ಕೊಪ್ಪಳ: ಪಾಲಕರು ಮಕ್ಕಳನ್ನು ಓದಲು ಬಿಡಬೇಕು, ಅಂದಾಗ ಮಾತ್ರ ಅವರ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಎಸ್ಪಿ ರಾಮ್ ಎಲ್ ಅರಸಿದ್ದಿ ಹೇಳಿದರು.

ನಗರದ ಭಾಗ್ಯನಗರ ಪಪಂ ವಾರ್ಡ್ ನಂ.10 ನವನಗರದಲ್ಲಿ ಹನುಮ ಜಯಂತಿ ಅಂಗವಾಗಿ ಕೆಎಸ್ ಖಾಸಗಿ ಆಸ್ಪತ್ರೆಯಿಂದ ಉಚಿತ ವೈದ್ಯಕೀಯ ತಪಾಸಣೆ, ಭಾರತೀಯ ರೆಡ್ ಕ್ರಾಸ್ ವತಿಯಿಂದ ರಕ್ತದಾನ ಶಿಬಿರ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಲ್ಲ ಮಕ್ಕಳಲ್ಲಿ ಐಪಿಎಸ್ ಐಎಎಸ್ ಉನ್ನತ ಅಧಿಕಾರಿಗಳು ಆಗಬೇಕೇನ್ನುವ ಮನೋಭಾವನೆ ಬರಬೇಕು. ಚೆನ್ನಾಗಿ ಓದಿ ಸಾಧನೆ ಮಾಡಬೇಕು. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಬೇಕು. ಮುಂದೆ ಅದು ಫಲ ಕೊಡುತ್ತೆ. ಮಕ್ಕಳನ್ನು ಮುಂದೆ ಉನ್ನತ ಹುದ್ದೆಯಲ್ಲಿದ್ದಾಗ ತಂದೆ ತಾಯಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದರು.

ಇಂದಿನ ಪೀಳಿಗೆಯಲ್ಲಿ ಹನುಮ ಬೇರೆ, ಅಲ್ಲಾ ಬೇರೆ, ಕ್ರೈಸ್ತ ಬೇರೆ ಎನ್ನುವ ಭಾವನೆ ಇದೆ. ನಾನು ಪೊಲೀಸ್ ಆಗಿ ಹೇಳುವುದು ಇಷ್ಟೇ ನಮಗೆ ಎಲ್ಲ ದೇವರು ಒಂದೇ, ನಾವೆಲ್ಲರು ಭಾವೈಕ್ಯತೆಯಿಂದ ಒಂದಾಗಿ ಕಾರ್ಯಕ್ರಮ ಆಚರಿಸಬೇಕು. ಮೊದಲು ನಾವೆಲ್ಲರು ಮಾನವರು ಇದನ್ನು ಅರಿಯಬೇಕು. ದಾರಿ ತಪ್ಪುವ ಮಕ್ಕಳಿಗೆ ತಿಳಿವಳಿಕೆ ಹೇಳಬೇಕು. ಜಾತಿ ಧರ್ಮಮೀರಿ ಸಮಾನತೆಯಿಂದ ಬಾಳುವ ಶಿಕ್ಷಣ ನೀಡಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ವಾತಾವರಣ ಸೃಷ್ಟಿಸಬೇಕು ಎಂದು ಕಿವಿಮಾತು ಹೇಳಿದರು.

ಸಮಾಜ ಸೇವಕಿ ಗೀತಾ ಮುತ್ತಾಳ್ ಮಾತ್ನಾಡಿ, ನಾವು ಹನುಮ ನಾಡಿನಲ್ಲಿ ಜನಿಸಿದ್ದೇವೆ. ಹನುಮ ಜಯಂತಿಯಿಂದ ಉಚಿತ ವೈದ್ಯಕೀಯ ತಪಾಸಣೆ, ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಬಹಳ ಸಂತಸದ ವಿಷಯ. ಜಯಂತಿ ಮಾಡುವುದಷ್ಟೇ ಅಲ್ಲ, ಅವರ ಆದರ್ಶ ಅಳವಡಿಸಿಕೊಳ್ಳಬೇಕು.ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಒಳಿತು ಮಾಡಬೇಕು. ಬಡವರಿಗೆ ಸಹಾಯ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.


ಬಡಾವಣೆಯ ಸುಮಾರು 18 ಯುವಕರು ರಕ್ತದಾನ ಮಾಡಿದರು, 70ಕ್ಕೂ ಹೆಚ್ಚು ಜನರು ವೈದ್ಯಕೀಯ ತಪಾಸಣೆಗೆ ಒಳಪಟ್ಟರು. ಇನ್ನು ಸಂಜೆ ಹನುಮನ ತೊಟ್ಟಿಲು ಕಾರ್ಯಕ್ರಮ ಜರುಗಿತು ನಂತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಉಚಿತ ರಕ್ತದಾನ ಮಾಡಿದ ಯುವಕರಿಗೆ ಭಾರತೀಯ ರೆಡ್ ಕ್ರಾಸ್ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಯುವ ಮುಖಂಡ ಸಂತೋಷ ಹಾಗೂ ನವನಗರ ಶಾಲೆಯ ಮುಖ್ಯ ಶಿಕ್ಷಕಿ ದಾಕ್ಷಿಯಿಣಿ ಭಾಗವಹಿಸಿದ್ದರು. ನಾಗರಾಜ ನಿರೂಪಿಸಿ ಸ್ವಾಗತಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.