ಈಗಲೂ ಚಿಗರಿ ಪ್ರಯಾಣಿಕರ ನೆಚ್ಚಿನ ಬಸ್‌!

| Published : Sep 23 2024, 01:19 AM IST

ಸಾರಾಂಶ

ಈಗಿರುವ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆ ತಂದು ಮುಂದುವರಿಸಿಕೊಂಡು ಹೋಗುವುದು ಒಳಿತು ಎಂದು ಬಹುತೇಕ ಪ್ರಯಾಣಿಕರು ಹೇಳುತ್ತಿದ್ದರೆ ಮತ್ತೆ ಬೆರಳೆಣಿಕೆ ಪ್ರಯಾಣಿಕರು ಬಿಆರ್‌ಟಿಎಸ್‌ ಬಸ್‌ ತೆಗೆದು ಲೈ ಟ್ರಾಮ್‌, ಎಲ್‌ಆರ್‌ಟಿ ಆರಂಭಿಸಿದರೆ ಒಳಿತು ಎನ್ನುತ್ತಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಹು-ಧಾ ಮಹಾನಗರದ ಮಧ್ಯೆ ಸಂಚರಿಸುತ್ತಿರುವ ಬಿಆರ್‌ಟಿಎಸ್‌ ಬಸ್‌ ಸಂಚಾರ ಕುರಿತು ಹೆಚ್ಚಿನ ಪ್ರಯಾಣಿಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಿರ್ವಹಣೆ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸರಿಪಡಿಸಿ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂಬುದು ಹಲವು ಪ್ರಯಾಣಿಕರ ಒಕ್ಕೊರಲ ಒತ್ತಾಯವಾಗಿದೆ.

ಬಿಆರ್‌ಟಿಎಸ್ ಅನುಷ್ಠಾನದಲ್ಲಿ ಕೆಲವೊಂದಿಷ್ಟು ಲೋಪದೋಷಗಳಾಗಿರಬಹುದು. ಹಾಗಂತ ಅದು ಉತ್ತಮ ಸೇವೆ ಸಲ್ಲಿಸುತ್ತಿಲ್ಲ ಎನ್ನುವುದು ಅಸಾಧ್ಯ. ಹಲವು ಪ್ರಯಾಣಿಕರಿಗೆ ಇಂದಿಗೂ ಚಿಗರಿ ಬಸ್‌ ನೆಚ್ಚಿನ ಪ್ರಯಾಣಕ್ಕೆ ಸಾಕ್ಷಿಯಾಗಿದೆ. ಈಗಿರುವ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆ ತಂದು ಮುಂದುವರಿಸಿಕೊಂಡು ಹೋಗುವುದು ಒಳಿತು ಎಂದು ಬಹುತೇಕ ಪ್ರಯಾಣಿಕರು ಹೇಳುತ್ತಿದ್ದರೆ ಮತ್ತೆ ಬೆರಳೆಣಿಕೆ ಪ್ರಯಾಣಿಕರು ಬಿಆರ್‌ಟಿಎಸ್‌ ಬಸ್‌ ತೆಗೆದು ಲೈ ಟ್ರಾಮ್‌, ಎಲ್‌ಆರ್‌ಟಿ (ಲೈಟ್‌ ರೈಲ್‌ ಟ್ರಾನ್ಸಿಟ್) ಆರಂಭಿಸಿದರೆ ಒಳಿತು ಎನ್ನುತ್ತಿದ್ದಾರೆ.

ಈ ಕುರಿತು ''''ಕನ್ನಡಪ್ರಭ'''' ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಪ್ರಯಾಣಿಕರು ಹಲವು ವಿಷಯಗಳನ್ನು ತಿಳಿಸಿದ್ದು, ಚಿಗರಿ ಬಸ್‌ಗಳಲ್ಲಿ ನಿತ್ಯವೂ ಸಂಚರಿಸುವ ಪ್ರಯಾಣಿಕರಿಗೆ ಬಿಆರ್‌ಟಿಎಸ್‌ ಮೇಲಿರುವ ಆಸಕ್ತಿ, ನಿರಾಸಕ್ತಿ ಕುರಿತು ಇಂದು ಬೆಳಕು ಚೆಲ್ಲಲಿದೆ.ಬಿಆರ್‌ಟಿಎಸ್ ಅವಳಿ ನಗರದ ಜನರಿಗೆ ಎಷ್ಟು ಅನುಕೂಲವಿದೆಯೋ ಅಷ್ಟೇ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಮಳೆಗಾಲದಲ್ಲಿಂತೂ ಬಿಆರ್‌ಟಿಎಸ್‌ ಕಾರಿಡಾರ್‌ ಅಕ್ಷರಶಃ ಕೆರೆಯಂತಾಗುತ್ತದೆ. ಬಿಆರ್‌ಟಿಎಸ್ ಬದಲಾಗಿ ಲೈಟ್ರಾಮ್‌ ಜಾರಿಗೊಳಿಸಿದರೆ ಉತ್ತಮ.ಮಲ್ಲಿಕಾರ್ಜುನ ಶಿವಳ್ಳಿ, ಸುಳ್ಳ

ಕೋಟ್ಯಂತರ ರುಪಾಯಿ ಖರ್ಚು ಮಾಡಿ ಆರಂಭಿಸಿರುವ ಈ ಯೋಜನೆ ಬಂದ್‌ ಮಾಡುವುದು ಸರಿಯಲ್ಲ. ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದಾಗಿ ಬಿಆರ್‌ಟಿಎಸ್‌ ಬಸ್‌ಗಳು ಈ ವ್ಯವಸ್ಥೆಗೆ ಬಂದಿವೆ. ಮುಂದೆ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಲಿ.

ರವಿ ಶಂಕರ, ನವನಗರ ವಿದ್ಯಾರ್ಥಿಲೈ ಟ್ರಾಮ್‌ ಆರಂಭಿಸಬೇಕಾದರೆ ಈಗಿರುವ ಬಿಆರ್‌ಟಿಎಸ್‌ ಕಾರಿಡಾರ್‌ ತೆಗೆದು 4-5 ವರ್ಷಗಳ ಕಾಮಗಾರಿ ಕೈಗೊಳ್ಳಬೇಕು. ಇದರಿಂದ ಪ್ರಯಾಣಿಕರಿಗೆ ಮತ್ತೆ ತೊಂದರೆ ಅನುಭವಿಸಲಿದ್ದಾರೆ. ಲೈ ಟ್ರಾಮ್‌ಗಿಂತಲೂ ಬಿಆರ್‌ಟಿಎಸ್‌ ಯೋಜನೆಯೇ ಚೆನ್ನಾಗಿದೆ.

ಅಯಾನ್‌ ಹಳ್ಯಾಳ, ವೈದ್ಯಕೀಯ ವಿದ್ಯಾರ್ಥಿನಿರ್ವಹಣೆ ಕೊರತೆ ಎದುರಿಸುತ್ತಿರುವ ಬಿಆರ್‌ಟಿಎಸ್‌ ಯೋಜನೆ ತೆಗೆದು ಲೈ ಟ್ರಾಮ್ ಅಥವಾ ಎಲ್‌ಆರ್‌ಟಿಯಂತಹ ಯೋಜನೆ ತಂದಲ್ಲಿ ಜನದಟ್ಟಣೆ ನಿಯಂತ್ರಿಸಲು ಸಾಧ್ಯವಾಗುತ್ತದೆ. ಮೊದಮೊದಲು ಬಿಆರ್‌ಟಿಎಸ್‌ ಚೆನ್ನಾಗಿತ್ತು. ಈಗ ನಿರ್ವಹಣೆ ಇಲ್ಲದೇ ಹಾಳಾಗಿದೆ.

ಪ್ರಣವ್, ಐಐಐಟಿ ವಿದ್ಯಾರ್ಥಿ, ಪುಣೆ

ಬಿಆರ್‌ಟಿಎಸ್‌ ಬಸ್‌ಗಳು ನಿರ್ವಹಣೆ ಕೊರತೆ ಎದುರಿಸುತ್ತಿರುವುದು ನಿಜ. ಇದೇ ನೆಪದಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಆರಂಭಿಸಲಾಗಿರುವ ಯೋಜನೆ ಬಂದ್‌ ಮಾಡುವುದು ಸರಿಯಲ್ಲ. ಇದೇ ಚಿಗರಿ ಬಸ್‌ ಸಂಚಾರ ಮುಂದುವರಿಯಲಿ.

ನಿಶ್ಚಿತ್, ಕಾಲೇಜು ವಿದ್ಯಾರ್ಥಿಬಿಆರ್‌ಟಿಎಸ್‌ ಮೊದಲು ಬಂದಾಗ ಬಸ್ಸಿನಲ್ಲಿ ಸಂಚರಿಸಬೇಕು ಎಂಬ ಹುಮ್ಮಸ್ಸಿತ್ತು. ಈಗ ನಿರ್ವಹಣೆಯ ಕೊರತೆಯಿಂದಾಗಿ ಬಸ್‌ಗಳೆಲ್ಲ ಹಾಳಾಗುತ್ತಿವೆ. ಯೋಜನೆಯ ನಿರ್ವಹಣೆ ಹೊತ್ತ ಅಧಿಕಾರಿಗಳು ಇವುಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಲಿ.

ಚಿನ್ಮಯ, ಎಂಬಿಎ ವಿದ್ಯಾರ್ಥಿ