ಸಾರಾಂಶ
ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರ ಪಹರೆ ಸೇರಿದಂತೆ ಮತ್ತಿತರ ಭದ್ರತೆ ಬಗ್ಗೆ ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಬುಧವಾರ ನಗರದ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ವಿದ್ಯಾ ಸಂಸ್ಥೆಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಸೈಂಟ್ ಸಿಸಿಲೀಸ್ ವಿದ್ಯಾ ಸಂಸ್ಥೆಯಲ್ಲಿ ಮತಯಂತ್ರಗಳನ್ನು ಭದ್ರತೆಯಲ್ಲಿ ಇಟ್ಟಿರುವ ಸ್ಟ್ರಾಂಗ್ ರೂಮ್, ಸಿ.ಸಿ.ಟಿ.ವಿ ಕ್ಯಾಮೆರಾಗಳ ವೀಕ್ಷಣಾ ಕೇಂದ್ರ, ವಿವಿಧ ಹಂತಗಳಲ್ಲಿ ಭದ್ರೆತಯನ್ನು ಒದಗಿಸಿರುವ ಪೋಲೀಸರ ಪಹರೆ ಸೇರಿದಂತೆ ಮತ್ತಿತರ ಭದ್ರತೆಯ ಬಗ್ಗೆ ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಮತ ಎಣಿಕೆಗೆ ನಡೆಸಿರುವ ಪೂರ್ವ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರಿಂದ ಮಾಹಿತಿ ಪಡೆದ ಅವರು ಪ್ರತೀ ಎರಡು ಮತ ಎಣಿಕೆ ಟೇಬಲ್ ಗೆ ಸಿ.ಸಿ.ಟಿ.ವಿ ಅಳವಡಿಕೆ ಆಗಬೇಕು ಹಾಗೂ ಮಹಡಿಗಳ ಮೇಲೆ ಮತ ಎಣಿಕೆ ಕೇಂದ್ರಗಳ ಮೆಟ್ಟಿಲುಗಳಿಗೂ ಸಿ.ಸಿ.ಟಿ.ವಿ ಅಳವಡಿಸುವಂತೆ ಸೂಚನೆ ನೀಡಿದರು.ಈ ಸಂದರ್ಭ ಪಶ್ಚಿಮ ವಲಯ ಐ.ಜಿ.ಪಿ. ಬೋರಲಿಂಗಯ್ಯ, ಉಡುಪಿ ಎಸ್.ಪಿ. ಡಾ. ಅರುಣ್ ಕೆ., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ. ಎಸ್. ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.