ಮಕ್ಕಳು ಉದ್ಯಾನದಲ್ಲಿರುವ ಮೊಗ್ಗುಗಳಂತೆ. ಅವರನ್ನು ತುಂಬಾ ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಪೋಷಿಸಬೇಕು ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಕ್ಕಳು ಉದ್ಯಾನದಲ್ಲಿರುವ ಮೊಗ್ಗುಗಳಂತೆ. ಅವರನ್ನು ತುಂಬಾ ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಪೋಷಿಸಬೇಕು ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಇಟಗಿ ಹೇಳಿದರು.

ಧಾರವಾಡದ ಸುವರ್ಣಾ ಸಾಂಸ್ಕೃತಿಕ ಸಮುಚ್ಚಯ ಸಭಾಭವನ ರಂಗಾಯಣದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಭಿವೃದ್ಧಿ ಯೋಜನೆ ಹುಬ್ಬಳ್ಳಿ-ಧಾರವಾಡ(ಶಹರ) ಧಾರವಾಡ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬಾಲವಿಕಾಸ ನಡಿಗೆ ಪಾಲಕರ ಕಡೆಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರೀತಿ, ಕಾಳಜಿ ಮತ್ತು ಸಂಸ್ಕಾರದೊಂದಿಗೆ ಪೋಷಿಸಿದರೆ ಉತ್ತಮ ವ್ಯಕ್ತಿತ್ವ ಬೆಳೆಸಬಹುದು ಎಂದು ಸಂಸ್ಕೃತ ಶ್ಲೋಕಗಳು ಹಾಗೂ ಉದಾಹರಣೆಗಳ ಮೂಲಕ ವಿವರಿಸಿದರು.ಕರ್ನಾಟಕ ಬಾಲವಿಕಾಸ ಅಕಾಡೆಮಿ ಜಂಟಿ ನಿರ್ದೇಶಕರಾದ ಅಕ್ಕಮಹಾದೇವಿ ಕೆ.ಎಚ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಬಾಲವಿಕಾಸ ನಡಿಗೆ ಪಾಲಕರ ಕಡೆಗೆ ಕಾರ್ಯಕ್ರಮವನ್ನು ರಾಜ್ಯದ 6 ಜಿಲ್ಲೆಗಳಲ್ಲಿ ಹೊಮ್ಮಿಕೊಂಡಿದ್ದು, ತರಬೇತಿಯ ಗುರಿ ಮತ್ತು ಉದೇಶಗಳ ಕುರಿತು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ.ಎಚ್.ಎಚ್.ಕುಕನೂರ ಮಾತನಾಡಿ, ಪೋಕ್ಷೋ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಇಲಾಖೆಯು ಅಕ್ಕಪಡೆ ಕಾರ್ಯನಿರ್ವಹಿಸುತ್ತಿರುವ ಕುರಿತು ಮಾಹಿತಿ ನೀಡಿದರು. ಸಂಕಷ್ಟಕ್ಕೊಳಗಾದ ಮಹಿಳೆಯರು ಹಾಗೂ ಮಕ್ಕಳು ಸಹಾಯ ಪಡೆಯಬೇಕು ಎಂದು ಕೋರಿದರು.ಧಾರವಾಡ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಎಸ್.ಎಸ್ ಕೆಳದಿಮಠ ಅವರು ಪ್ರಸ್ತುತ ಕಾಲಮಾನದಲ್ಲಿ ಮಕ್ಕಳ ಪೋಷಣೆಯಲ್ಲಿ ಪಾಲಕರ ಜವಾಬ್ದಾರಿಗಳ ಕುರಿತು ತಿಳಿಸಿದರು.ಕಾರ್ಯಕ್ರಮದಲ್ಲಿ ಪಾಲಕರಿಗೆ ಮಕ್ಕಳ ಸಮಗ್ರ ಬೆಳವಣಿಗೆ, ಸುರಕ್ಷತೆ ಹಾಗೂ ಸಂಸ್ಕಾರಯುತ ಜೀವನ ರೂಪಿಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ.ಕಮಲವ್ವ ಬೈಲೂರ, ರಾಮಕೃಷ್ಣ ಸದಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ(ಗ್ರಾಮೀಣ) ಹಾಗೂ ಸಂಪನ್ಮೂಲ ವ್ಯಕ್ತಿ ಡಾ.ಸುರೇಶ ಕುಲಕರ್ಣಿ, ಡಾ.ಸ್ವಪ್ನಾ ಪಾಂಡುರಂಗಿ, ಭರತಕುಮಾರ ಚಂದನಕರ, ನಂದಪ್ಪಗೌರ ದ್ಯಾಪೂರ ಹಾಜರಿದ್ದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ(ಶಹರ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನೀತಾ ಪಾಟೀಲ ಹಾಗೂ ಧಾರವಾಡ(ಗ್ರಾಮೀಣ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಕುಂಬಾರ ಹಾಜರಿದ್ದರು.