ನಿತ್ಯವೂ ಶಿಸ್ತಿನ ಶಿಪಾಯಿಗಳಂತೆ ತರಗತಿಯಲ್ಲಿ ಕುಳಿತು ಶಿಕ್ಷಕರು ಹೇಳಿದ್ದನ್ನು ಕೇಳುತ್ತಿದ್ದ ಮಕ್ಕಳು ಕೂಗಾಡುತ್ತಾ, ಕುಣಿದು ಕುಪ್ಪಳಿಸುತ್ತಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವಿಸ್ಮರಣೀಯ ಅನುಭವವನ್ನು ತಮ್ಮದಾಗಿಸಿಕೊಂಡರು.

ಕನ್ನಡಪ್ರಭ ವಾರ್ತೆ ಮೈಸೂರು

ರಂಗಾಂತರಂಗ ಮೈಸೂರು ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಚಿನ್ಮಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಮಕ್ಕಳ ರಂಗಭೂಮಿ ಕಾರ್ಯಾಗಾರದಲ್ಲಿ ಮಕ್ಕಳು ನಾನಾ ರಂಗ ಆಟಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿಶೇಷ ಅನುಭವ ಪಡೆದುಕೊಂಡರು.

ನಿತ್ಯವೂ ಶಾಲೆಯಲ್ಲಿ ಔಪಚಾರಿಕವಾಗಿ ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಮಕ್ಕಳು ಈ ದಿನ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಕಾರ್ಯಗಾರದಲ್ಲಿ ಹೇಳಿಕೊಟ್ಟ ರಂಗಗೀತೆ, ಭಾವಾಭಿನಯ, ರಂಗಾಟಗಳು, ಧ್ವನಿಗೆ ಬದಲಾವಣೆ, ನಾನಾ ಪಾತ್ರಗಳ ನಿರ್ವಹಣೆ ಸೇರಿದಂತೆ ನಾನಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ಶಾಲಾ ಮಕ್ಕಳು ರಂಗಭೂಮಿಯಿಂದಲೂ ನಮ್ಮಲ್ಲಿ ಪರಿವರ್ತನೆ ತಂದುಕೊಳ್ಳಲು ಸಾಧ್ಯವಿದೆ. ಈ ಅನೌಪಚಾರಿಕ ಕಲಿಕೆಯು ನಮ್ಮನ್ನು ಸಾಧನೆ ಕಡೆಗೆ ಕರೆದುಕೊಂಡು ಹೋಗುತ್ತದೆ. ಅನೇ ಕ ಸದ್ಗುಣಗಳನ್ನು ಕಲಿತುಕೊಳ್ಳಬಹುದು ಎಂಬುದನ್ನು ಅರಿತುಕೊಂಡರು.

ನಿತ್ಯವೂ ಶಿಸ್ತಿನ ಶಿಪಾಯಿಗಳಂತೆ ತರಗತಿಯಲ್ಲಿ ಕುಳಿತು ಶಿಕ್ಷಕರು ಹೇಳಿದ್ದನ್ನು ಕೇಳುತ್ತಿದ್ದ ಮಕ್ಕಳು ಕೂಗಾಡುತ್ತಾ, ಕುಣಿದು ಕುಪ್ಪಳಿಸುತ್ತಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವಿಸ್ಮರಣೀಯ ಅನುಭವವನ್ನು ತಮ್ಮದಾಗಿಸಿಕೊಂಡರು. ಈ ಕಾರ್ಯಾಗಾರದಲ್ಲಿ ರಂಗ ಪಠ್ಯ ಪರಿಪಾಠದಿಂದ ಮಕ್ಕಳ ಮನೋವಿಕಾಸ ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು.

ರಂಗಾಂತರಂಗ ಮೈಸೂರು ಸಂಸ್ಥಾಪಕ ಕೆ.ಎಂ. ಕೀರ್ತಿರಾಜ್ಮಾತನಾಡಿ, ರಂಗಭೂಮಿ ತರಬೇತಿ ಶಿಕ್ಷಣಕ್ಕೆ ಪೂರಕವಾಗಿದೆ. ಅಲ್ಲದೇ ಇದರಿಂದ ಮಾನವೀಯ ಮೌಲ್ಯ, ಪರಸ್ಪರ ಸಂಬಂಧ, ಸಮಯಪ್ರಜ್ಞೆ, ಧೈರ್ಯ, ಏಕಾಗ್ರತೆ, ಉತ್ತಮ ನಡವಳಿಕೆಗಳು ಮೈಗೂಡುತ್ತವೆ ಎಂದರು.

ಮಕ್ಕಳು ರಂಗಭೂಮಿಯಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗುತ್ತದೆ. ಆದ್ದರಿಂದ ಪೋಷಕರು ಶಿಕ್ಷಕರು ಮಕ್ಕಳನ್ನು ರಂಗ ಭೂಮಿಯ ತರಬೇತಿ ಶಿಬಿರಗಳಿಗೆ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಎಂದು ಮಕ್ಕಳಲ್ಲಿ ಪೋಷಕರು ಶಿಕ್ಷಕರಲ್ಲಿ ಅರಿವು ಮೂಡಿಸಿದರು.

ಬಳಿಕ ಮಕ್ಕಳಿಗೆ ಧ್ವನಿ ಮತ್ತು ಮಾತು, ರಂಗ ಆಟಗಳು, ಕಥೆ ಕನ್ನಡ ನಾಡು ನುಡಿ ಮತ್ತು ಮಕ್ಕಳ ರಂಗ ಭೂಮಿಯ ಬಗ್ಗೆ ಚಟುವಟಿಕೆಗಳನ್ನು ಮಾಡಿಸುವ ಮೂಲಕ ರಂಗಭೂಮಿಯ ರಸಾನುಭವದ ಪರಿಚಯಿಸಿದರು.

ಚಿನ್ಮಯ ವಿದ್ಯಾಲಯ ಕಾರ್ಯದರ್ಶಿ ಕೆ.ಎಸ್.ಎನ್. ಪ್ರಸಾದ್ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಂಗಾಂತರಂಗ ಮೈಸೂರು ಕಳೆದ ಐದು ವರ್ಷಗಳಿಂದ ಮಕ್ಕಳ ರಂಗ ಭೂಮಿಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಪ್ರತಿ ವರ್ಷ ಕಲರವ ಮಕ್ಕಳ ಸಾಂಸ್ಕೃತಿಕ ಬೇಸಿಗೆ ಶಿಬಿರ ಮತ್ತು ವಾರಾಂತ್ಯ ರಂಗ ತರಬೇತಿ ಶಿಬಿರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೂ ಉಚಿತವಾಗಿ ರಂಗ ತರಬೇತಿಯನ್ನು ಆಯೋಜಿಸುತ್ತಿದೆ. ಇದರಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಚಿನ್ಮಯ ವಿದ್ಯಾಲಯ ಪ್ರಾಂಶುಪಾಲೆ ಎಂ. ವಿದ್ಯಾ, ಪತ್ರಕರ್ತ ಬೀರೇಶ್ಕಬಿನಿ, ರಂಗಭೂಮಿ ಕಲಾವಿದ ಪುರುಷೋತ್ತಮ್ ಇತರರು ಇದ್ದರು.