ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪೋಷಕರ ಶ್ರಮ ವ್ಯರ್ಥವಾಗದಂತೆ ಮಕ್ಕಳು ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಪಟ್ಟಣದ ನಾಗೇಶ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಕೆ. ನಾಗೇಶ್ ಕಿವಿಮಾತು ಹೇಳಿದರು.ಪಟ್ಟಣದ ಜ್ಞಾನಸಾಗರ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಗುರುದೀಕ್ಷಾ ಸಮಾರಂಭ ಉದ್ಘಾಟಿಸಿ ಮಾತನಾಡಿ ಜ್ಞಾನವೆಂಬುದು ಅತ್ಯಂತ ಪ್ರಭಾವಶಾಲಿ ಅಸ್ತ್ರವಾಗಿದೆ. ಸಕಾಲದಲ್ಲಿ ಸೂಕ್ತವಾಗಿ ಅದನ್ನ ಬಳಕೆ ಮಾಡಬೇಕು ಎಂದರು. ನಿಮ್ಮ ಕಲಿಕಾ ಸಾಮರ್ಥ್ಯವನ್ನು ಪ್ರದರ್ಶಿಸುವ ಮೊದಲ ಅವಕಾಶ ಇದಾಗಿದೆ. ಪರೀಕ್ಷೆಯನ್ನು ಸಂಭ್ರಮಿಸಬೇಕು ಇತಿಹಾಸವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮುಂದಡಿಯಿಡಬೇಕು. ಆತ್ಮವಿಶ್ವಾಸದಿಂದ ಯಾವುದೇ ಪರೀಕ್ಷೆಯನ್ನು ಎದುರಿಸಿದರೆ ಗೆಲುವು ನಿಮ್ಮದಾಗುತ್ತದೆ. ಉತ್ತಮ ಆರೋಗ್ಯದತ್ತ ಗಮನವಿರಬೇಕು. ಪೋಷಕರು ಈ ನಿಟ್ಟಿನಲ್ಲಿ ಮಕ್ಕಳ ಕಾಳಜಿವಹಿಸಬೇಕು ಎಂದು ಹೇಳಿದರು.ಭಾರತದ ಪರಂಪರೆಯಲ್ಲಿ ಗುರುವಂದನೆವಾಗಿ ನಡೆದುಕೊಂಡು ಬಂದಿದ್ದು ಮೌಲ್ಯಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ಶಿಕ್ಷಣ ಎಂದರೆ ಕೇವಲ ಪಠ್ಯ ವಿಷಯಗಳನ್ನ ಅಭ್ಯಾಸ ಮಾಡುವುದಲ್ಲ ಅನೇಕ ಸಾಹಿತ್ಯ ಕೃತಿಗಳನ್ನ ನಿಮ್ಮ ಓದಿನೊಂದಿಗೆ ಕಲಿಯಬೇಕು. ನಮ್ಮ ಧರ್ಮ ಗ್ರಂಥಗಳಲ್ಲಿ ಬರುವ ಅನೇಕ ಸಂಗತಿಗಳು ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಭಾರತಿ ನಾಗೇಶ್, ಶಿಕ್ಷಣಾಧಿಕಾರಿ ಸುಜಾ ಫಿಲಿಪ್, ಆಡಳಿತ ಅಧಿಕಾರಿ ಫಿಲಿಪ್, ಉಪಪ್ರಾಂಶುಪಾಲ ಫಿರೋಜ್‌ ಖಾನ್, ವಿಶ್ವಸ್ಥ ಮಂಡಳಿಯ ಸದಸ್ಯರಾದ ಲಕ್ಷ್ಮೇಗೌಡ ಇದ್ದರು. ಎಲ್ಲ ಮಕ್ಕಳೂ ತಮ್ಮ ಪೋಷಕರಿಗೆ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ನೆರೆದಿದ್ದ ಪೋಷಕರು ಹಾಗೂ ಶಿಕ್ಷಕರು ಎಲ್ಲಾ ಮಕ್ಕಳಿಗೆ ಆರತಿ ಬೆಳಗಿ ಶುಭಕೋರಿದರು. ಶಾಲೆ ವತಿಯಿಂದ ಮಕ್ಕಳಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.