ಸಾರಾಂಶ
ಚಿಕ್ಕಬಳ್ಳಾಪುರದ ಭಗತ್ಸಿಂಗ್ ನಗರದ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ ಅಂಗವಾಗಿ ಪೂಜಾರಿ ಸತತ 23 ಗಂಟೆ ಕರಗ ಹೊತ್ತು ಮೆರವಣಿಗೆಯಲ್ಲಿ ಸಾಗಿದ್ದಾರೆ.
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಭಗತ್ಸಿಂಗ್ ನಗರದ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ ಅಂಗವಾಗಿ ಪೂಜಾರಿ ಸತತ 23 ಗಂಟೆ ಕರಗ ಹೊತ್ತು ಮೆರವಣಿಗೆಯಲ್ಲಿ ಸಾಗಿದ್ದಾರೆ.
ನಗರದಲ್ಲಿ 41ನೇ ವರ್ಷದ ಧರ್ಮರಾಯಸ್ವಾಮಿ ಕರಗ ಹಿನ್ನೆಲೆಯಲ್ಲಿ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಶನಿವಾರ ಹಾಗೂ ಭಾನುವಾರ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ ಕರಗದ ಪೂಜಾರಿ ಎಂ.ಬಾಲಾಜಿ ಅವರು ಶನಿವಾರ ಮಧ್ಯರಾತ್ರಿ 12-30ಕ್ಕೆ ದೇವಾಲಯದಿಂದ ಕರಗ ಹೊತ್ತು ಹೊರಬಂದು ಚಿಕ್ಕಬಳ್ಳಾಪುರ ನಗರ ಸೇರಿ ಹೊರವಲಯದ ಮುಸ್ಟೂರು, ಅಣಕನ ಗೊಂದಿ ಗ್ರಾಮಗಳಿಗೆ ತೆರಳಿ ಪ್ರತಿಯೊಂದು ಮನೆಯಿಂದ ಪೂಜೆ ಸ್ವೀಕರಿಸಿದರು. ಸತತ ಸುಮಾರು 23 ಗಂಟೆಗಳ ಬಳಿಕ ಭಾನುವಾರ ಮಧ್ಯರಾತ್ರಿ ದೇವಾಲಯಕ್ಕೆ ಮರಳಿ ಬಂದು ಅಗ್ನಿಕುಂಡ ಹಾಯ್ದು ದೇವಾಲಯಕ್ಕೆ ಪ್ರವೇಶಿಸಿದರು.
ಮೊಳಗಿದ ಮಂಗಳವಾದ್ಯ:
ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ಸರ್ವಾಲಂಕಾರ ಭೂಷಿತರಾಗಿದ್ದ ಕರಗದ ಪೂಜಾರಿ ಎಂ.ಬಾಲಾಜಿ ಅವರು ಹೂವಿನ ಕರಗ ಹೊತ್ತು 1 ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ವಿಜೃಂಭಣೆಯಿಂದ ನೆರವೇರಿದ ಕರಗ ಉತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗಿಯಾಗಿದ್ದರು.