ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ‘ನಾವು ಪ್ರತಿಷ್ಠಾನ ಟ್ರಸ್ಟ್’ ಮತ್ತು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕು ಪೂರ್ವ ತಯಾರಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.ಕಾರ್ಯಾಗಾರದಲ್ಲಿ ಪ್ರತಿಷ್ಠಾನದ ಸ್ವಯಂ ಸೇವಕಿ ಬಿ.ಕೆ. ಕುಮಾರಿ ಮಾಹಿತಿ ನೀಡಿ, ಮಕ್ಕಳು ರಾಷ್ಟ್ರದ ಭವಿಷ್ಯತ್ತಿನ ಪ್ರಜೆಗಳಾಗಿರುವುದ್ದರಿಂದ ವಿದ್ಯಾರ್ಥಿಗಳಲ್ಲಿ ಮಕ್ಕಳ ಹಕ್ಕು, ಬಾಲ್ಯ ವಿವಾಹ, ಮಕ್ಕಳ ಶಿಕ್ಷಣದ ಹಕ್ಕು, ಬಾಲ ಕಾರ್ಮಿಕ ಪದ್ಧತಿ, ಶಾಲೆ ಬಿಟ್ಟ ಮಕ್ಕಳು ಮತ್ತೆ ಶಾಲೆಗೆ ಸೇರುವುದು ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇರುವ ನಿಟ್ಟಿನಲ್ಲಿ ನಾವು ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಕಾನೂನು ಕಾಯಿದೆಗಳ ಕುರಿತು ಮತ್ತು ಮಕ್ಕಳ ಹಕ್ಕು ಪೂರ್ವ ತಯಾರಿ ಅರಿವು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಮಕ್ಕಳು ಅರಿವು ಪಡೆದುಕೊಂಡು ತಮ್ಮ ಊರಿನಲ್ಲಿ ನಡೆಯುವ ಮಕ್ಕಳ ಗ್ರಾಮಸಭೆಗಳಲ್ಲಿ ಮಕ್ಕಳು ಪಾಲ್ಗೊಂಡು ಮಕ್ಕಳ ಸಮಸ್ಯೆ ಸೇರಿದಂತೆ ತಮ್ಮ ಊರಿನ ಕುಂದು ಕೊರತೆಗಳನ್ನು ಗ್ರಾಮಸಭೆಯಲ್ಲಿ ಹೇಳಿಕೊಳ್ಳಬಹುದು ಇದರಿಂದ ಗ್ರಾಮಸಭೆಗಳು ಪರಿಣಾತ್ಮಕವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದರು.ಶಾಲಾ ಮುಖ್ಯ ಶಿಕ್ಷಕ ಟಿ. ವಿಶ್ವನಾಥ್ ಮಾಹಿತಿ ನೀಡಿದರು. ಈ ಸಂದರ್ಭ ಶಾಲಾ ಶಿಕ್ಷಕಿಯರಾದ ಶಶಿಕಲಾ, ಪುಷ್ಪಾವತಿ, ಲಕ್ಷ್ಮೀ, ಅತಿಥಿ ಶಿಕ್ಷಕರಾದ ರೂಪಾ, ಸಂಧ್ಯಾ ಹಾಜರಿದ್ದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಮನಸ್ಥಿತಿ ಅರಿವುದು, ವ್ಯಕ್ತಿತ್ವ ವಿಕಾಸನಗೊಳಿಸುವುದು, ಆತ್ಮವಿಶ್ವಾಸ ಹೆಚ್ಚು ಮಾಡುವ ಉದ್ದೇಶದಿಂದ ಮಕ್ಕಳಿಂದ ಚಿತ್ರ ಬಿಡಿಸುವ ಚಟುವಟಿಕೆ ಹಮ್ಮಿಕೊಳ್ಳಲಾಯಿತು.