ಸಾರಾಂಶ
ಮೂರು ದಿನಗಳ ಕಾಲ ನಡೆಯುವ ಪಂದ್ಯಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 250ಕ್ಕೂ ಅಧಿಕ ಕ್ರೀಡಾಳುಗಳು ಭಾಗವಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಚೆಸ್ ಏಕಾಗ್ರತೆ, ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ಸ್ಮರಣಶಕ್ತಿಯನ್ನು ವೃದ್ಧಿಸುತ್ತದೆ ಎಂದು ಎಂಆರ್ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಬಿ. ಸುದರ್ಶನ್ ಹೇಳಿದರು.ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ 17 ವಯೋಮಿತಿಯ ಮುಕ್ತ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ಚೆಸ್ ಪ್ರಸಕ್ತ ಭಾರತದಾದ್ಯಂತ ಮನೆ ಮಾತಾಗಿ ವಿಶ್ವನಾಥನ್ ಆನಂದ್ ಅವರಿಂದಾಗಿ ದೇಶ ವಿದೇಶಗಳಲ್ಲಿ ಭಾರತೀಯರು ವಿಜಯ ಪತಾಕೆಯನ್ನು ಹಾರಿಸಿ, ಸಂಭ್ರಮಿಸುವಂತಾಗಿದೆ. ಎಳವೆಯಲ್ಲೇ ಚೆಸ್ ಕ್ರೀಡೆಯತ್ತ ಮಕ್ಕಳು ಆಸಕ್ತರಾಗುವುದು ಶೈಕ್ಷಣಿಕ ಬೆಳವಣಿಗೆಗೆ ಪೂರಕ ಎಂದರು. ಕೆಐಒಸಿಎಲ್ನ ಎಜಿಎಂ (ಎಚ್ಆರ್) ಚೇತನ್ ಶೆಟ್ಟಿ ಮಾತನಾಡಿ, ಚದುರಂಗ ಕೈಗೆಟುಕುವ ಆಟವಾಗಿದ್ದು, ಬೌದ್ಧಿಕ ಸಾಮರ್ಥ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಜನರಲ್ಲಿ ಸಹಿಷ್ಣುತೆ, ಪರಸ್ಪರ ಗೌರವ ಮತ್ತು ನ್ಯಾಯ ಸಮ್ಮತೆಯನ್ನು ಉತ್ತೇಜಿಸುತ್ತದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಸುನಿಲ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಕೋಟೆ ಸ್ವಾಗತಿಸಿದರು. ಕಾರ್ಯದರ್ಶಿ ಅಭಿಷೇಕ್ ಕಟ್ಟೆಮಾರ್ ವಂದಿಸಿದರು. ಉಪಾಧ್ಯಕ್ಷೆ ವಾಣಿ ಪಣಿಕ್ಕರ್ ನಿರೂಪಿಸಿದರು. ಪಂದ್ಯಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 250ಕ್ಕೂ ಅಧಿಕ ಕ್ರೀಡಾಳುಗಳು ಭಾಗವಹಿಸಿದ್ದಾರೆ.