ಭಾರತೀಯ ಇತಿಹಾಸದ ಅಮರ ಮಹಾನಾಯಕ ಛತ್ರಪತಿ ಶಿವಾಜಿ ಮಹಾರಾಜರು ಶೌರ್ಯ, ಆಡಳಿತ ಕೌಶಲ್ಯ, ನ್ಯಾಯಬದ್ಧತೆ, ಸ್ವಾಭಿಮಾನ ಹಾಗೂ ಧೈರ್ಯದ ಪ್ರತಿರೂಪರಾಗಿದ್ದಾರೆ ಎಂದು ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರಶಾಂತ ಕುಲಕರ್ಣಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಿಂದಗಿ

ಭಾರತೀಯ ಇತಿಹಾಸದ ಅಮರ ಮಹಾನಾಯಕ ಛತ್ರಪತಿ ಶಿವಾಜಿ ಮಹಾರಾಜರು ಶೌರ್ಯ, ಆಡಳಿತ ಕೌಶಲ್ಯ, ನ್ಯಾಯಬದ್ಧತೆ, ಸ್ವಾಭಿಮಾನ ಹಾಗೂ ಧೈರ್ಯದ ಪ್ರತಿರೂಪರಾಗಿದ್ದಾರೆ ಎಂದು ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರಶಾಂತ ಕುಲಕರ್ಣಿ ಅಭಿಪ್ರಾಯಪಟ್ಟರು.

ನಗರದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇತಿಹಾಸ ಸಂಘದಡಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿವಾಜಿ ಮಹಾರಾಜರು ಯುವಜನತೆಗೆ ಶಾಶ್ವತ ಆದರ್ಶ ವ್ಯಕ್ತಿತ್ವವಾಗಿದ್ದು, ಅವರ ಜೀವನ ಮೌಲ್ಯಗಳು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ನಾಯಕತ್ವ ಮತ್ತು ಶಿಸ್ತು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು.

ಶಿವಾಜಿ ಮಹಾರಾಜರ ಜೀವನವು ಕೇವಲ ಯುದ್ಧ ಜಯಗಳ ಕಥೆಯಲ್ಲ, ಅದು ಉತ್ತಮ ಆಡಳಿತ, ನೈತಿಕತೆ ಮತ್ತು ಪ್ರಜಾಹಿತ ಚಿಂತನೆಯ ಪ್ರತಿಬಿಂಬವಾಗಿದೆ. ಶಿಕ್ಷಕರಾಗಿ ವಿದ್ಯಾರ್ಥಿಗಳಲ್ಲಿ ಶಿವಾಜಿ ಮಹಾರಾಜರಂತಹ ಧೈರ್ಯ, ಆತ್ಮವಿಶ್ವಾಸ ಹಾಗೂ ಸಮಾಜಮುಖಿ ಮನೋಭಾವ ಬೆಳೆಸುವುದು ನಮ್ಮ ಪ್ರಮುಖ ಕರ್ತವ್ಯವಾಗಿದೆ ಎಂದು ತಿಳಿಸಿದರು. ಶಿವಾಜಿ ಮಹಾರಾಜರು 1630ರಲ್ಲಿ ಜನಿಸಿದ್ದು ಬಾಲ್ಯದಿಂದಲೇ ಧೈರ್ಯ, ದೇಶಭಕ್ತಿ ಮತ್ತು ಸ್ವಾತಂತ್ರ್ಯದ ಕನಸು ಹೊಂದಿದ್ದರು. ತಾಯಿ ಜಿಜಾಬಾಯಿ ಅವರ ಸಂಸ್ಕಾರಗಳಿಂದ ಪ್ರೇರಿತಗೊಂಡ ಅವರು ಅನೇಕ ಯುದ್ಧಗಳಲ್ಲಿ ಜಯ ಸಾಧಿಸಿ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಅವರ ಶಿಸ್ತಿನ ಸೈನ್ಯ ವ್ಯವಸ್ಥೆ, ಪ್ರಜಾಹಿತ ಆಡಳಿತ ಹಾಗೂ ಮಹಿಳೆಯರ ರಕ್ಷಣೆ ಬಗ್ಗೆ ಹೊಂದಿದ್ದ ದೃಷ್ಟಿಕೋನ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿವೆ ಎಂದು ತಿಳಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಉಪನ್ಯಾಸಕರಾದ ಎಸ್.ಬಿ.ಬಿರಾದಾರ್ ಮಾತನಾಡಿ, ಶಿವಾಜಿ ಮಹಾರಾಜರು ಸ್ಥಾಪಿಸಿದ ಸ್ವರಾಜ್ಯದ ಕನಸು ಇಂದಿಗೂ ಪ್ರಸ್ತುತವಾಗಿದ್ದು, ಅವರ ಆಡಳಿತದ ಧರ್ಮನಿರಪೇಕ್ಷತೆ, ಮಹಿಳೆಯರ ಗೌರವ ಮತ್ತು ಜನಪರ ನೀತಿಗಳು ಸಮಾಜಕ್ಕೆ ಶಾಶ್ವತ ಮಾರ್ಗದರ್ಶಕವಾಗಿವೆ ಎಂದು ಹೇಳಿದರು. ಯುವಕರು ಶಿವಾಜಿ ಮಹಾರಾಜರ ಜೀವನದಿಂದ ಸ್ಫೂರ್ತಿ ಪಡೆದು ರಾಷ್ಟ್ರ ಸೇವೆಗೆ ಮುಂದಾಗಬೇಕು ಹಾಗೂ ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಮತ್ತು ಗಣ್ಯರಿದ್ದರು.