ಕಡೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಡೂರಿಗೂ ದಶಕಗಳ ಕಾಲದ ಅವಿನಾಭಾವ ಸಂಬಂಧ ಇದ್ದರೂ ಮುಖ್ಯಮಂತ್ರಿಯಾಗಿ ಕ್ಷೇತ್ರಕ್ಕೆ ಆಗಮಿಸುತ್ತಾರೆಂಬ ಅಭಿಮಾನಿಗಳ ಕನಸು ಅವರ ರಾಜೀನಾಮೆಯಿಂದ ಕಮರಿದಂತಾಗಿದೆ.
ಕಡೂರು ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳ ಕೊಡುಗೆ । ಶಾಶ್ವತ ನೀರಾವರಿ, ನಿರುದ್ಯೋಗ ನಿವಾರಣೆಗೆ ಆದ್ಯತೆ
ಕನ್ನಡಪ್ರಭ ವಾರ್ತೆ ಕಡೂರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕಡೂರಿಗೂ ದಶಕಗಳ ಕಾಲದ ಅವಿನಾಭಾವ ಸಂಬಂಧ ಇದ್ದರೂ ಮುಖ್ಯಮಂತ್ರಿಯಾಗಿ ಕ್ಷೇತ್ರಕ್ಕೆ ಆಗಮಿಸುತ್ತಾರೆಂಬ ಅಭಿಮಾನಿಗಳ ಕನಸು ಅವರ ರಾಜೀನಾಮೆಯಿಂದ ಕಮರಿದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರೆ ಕಡೂರು ಜನತೆಗೆ ರಾಜಕೀಯಕ್ಕಿಂತ ಮಿಗಿಲಾಗಿ ಭಾವನಾತ್ಮಕ ಸಂಬಂಧ ಬೆಸೆದಿದೆ. ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಅವರನ್ನು ಕಡೂರಿಗೆ ಕರೆಸಬೇಕೆಂಬ ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಅವರ ಆಸೆ ಕೂಡ ಈಡೇರಲಿಲ್ಲ. ತಾಲೂಕಿನಲ್ಲಿ ಶಾಸಕ ಕೆ.ಎಂ.ಕೃಷ್ಮಮೂರ್ತಿ ಅವರನ್ನು ಒಳಗೊಂಡು ಅಹಿಂದ ಸಂಘಟನೆಗೆ ಈ ಭಾಗದಲ್ಲಿ ಸಿದ್ದರಾಮಯ್ಯ ಬಲ ತುಂಬಿದ್ದರು.ಕೆ.ಎಂ.ಕೃಷ್ಣಮೂರ್ತಿ ಮತ್ತು ಅವರ ಸಹೋದರ ದಿ.ಕೆ.ಎಂ.ಕೆಂಪರಾಜು ನಿಧನರಾದಾಗ ಸಿದ್ದರಾಮಯ್ಯ ಆಗಮಿಸಿ ಅಂತಿಮ ಸಂಸ್ಕಾರ ಮುಗಿಯುವ ತನಕ ಇದ್ದುದ್ದನ್ನು ಕಡೂರು ಜನತೆ ಮರೆತಿಲ್ಲ. 2023ರಲ್ಲಿ ಕೆ.ಎಸ್.ಆನಂದ್ ಅವರ ಪರ ಚುನಾವಣಾ ಪ್ರಚಾರ ಮಾಡುವ ಮೂಲಕ ಅವರ ಭರ್ಜರಿ ಗೆಲುವಿಗೆ ಸಿದ್ದರಾಮಯ್ಯ ಕಾರಣರಾಗಿದ್ದರು ಎಂಬುದು ಸುಳ್ಳಲ್ಲ.
ಜಿಲ್ಲೆಯ ಬಯಲು ಸೀಮೆಯ ಕೆರೆಗಳಿಗೆ ನೀರುಣಿಸುವ ಮಹತ್ವಾಕಾಂಕ್ಷಿ ಯೋಜನೆ ಭಧ್ರಾ ಉಪಕಣಿವೆ ಯೋಜನೆಯ ಮೂಲ 2006ರಷ್ಟು ಹಿಂದೆಯೇ ಇದೆ. ಆಗ ಬರಡು ಭೂಮಿಗೆ ನೀರುಣಿಸುವ ಗೋಂಧಿ ಯೋಜನೆ ಪ್ರಸ್ತಾವನೆಗೆ ಅಂದಿನ ಶಾಸಕ ವೈ.ಎಸ್.ವಿ.ದತ್ತ ಅವರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಸಿಎಂ ಆಗಿದ್ದ ಸಿದ್ದರಾಮಯ್ಯ. ನಂತರದಲ್ಲಿ ಸದರಿ ಯೋಜನೆ ಅನೇಕ ಬದಲಾವಣೆಗಳ ಸ್ವರೂಪ ಪಡೆದುಕೊಂಡು ಇದೀಗ ಭದ್ರಾ ಉಪಕಣಿವೆ ಯೋಜನೆ ಹೆಸರಲ್ಲಿ ಮುಂದುವರಿದಿದೆ.ಇಂದು ರಾಜಕೀಯ ಹೊರತುಪಡಿಸಿ ನೋಡುವುದಾದರೆ ತಾಲೂಕಿನ ಜನರ ಜೀವನಾಡಿಯಾದ ಈ ಶಾಶ್ವತ ನೀರಾವರಿ ಯೋಜನೆಗೆ ₹455 ಕೋಟಿ ಮಂಜೂರಾತಿ ನೀಡಿ ಕಡೂರು ತಾಲೂಕಿಗೆ ನೀರಾವರಿ ಕೊಡುಗೆ ನೀಡಿದ್ದು ಸಿದ್ದರಾಮಯ್ಯನವರು.
ಕಡೂರು ತಾಲೂಕಿನ ನಿರುದ್ಯೋಗ ನಿವಾರಣೆಯಲ್ಲೂ ಶಾಸಕ ಕೆ.ಎಸ್.ಆನಂದ್ ಅವರ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ ಗಾರ್ಮೆಂಟ್ಸ್ ಆರಂಭವಾಗಲೂ ಸಿದ್ದರಾಮಯ್ಯನವರದೇ ಪ್ರೋತ್ಸಾಹ ಇತ್ತು. ಅನೇಕ ಸರ್ಕಾರದ ವಸತಿ ಶಾಲೆಗಳು, ಅತ್ಯಂತ ಅಗತ್ಯವಾಗಿದ್ದ 3 ವಿದ್ಯುತ್ ಉಪ ಕೇಂದ್ರಗಳು ಹೀಗೆ ಅನೇಕ ಕೊಡುಗೆಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ. ದತ್ತ ಅವರು ಶಾಸಕರಾದ ಸಮಯದಲ್ಲಿ ಕಡೂರು ಎಪಿಎಂಸಿ ಆವರಣದಲ್ಲಿ ಸಿದ್ದರಾಮಯ್ಯ ಸರ್ಕಾರಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು. ಆನಂತರ 2024ರ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದು ಬಿಟ್ಟರೆ ಮತ್ತೆ ಯಾವ ಸರ್ಕಾರಿ ಕಾರ್ಯ ಕ್ರಮಗಳಿಗೂ ಆಗಮಿಸಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಶಾಸಕ ಬೆಳ್ಳಿಪ್ರಕಾಶ್ಅ ಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸಂದರ್ಭ ಮತ್ತು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲೂ ಬೆಳ್ಳಿ ಪ್ರಕಾಶ್ ಎರಡೂವರೆ ವರ್ಷ ಮುಂದುವರಿಯಲು ಸಿದ್ದರಾಮಯ್ಯ ಅಭಯ ಹಸ್ತ ನೀಡಿದ್ದರು.ತಾಲೂಕಿನ ದೊಡ್ಡ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯಅವರನ್ನು ಆಹ್ವಾನಿಸುವ ಯೋಚನೆ ಶಾಸಕ ಕೆ.ಎಸ್.ಆನಂದ್ ಅವರಿಗಿತ್ತು. ಆದರೆ ಬದಲಾದ ಸನ್ನಿವೇಶದಿಂದ ನಾಡಿನ ದೊರೆಯಾಗಿ ಕಡೂರಿಗೆ ಸ್ವಾಗತಿಸುವ ಅವಕಾಶ ದೂರಮಾಡಿದೆ. ಇದು ಅವರ ಅಭಿಮಾನಿಗಳು. ಕಾರ್ಯಕರ್ತರಿಗೂ ಬೇಸರ ತಂದಿದೆ. -- ಬಾಕ್ಸ್ ಸುದ್ದಿ ಗೆ--ಸಿದ್ದರಾಮಯ್ಯ ಮತ್ತು ನನ್ನ ಸಂಭಂದ ಅತ್ಯಂತ ಆತ್ಮೀಯವಾದುದು. ಪರಿವಾರದಲ್ಲಿ ಇದ್ದಾಗಿನಿಂದಲೂ ಅವರ ಒಡನಾಟ ಮರೆಯಲಾಗದು ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದರು. ಅವರು ಜೆಡಿಎಸ್ ಅಧ್ಯಕ್ಷರಾಗಿದ್ದಾಗ ನಾನು ಪ್ರಧಾನ ಕಾರ್ಯದರ್ಶಿಯಾಗಿ ಪ್ರತಿನಿತ್ಯ ಅವರ ಭೇಟಿಯಾಗಿದ್ದ ಸಂದರ್ಭದಲ್ಲಿ ಅವರ ವೈಚಾರಿಕ ನಿಲುವು ಮತ್ತಷ್ಟು ಹತ್ತಿರಕ್ಕೆ ತಂದಿತು. ಕಡೂರಿನ ಶಾಸಕ ನಾಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನಾನು ಕ್ಷೇತ್ರಕ್ಕೆ ಕೇಳಿದ ಯಾವುದನ್ನು ಇಲ್ಲ ಎನ್ನದೆ ನೀಡಿದ್ದರು. ಕೆ.ಎಂ ಕೃಷ್ಣಮೂರ್ತಿ ನಿಧನದಿಂದ ಕಡೂರಿನಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಂಪರಾಜ್ ಪರಾಭವಗೊಂಡಾಗ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ಅವರ ನೈತಿಕತೆಗೆ ಸಾಕ್ಷಿ. ಇದೀಗ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿರುವುದು ವರ್ಣ ರಂಜಿತ ಅಧ್ಯಾಯವೊಂದು ಕೊನೆಗೊಂಡಿದೆ ಎಂದು ಹೇಳಿದ್ದಾರೆ.
