ತಾಲೂಕಿನ ಗ್ರಾಮೀಣ ಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಮರ್ಪಕ ಸೇವೆ ಇಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಜೀವವನ್ನು ಪಣಕ್ಕಿಟ್ಟು ಬಸ್ ಮೇಲೆ ಕುಳಿತು ಶಾಲೆಗೆ ತೆರಳುವಂತಹ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಗ್ರಾಮೀಣ ಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಮರ್ಪಕ ಸೇವೆ ಇಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಜೀವವನ್ನು ಪಣಕ್ಕಿಟ್ಟು ಬಸ್ ಮೇಲೆ ಕುಳಿತು ಶಾಲೆಗೆ ತೆರಳುವಂತಹ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.ಹನೂರು ತಾಲೂಕಿನ ಶಾಗ್ಯ, ಅಲಗಾಪುರ, ಬಂಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಹನೂರು, ಕೊಳ್ಳೇಗಾಲ, ಚಾಮರಾಜನಗರದ ಶಾಲಾ-ಕಾಲೇಜುಗಳಿಗೆ ತೆರಳುತ್ತಾರೆ. ಆದರೆ ಬೆಳಗಿನ ಶಾಲಾ ಅವಧಿಯ ಅಂದರೆ ಬೆಳಿಗ್ಗೆ 8.30ರಿಂದ 9.30ರ ನಡುವೆ ಕೇವಲ ಒಂದೇ ಒಂದು ಸರ್ಕಾರಿ ಬಸ್ ಇದೆ. ಆ ಬಸ್ ಶಾಗ್ಯ ಗ್ರಾಮದಿಂದಲೇ ಸಂಪೂರ್ಣ ಭರ್ತಿಯಾಗಿ ಬರುವುದರಿಂದ ಮುಂದಿನ ಗ್ರಾಮಗಳ ನಿಲ್ದಾಣಗಳಲ್ಲಿ ನಿಲ್ಲುವುದೇ ಇಲ್ಲ. ಅನಿವಾರ್ಯವಾಗಿ ವಿದ್ಯಾರ್ಥಿಗಳು ಖಾಸಗಿ ಬಸ್ಗಳನ್ನು ಅವಲಂಬಿಸಬೇಕಾಗಿದೆ. ಖಾಸಗಿ ಬಸ್ಗಳಲ್ಲೂ ವಿಪರೀತ ಜನದಟ್ಟಣೆ ಇದ್ದು, ಸ್ಥಳ ಸಿಗದ ವಿದ್ಯಾರ್ಥಿಗಳು ಬಸ್ನ ಟಾಪ್ ಮೇಲೆ ಕುಳಿತು ಪ್ರಯಾಣಿಸುವ ದೃಶ್ಯ ಸಾಮಾನ್ಯವಾಗಿದೆ.
ಇದು ಅತ್ಯಂತ ಅಪಾಯಕಾರಿಯಾಗಿದ್ದು, ಯಾವುದೇ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿ ಬಸ್ ಟಾಪ್ ಮೇಲೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ಬಿದ್ದು ಗಾಯಗೊಂಡ ಘಟನೆಗಳು ರಾಜ್ಯದ ಇತರೆಡೆ ನಡೆದಿವೆ. ಆದರೂ ಎಚ್ಚೆತ್ತುಕೊಳ್ಳದ ಸಾರಿಗೆ ಇಲಾಖೆ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ ಬಿಡಲು ಮುಂದಾಗುತ್ತಿಲ್ಲ.ಬೆಳಗಿನ ವೇಳೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ದಿನನಿತ್ಯ ವ್ಯಾಪಾರ-ವಹಿವಾಟು, ಕೂಲಿ ಕೆಲಸಕ್ಕೆ ಹೋಗುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಳಗ್ಗೆ 8ರಿಂದ 9 ಮತ್ತು ಸಂಜೆ 4.30ರಿಂದ5.30ಕ್ಕೆ ಹೆಚ್ಚುವರಿಯಾಗಿ ಎರಡು ಬಸ್ಗಳನ್ನು ಬಿಡಬೇಕು. ಜೊತೆಗೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು, ಪೋಷಕರು ಮತ್ತು ನಾಗರಿಕರು ಸಾರಿಗೆ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.