ಸೌದಾರ್ಹತೆಗೆ ಪ್ರತಿಕವಾಗಿರುವ ತಾಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಂಭ್ರಮ ಸಡಗರದಿಂದ ಚಂದ್ರಮಂಡಲೋತ್ಸವ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಜರುಗಿತು.

ಕನ್ನಡಪ್ರಭ ವಾರ್ತೆ, ಹನೂರು

ಸೌದಾರ್ಹತೆಗೆ ಪ್ರತಿಕವಾಗಿರುವ ತಾಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯಲ್ಲಿ ಸಂಭ್ರಮ ಸಡಗರದಿಂದ ಚಂದ್ರಮಂಡಲೋತ್ಸವ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಜರುಗಿತು.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಐದು ದಿನಗಳ ಜಾತ್ರೆಯ ಮೊದಲ ದಿನ ಚಂದ್ರಮಂಡಲೋತ್ಸವ ಮೂಲಕ ಚಾಲನೆ ನೀಡಲಾಯಿತು

ಪರಂಪರೆ ಸಾರುವ ಚಿಕ್ಕಲ್ಲೂರು ಜಾತ್ರೆ ಚಿಕ್ಕಲ್ಲೂರಿನಲ್ಲಿರುವ ಹಳೆ ಮಠದಿಂದ ಬೊಪ್ಪೇಗೌಡನ ಪುರದ ಧರೆಗೆ ದೊಡ್ಡವರ ಸಂಸ್ಥಾನದ ಮಠದ ಪರಂಪರೆಯಂತೆ ಮಠದ ಬಸವ ಬಾರಿ ಕಂಡಾಯ ಸೇರಿದಂತೆ ನೀಲಗಾರರು ಕಂದಾಯಗಳನ್ನು ಹೊತ್ತುಸಾಗುತ್ತಾರೆ. ಜೊತೆಗೆ ಕಾಟಿ ಕೊಂಬು ದಾಳ ಸತ್ತಿಗೆ ಸುರಪಾನಿ ವಾದ್ಯ ಮೇಳ ಸದ್ದಿನೊಂದಿಗೆ ಬರುವ ನೀಲಗಾರರು ಬಿಳಿ ವಸ್ತ್ರವನ್ನು ಧರಿಸಿ, ಹಣೆಗೆ ಮೂರು ಕಟ್ಟು ವಿಭೂತಿ ಬಳಿದು ಬೆತ್ತ ಜೋಳಿಗೆ ಹಿಡಿದು ಜಾಗಟೆ ಬಡಿದುಕೊಂಡು ಒಟ್ಟಾಗಿ ಸಿದ್ದಪ್ಪಾಜಿ ಗದ್ದುಗೆಗೆ ಆಗಮಿಸಿ ಮಠಾಧಿಪತಿಗಳು ವಿಶೇಷ ಪೂಜೆ ಸಲ್ಲಿಸಿದ ನಂತರ ಶಾಗ್ಯ ಗ್ರಾಮಸ್ಥರು ಸುತ್ತೇಳು ಗ್ರಾಮಸ್ಥರು ಬಿದಿರು ಹಚ್ಚೆ ಮಡಿ ಬಟ್ಟೆ ತುಪ್ಪ ಎಣ್ಣೆಯನ್ನು ಹಚ್ಚಿ ಗದ್ದುಗೆಯ ಮುಂಭಾಗ ಇರುವ ವೃತ್ತಾಕಾರದ ವೇದಿಕೆಯಲ್ಲಿ ಸಿದ್ಧಪಡಿಸಿದ್ದ ಚಂದ್ರ ಮಂಡಲಕ್ಕೆ ದೂಪ ಸಾಬ್ರಣಿ ಕರ್ಪೂರ ದಾರತಿ ಬೆಳಗಿನ ಪೂಜೆ ನೆರವೇರಿಸಿ ಚಂದ್ರಮಂಡಲದ ಕರ್ಪೂರದ ಜ್ಯೋತಿ ಸ್ಪರ್ಶಿಸಿದರು .

ಚಂದ್ರಮಂಡಲ ಸಮೃದ್ಧಿಯ ಸಂಕೇತ: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಲ್ಲೂರು ಜಾತ್ರೆ ಅತಿ ದೊಡ್ಡ ಜಾತ್ರೆಯಾಗಿದ್ದು ಮೊದಲ ದಿನದ ಚಂದ್ರಮಂಡಲವನ್ನು ನೋಡಲು ಕ್ಷೇತ್ರ ವ್ಯಾಪ್ತಿಯ ಸುತ್ತುಳು ಹಳ್ಳಿಗಳು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಚಾಮರಾಜನಗರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಮೈಸೂರು ,ಬೆಂಗಳೂರು, ಮಂಡ್ಯ, ರಾಮನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದಲೂ ಸಹ ಲಕ್ಷಾಂತರ ಭಕ್ತರು ಚಿಕ್ಕಲೂರು ಜಾತ್ರೆಗೆ ಭೇಟಿ ನೀಡಿ ಚಂದ್ರಮಂಡಲ ದಗದಗನೆ ಉರಿಯುವ ಜ್ಯೋತಿಯನ್ನು ನೋಡಿ ಸಿದ್ದಪ್ಪಾಜಿ ಭಕ್ತರು ಕಣ್ತುಂಬಿ ಕೊಂಡರು.

ದವಸ ಧಾನ್ಯ ಎಸೆಯುವ ಸಾಂಪ್ರದಾಯ:

ಚಿಕ್ಕಲೂರು ಜಾತ್ರೆಯಲ್ಲಿ ನೆರೆದಿದ್ದ ಭಕ್ತ ಸಮೂಹ ಹಾಗೂ ಹರಕೆ ಹೊತ್ತ ಭಕ್ತರು ಸೇರಿದಂತೆ ಸುತ್ತಮುತ್ತಲಿನ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ದವಸಧಾನ್ಯ ಹಾಗೂ ನಾಣ್ಯಗಳು ಸೇರಿದಂತೆ ಹಣ್ಣು, ಜವನ, ಹೂವನ್ನು ಚಂದ್ರಮಂಡಲಕ್ಕೆ ಎಸೆದು ಸಿದ್ದಪ್ಪಾಜಿಗೆ ಉಘೇ ಉಘೇ ಧರೆಗೆ ದೊಡ್ಡವರು, ಸಿದ್ದಪ್ಪಾಜಿ ಪಾದಕ್ಕೆ ಉಘೇ ಉಘೇ ಎಂದು ಘೋಷಣೆ ಕೂಗಿದರು .

ಚಂದ್ರಮಂಡಲದ ವಿಶೇಷವೇನು?:

ಪ್ರತಿ ವರ್ಷ ನಡೆಯುವ ಚಿಕ್ಕಲೂರು ಜಾತ್ರೆಯ ಮೊದಲ ದಿನದ ಚಂದ್ರಮಂಡಲೋತ್ಸವದಂದು ಪೀಠಾಧಿಪತಿ ಬಿ.ಎಸ್. ಜ್ಞಾನಾನಂದ ರಾಜ ಅರಸು ಕುಟುಂಬದವರು ಹುಣ್ಣಿಮೆಯ ರಾತ್ರಿ ಜ್ಯೋತಿ ಬೆಳಗಿಸಿದ ನಂತರ ಚಂದ್ರಮಂಡಲ ದಗದಗನೆ ಉರಿಯುವಾಗ ಯಾವ ದಿಕ್ಕಿಗೆ ಹೆಚ್ಚು ವಾಲುತ್ತದೆಯೋ ಆ ಭಾಗಕ್ಕೆ ಈ ವರ್ಷಹೆಚ್ಚು ಮಳೆ ಬೀಳುತ್ತದೆ. ಆ ಪ್ರದೇಶ ಸಮೃದ್ಧಿಯಾಗಿ ಇರುತ್ತದೆ ಎಂಬ ಸಿದ್ದಪ್ಪಾಜಿ ಭಕ್ತರ ಸಾಂಪ್ರದಾಯಿಕ ಅಪಾರವಾದ ನಂಬಿಕೆಯಾಗಿದೆ.

ಪೊಲೀಸ್ ಬಂದೋಬಸ್ತ್:

ಚಿಕ್ಕಲೂರು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ಲೋಪದೋಷಗಳು ಉಂಟಾಗದಿರಲಿ ಎಂದು ಪೊಲೀಸ್ ಇಲಾಖೆ ದೇವಾಲಯ ಹಾಗೂ ಮುಂಭಾಗ ಗೋಪುರ ಇನ್ನಿತರ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ ಕಲ್ಪಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು.