ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಡಾ. ಚೆನ್ನಣ್ಣ ವಾಲೀಕಾರ ಅವರು ಅಂಬೇಡ್ಕರ್ ಆಶಯದಂತೆ ಬರೆದು ಬದುಕಿದವರು ಎಂದು ಕೇಂದ್ರೀಯ ವಿವಿ ಕನ್ನಡ ವಿಭಾಗದ ಪ್ರೊಫೆಸರ್ ವಿಕ್ರಂ ವಿಸಾಜಿ ಹೇಳಿದ್ದಾರೆ.ಗುವಿವಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ‘ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆ-2’ ವಿಷಯ: ಡಾ. ಚೆನ್ನಣ್ಣ ವಾಲೀಕಾರ ಅವರ ಜೀವನ ಮತ್ತು ಸಾಧನೆ ವಿಷಯವಾಗಿ ಅವರು ಮಾತನಾಡಿದರು.
ಡಾ. ಚೆನ್ನಣ್ಣ ವಾಲೀಕಾರ ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಒಂದು ದಶಕಕ್ಕಿಂತ ಹೆಚ್ಚು ಕಾಲ ಈ ಅಧ್ಯಯನ ಸಂಸ್ಥೆ ಕಟ್ಟಿ ಬೆಳೆಸಿದವರು. ಆ ಮೂಲಕ ಕನ್ನಡ ಅಧ್ಯಯನ ಸಂಸ್ಥೆಯ ಹೆಸರು ಇಡಿ ಕರ್ನಾಟಕಕ್ಕೆ ಪರಿಚಯಿಸಿದ್ದಾರೆ. ಹೋರಾಟದಿಂದ ಬಂದ ಇವರು ಸಮಾಜದಲ್ಲಿ ಆಗುತ್ತಿರುವ ಅನ್ಯಾಯ-ಶೋಷಣೆಯ ವಿರುದ್ಧ ಸಂಘಟನೆ ಹೋರಾಟಗಳ ಮುಖಾಂತರ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆಂದು ಡಾ. ವಿಸಾಜಿ ನುಡಿದರು.ಸಾಮಾಜಿಕ ಚಳುವಳಿಗಳ ಮೂಲಕ ಬೆತ್ತಲೆ ಸೇವೆಗಳಂತಹ ಅನಿಷ್ಟಗಳನ್ನು ತಡೆಗಟ್ಟಿ ಅದನ್ನು ಮುಕ್ತಗೊಳಿಸಿದರು. ಸಾಮಾಜಿಕ ಶೋಷಣೆ ಮೂಢನಂಬಿಕೆಗಳ ವಿರುದ್ಧ, ಕುದುರೆ ಮೋತಿ ಪ್ರಕರಣದ ವಿರುದ್ಧ ಹೋರಾಡಿದರು. ಇದಲ್ಲದೆ ತನ್ನ ಕಾವ್ಯದಲ್ಲಿ ತಮ್ಮ ಜನರಿಗಾದ ನೋವನ್ನು ಅಕ್ಷರದ ಮೂಲಕ ಹೇಳಿದ್ದಾರೆ. ಕಾವ್ಯ ಕ್ಷೇತ್ರದಲ್ಲಿ ಗಪ್ಪಿನಾಟ, ಗೀಗಿ ಪದ, ಜನಪದ ಮಟ್ಟುಗಳನ್ನು ವಿಶೇಷ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾರೆಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆಯವರು ಗಾಂಧಿಯವರು ಮುಂದೊಂದು ಜನ್ಮವಿದ್ದರೆ ನಾನು ಅಸ್ಪೃಶ್ಯನಾಗಿ ಹುಟ್ಟಲು ಬಯಸುತ್ತೇನೆ ಅಂದಿದ್ದರು. ಆದರೆ ಚೆನ್ನಣ್ಣ ವಾಲೀಕಾರ ಅವರು ಹುಟ್ಟುವಾಗ ಅಸ್ಪೃಶ್ಯರಾಗಿರಲಿಲ್ಲ. ಆದರೆ ಬದುಕಿದ್ದು ಮಾತ್ರ ದಲಿತನಾಗಿ ಎಂದರು.ಸಾಮಾನ್ಯ ಹಳ್ಳಿಯಿಂದ ಬಂದ ಚೆನ್ನಣ್ಣ ಲೇಖಕನಾಗಿ ಬೆರಗು ಹುಟ್ಟಿಸಿದರೆ, ಮಾನವೀಯ ನೆಲೆಯಲ್ಲಿ ಸಾಮಾನ್ಯರನ್ನು ಪ್ರೀತಿಸಿದ್ದಲ್ಲದೆ, ಅಧೋಲೋಕದ ಸಮುದಾಯದ ಪ್ರತಿನಿಧಿಯಾಗಿ ಬದುಕಿದ್ದು ಮಹಾ ಬೆರಗು’ ಎಂದು ಹೇಳಿದರು. ನಿರೂಪಣೆ ನಿರ್ಮಲಾ, ವಂದನಾರ್ಪನೆ ಸಂಗಮ್ಮ, ಸ್ವಾಗತ ಡಾ. ಹಣಮಂತ ಮೇಲ್ಕೇರಿ ಮಾಡಿದರು.