ಜಿಲ್ಲಾಡಳಿತದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

| Published : Feb 20 2025, 12:45 AM IST

ಸಾರಾಂಶ

ರಾಯಚೂರು ನಗರದಲ್ಲಿ ಜಿಲ್ಲಾಡಳಿತದಿಂದ ಛತ್ರಪತಿ ಶಿವಾಜಿ ಮಹಾರಾಜ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು ರಾಷ್ಟ್ರ ಪ್ರೇಮಿ, ಸಾಹಸಿ, ದಕ್ಷ ಆಡಳಿತಗಾರ, ಸ್ಫೂರ್ತಿಯ ಸೆಲೆಯಾದ ಛತ್ರಪತಿ ಶಿವಾಜಿ ಮಹಾರಾಜ ಅವರ ಜಯಂತಿಯನ್ನು ಜಿಲ್ಲಾಡಳಿತದಿಂದ ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು.

ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಬೆಳಗ್ಗೆ ಸ್ಥಳೀಯ ಅಂಬಾದೇವಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ನಂತರ ಸಮೀಪದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಅವರ ಭಾವಚಿತರಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತು ವಾರಿ ಸಚಿವರಾದ ಎನ್.ಎಸ್.ಬೋಸರಾಜು ಹಾಗೂ ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್, ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ಮಾಡಗಿರಿ ಸೇರಿ ಇತರೆ ಗಣ್ಯರು ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ನಮಿಸಿದರು. ನಂತರ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು.ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಂಗಮಂದಿರಕ್ಕೆ ಬಂದು ಸೇರಿತು. ನಂತರ ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನ ರಂಗಮಂದಿರದಲ್ಲಿ ನಡೆದ ಜಯಂತಿ ವೇದಿಕೆ ಕಾರ್ಯಕ್ರಮವನ್ನು ರಾಯಚೂರು ಗ್ರೇಡ್-2 ತಹಶೀಲ್ದಾರ್ ಭೀಮರಾಯ ಉದ್ಘಾಟಿಸಿದರು.

ಈ ವೇಳೆ ಉಪನ್ಯಾಸ ನೀಡಿದ ಸಾಹಿತಿ ಈರಣ್ಣ ಬೆಂಗಾಲಿ, ಶಿವಾಜಿ ಮಹಾರಾಜರು ಅಷ್ಟ ದಿಗ್ಗಜರನ್ನು ಆಸ್ಥಾನದಲ್ಲಿಟ್ಟುಕೊಂಡು ದಕ್ಷ ಆಡಳಿತ ನಡೆಸಿದವರು. ಹಿಂದೂ ಸಾಮ್ರಾಜ್ಯವನ್ನು ಅತ್ಯುನ್ನತ ಸ್ಥಾನದಲ್ಲಿರುವಂತೆ ಹೋರಾಡಿದವರೇ ಛತ್ರಪತಿ ಶಿವಾಜಿಯವರು. ನೀತಿವಂತ, ವಿಚಾರಶೀಲ, ಧರ್ಮವಂತ, ಸುಶೀಲ, ಪರೋಪಕಾರಿ ರಾಜನಾಗಿದ್ದನು ಎಂದು ವರ್ಣಿಸಿದರು.

ತಾಯಿ ಜೀಜಾಬಾಯಿಯು ತನ್ನ ಮಗುವಿನಲ್ಲಿರುವ ಚಿತ್ತ, ಪ್ರಜ್ಞೆ, ಪ್ರತಿಭೆ, ಚಾರಿತ್ರ್ಯ ಕಂಡುಕೊಂಡಳು ಹಾಗೂ ತನ್ನ ಮಗನು ಶೂರ ಸಾಮ್ರಾಟನಾಗಿ ಹೊರಹೊಮ್ಮಲು ಶ್ರಮಿಸಿದಳು. ಬುಡಕಟ್ಟು ಜನಾಂಗದವರಿಗೆ ಶಿಕ್ಷಣ, ಸಂಸ್ಕೃತಿ ನಾಗರಿಕತೆ ಕೊಡಿಸಿದ ಹೆಗ್ಗಳಿಕೆ ಶಿವಾಜಿಯವರಿಗೆ ಸಲ್ಲುತ್ತದೆ ಎಂದು ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆ ಕುರಿತು ವಿವರಿಸಿದರು.

ಸಮಾರಂಭದಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ನಿತೀನ್, ಪ್ರಜ್ವಲ್ ಅವರಿಗೆ ವಿವಿಧ ಗಣ್ಯರು ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮೊಹಮದ್‌ ಶಾಲಂ,ರವೀಂದ್ರ ಜಲ್ದಾರ್‌, ಜಯಣ್ಣ, ಕೆ.ಶಾಂತಪ್ಪ, ಹನಮಂತರಾವ್ ಜಗಪಾತಿ, ಭೀಮಣ್ಣ ಜಾದವ್, ಶಿವಾಜಿರಾವ್, ರಾಜೇಂದ್ರ ಶಿವಾಳಿ ಸೇರಿದಂತೆ ಇತರರು ಇದ್ದರು.