ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಇಂದಿನ ಮಕ್ಕಳಿಗೆ ಶಿಕ್ಷಣ ಜೊತೆಗೆ ಬದುಕುವ ಕಲೆ, ಸಂಸ್ಕೃತಿ ಕಲಿಸಬೇಕಿದೆ. ಸರಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸುವ ಮೂಲಕ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ತಾಲೂಕಿನ ಮುತ್ತಲಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕಾಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರಕಾರಿ ಶಾಲೆಗಳು ಬದಲಾವಣೆಯಾಗಬೇಕಿದೆ. ನಮ್ಮ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ, ಇವುಗಳನ್ನು ಜನರಿಗೆ ಮಾಹಿತಿ ನೀಡಬೇಕು. ಸರಕಾರದ ಯೋಜನೆಗಳನ್ನು ಪ್ರತಿ ವಾರ್ಡ, ಓಣಿ, ಗ್ರಾಮೀಣ ಭಾಗಗಳಲ್ಲಿ ಅರಿವು ಮೂಡಿಸಬೇಕು. ಬಡವರಿಗೂ ಗುಣಮಟ್ಟದ ಶಿಕ್ಷಣ ಎಂಬ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಸ್ಲೂಲ್, ಪಿಎಂಶ್ರೀ ಶಾಲೆಯಲ್ಲಿ ಪೂರ್ವಪ್ರಾಥಮಿಕ ಶಾಲೆಯಲ್ಲಿ ಯುಕೆಪಿ, ಎಲ್ಕೆಜಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಾತಿ ಮಾಡಿಸಬೇಕು ಎಂದು ಮನವಿ ಮಾಡಿದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಜಿ. ಮಿರ್ಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ, ನಿವೃತ್ತ ಪ್ರಾಚಾರ್ಯ ಎಂ.ಎಫ್. ಕುರಿ, ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ, ನಿವೃತ್ತ ಅಭಿಯಂತರ ಎಸ್.ಎಸ್. ಮಾಳಗಿ ಮಾತನಾಡಿದರು. ವೇದಿಕೆಯ ಮೇಲೆ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಮಲ್ಲಪ್ಪ ಅಳ್ಳಿ, ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಎಂ.ಎನ್.ಸಿದ್ದಲಿಂಗಪ್ಪನ್ನವರ, ಕಾರ್ಯದರ್ಶಿ ರಾಚಣ್ಣ ಪಟ್ಟಣದ, ರಾಜ್ಯ ಪರಿಷತ್ ಸದಸ್ಯ ಎ.ಪಿ. ಮೇಟಿ, ಪಿಕೆಪಿಎಸ್ ಅಧ್ಯಕ್ಷ ಬಿ.ಡಿ.ಪೂಜಾರ, ಗುತ್ತಿಗೆದಾರ ರೇವಣಸಿದ್ದಪ್ಪ ನೋಟಗಾರ, ತಾಲೂಕು ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಹಾಂತೇಶ ನಾರಗಲ್, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್.ಹಳಗೇರಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಉಜ್ವಲ ಬಸರಿ, ಉಪಾಧ್ಯಕ್ಷ ಸಿ.ಎಂ.ಕಲ್ಲೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಂ.ಯತ್ನಟ್ಟಿ, ಶಿಕ್ಷಣ ಸಂಯೋಜಕರಾದ ಬಿ.ಟಿ.ಹಳ್ಳಿ, ಬಿ.ಕೆ. ಚಿಮಲ್, ವೈ.ಬಿ. ಚಲವಾದಿ, ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎಚ್.ಕೊನೇರಿ, ಸ್ಥಳೀಯ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎಸ್.ಎಸ್.ಗಾಣಿಗೇರ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವೈ.ಡಿ.ಮೆಣಸಿನಕಾಯಿ, ಯಮನಪ್ಪ ನೋಟಗಾರ, ಭರಮಣ್ಣ ಗೌಡರ ಸೇರಿದಂತೆ ಊರಿನ ಹಿರಿಯರು, ಪ್ರಮುಖರು ಇದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ ಸ್ವಾಗತಿಸಿದರು. ಸಹಶಿಕ್ಷಕಿ ಜಯಶ್ರೀ ಆಲೂರ ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ವಾಯ್.ಮರಿಯನ್ನವರ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಪಾಲಕರು, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಿಬ್ಬಂದಿಗಳು ಹಾಜರಿದ್ದರು.
ಬಾಕ್ಸ್-1;ಚಕ್ಕಡಿಯ ಮಕ್ಕಳ ಮೆರವಣಿಗೆ
ಇದಕ್ಕೂ ಮುಂಚೆ ಸಕಲ ವಾದ್ಯ ಮೇಳದೊಂದಿಗೆ ಮಕ್ಕಳನ್ನು ಚಕ್ಕಡಿಯಲ್ಲಿ ಕೂರಿಸಿ ಸ್ವತಃ ಶಾಸಕ ಚಿಮ್ಮನಕಟ್ಟಿ ಚಲಾಯಿಸಿದರು. ಕುಂಭ ಹೊತ್ತ ಮಹಿಳೆಯರು ಚಕ್ಕಡಿ, ಟ್ರ್ಯಾಕ್ಟರ್ ಮೂಲಕ ಶಾಲಾ ಮಕ್ಕಳ ಆಕರ್ಷಕ ಸ್ಲೋಗನ್ ಮೂಲಕ ಪಾಲಕರಿಗೆ ಶಾಲಾ ಪ್ರಾರಂಭ ಕಾರ್ಯಕ್ರಮದ ಮತ್ತು ಸರಕಾರದ ಯೋಜನೆಗಳ ಮಾಹಿತಿಯನ್ನು ಪ್ರದರ್ಶನ ಮಾಡಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇಡೀ ಗ್ರಾಮವೇ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಮೆರವಣಿಗೆಯುದ್ದಕ್ಕೂ ಹೂವು ಹಾಕುವ ಮೂಲಕ ಮಕ್ಕಳನ್ನು ಅದ್ಧೂರಿಯಾಗಿ ಶಾಲೆಗೆ ಬರಮಾಡಿಕೊಳ್ಳಲಾಯಿತು.