಧಾನದಂತಿವೆ. ನವ ಸಮಾಜದ ನಿರ್ಮಾಣಕ್ಕೆ ಮಹನೀಯರು ಬಿಟ್ಟು ಹೋದ ಮೌಲ್ಯ ಮಾರ್ಗ ಅರಿಯಬೇಕಾದರೆ ಮುದ್ದುರಾಮನ ಕಾವ್ಯದೊಳಗೆ ಅನುಸಂಧಾನ ನಡೆಸಬೇಕಿದೆ ಎಂದು ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು

ನಗರದ ಹೊರವಲಯದ ಜ್ಞಾನಸಾಗರ ಕ್ಯಾಂಪಸ್‌ನಲ್ಲಿರುವ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮುದ್ದು ರಾಮ ಬಳಗ, ಮಂಡ್ಯ ಜಿಲ್ಲೆ ಹಾಗೂ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ನಡೆದ ‘ಮುದ್ದುರಾಮ-ಒಂದು ಪರಿಮಳದ ಪಯಣ’ ಉಪನ್ಯಾಸ ಮಾಲಿಕೆ -೪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುದ್ದುರಾಮನ ಚೌಪದಿಗಳು ಮಾನವೀಯ ಮೌಲ್ಯಗಳನ್ನು ನೆನಪಿಸುವ ಜತೆಗೆ ವ್ಯಕ್ತಿಯ ಅಂತರಂಗ ಶುದ್ಧಿಗೆ ದಾರಿ ತೋರಿಸುವ ಕಾವ್ಯವಾಗಿವೆ. ಇವುಗಳು ಜನರಿಗೆ ತಲುಪಬೇಕು ಮತ್ತು ಪ್ರಸಾರ ಆಗಲು ಎಲ್ಲರೂ ಕೈಜೋಡಿಸಬೇಕು. ಮುದ್ದುರಾಮನ ಚೌಪದಿಗಳು ಹಾಗೂ ಅದರ ಕರ್ತೃ ಕೆ.ಸಿ.ಶಿವಪ್ಪ ಅವರ ಸಾಹಿತ್ಯ ನಮ್ಮನ್ನು ಆಕರ್ಷಿಸಿದೆ. ಸಮಾಜವನ್ನು ನೈತಿಕವಾಗಿ, ಮಾನವೀಯವಾಗಿ ಬೆಳೆಸುವ ಮಹತ್ತರ ಜವಾಬ್ದಾರಿ ಸಾಹಿತ್ಯ ಹಾಗೂ ಸಾಹಿತಿಗಳ ಮೇಲಿದೆ. ಇಂತಹ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಕೆ.ಸಿ.ಶಿವಪ್ಪ ತಮ್ಮ ಮುದ್ದುರಾಮನ ಚೌಪದಿಗಳ ಮೂಲಕ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಳೆದ ಐದು ವರ್ಷಗಳಲ್ಲಿ ಸಾಲ ಮಾಡುವ ೨೨ ವರ್ಷದ ಯುವಕರ ಸಂಖ್ಯೆ ಹೆಚ್ಚಾಗಿದೆ. ಶೇ.೭೦ರಷ್ಟು ಯುವಕರು ಲಕ್ಷಾಂತರ ಸಾಲ ತೆಗೆದುಕೊಂಡು ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ, ಶೋಕಿಗಾಗಿ ಸಾಲ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಯುವಕರು ವಿದ್ಯಾಭ್ಯಾಸವನ್ನು ಜ್ಞಾನಕ್ಕಾಗಿ ಓದುತ್ತಿಲ್ಲ, ಏನು ಓದಿದರೆ ಅನುಕೂಲ ಎನ್ನುವ ಮಟ್ಟಕ್ಕೆ ಬಂದು ದುಡ್ಡು ಎನ್ನುವ ಅನೈತಿಕ ಸ್ಪರ್ಧೆಗೆ ಓದುತ್ತಿದ್ದಾರೆ. ಕಂಪನಿಗಳು ಹಾಗೂ ಕಾರ್ಪೊರೇಟ್‌ಗಳ ಹೂಡಿಕೆಗೆ ಲಾಭ ಮಾಡುತ್ತಿದ್ದಾರೆ. ಎಚ್ಚರಿಕೆಯಿಂದ ಯುವಕರು ಇದ್ದು ಬದುಕಿನಲ್ಲಿ ಬೇರೆ ಆಲೋಚನೆ ಮಾಡುವ ಅಗತ್ಯ ಇದೆ ಎಂದರು.

ಎಸ್.ಬಿ. ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ. ಮೀರಾ ಶಿವಲಿಂಗಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕೆ.ಸಿ.ಶಿವಪ್ಪ, ವಿದುಷಿ ಶುಭಾ ರಾಘವೇಂದ್ರ, ಮುದ್ದುರಾಮ ಬಳಗ ಜಿಲ್ಲಾ ಸಂಚಾಲಕಿ ಭವಾನಿ ಲೋಕೇಶ್, ಪ್ರೊ.ನೀಲಗಿರಿ ತಳವಾರ್, ಡಾ.ಶ್ರೀನಿವಾಸ್ ಶೆಟ್ಟಿ ಭಾಗವಹಿಸಿದ್ದರು.