ಬುದ್ಧಿ ಹೇಳಿದ್ದಕ್ಕೆ ತಂದೆ ಉಸಿರು ನಿಲ್ಲಿಸಿದ ಮಕ್ಕಳು

| Published : May 15 2025, 01:48 AM IST

ಸಾರಾಂಶ

ಐಸ್‌ ಫ್ಯಾಕ್ಟರಿ ಮಾಲೀಕನ ಕೊಲೆಗೆ ದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು ಹಣಕ್ಕಾಗಿ ಹೆತ್ತ ಮಕ್ಕಳೇ ತಂದೆಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು 7 ಜನ ಆರೋಪಿಗಳನ್ನು ಬಂಧಿಸಲಾಗಿದ್ದು ಕೊಲೆ ವಿಚಾರವಾಗಿ ಸಂಬಂಧಿಗಳು ವ್ಯಕ್ತಪಡಿಸಿದ್ದ ಅನುಮಾನ ನಿಜವಾಗಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ಐಸ್‌ ಫ್ಯಾಕ್ಟರಿ ಮಾಲೀಕನ ಕೊಲೆಗೆ ದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು ಹಣಕ್ಕಾಗಿ ಹೆತ್ತ ಮಕ್ಕಳೇ ತಂದೆಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು 7 ಜನ ಆರೋಪಿಗಳನ್ನು ಬಂಧಿಸಲಾಗಿದ್ದು ಕೊಲೆ ವಿಚಾರವಾಗಿ ಸಂಬಂಧಿಗಳು ವ್ಯಕ್ತಪಡಿಸಿದ್ದ ಅನುಮಾನ ನಿಜವಾಗಿದೆ.

ಘಟನೆ ವಿವರ:

ಕುಣಿಗಲ್‌ ಪಟ್ಟಣದಲ್ಲಿ ವಾಸವಿದ್ದ ಐಸ್‌ ಫ್ಯಾಕ್ಟರಿ ಮಾಲೀಕ ನಾಗೇಶ್‌ ಭಾನುವಾರ ನಿದ್ರಾವಸ್ಥೆಯಲ್ಲಿಯೇ ಸಾವಿಗೀಡಾಗಿದ್ದರು. ಈ ಸಂಬಂಧ ಕುಣಿಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ನಡೆದಾಗ ನಾಗೇಶ ಮೈ ಮೇಲೆ ಗಾಯದ ಗುರುತುಗಳು ಹಾಗೂ ವಿದ್ಯುತ್ ಶಾಕ್‌ ನಿಂದ ಆದ ಗುರುತುಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ನಾಗೇಶ್‌ ಮಕ್ಕಳಾದ ಸೂರ್ಯ, ಅಪ್ರಾಪ್ತ ಮಗಳು, ಮಗಳ ಪ್ರಿಯಕರ ಸಂಜಯ (19) ಸಂಜಯ ಸ್ನೇಹಿತ ಧನುಷ್‌ (19) ಸೂರ್ಯನ ಸ್ನೇಹಿತರಾದ ಮನು, ಗಂಗಾಧರ ಗೌಡ, ಉಲ್ಲಾಸ ಸೇರಿ ಕೊಲೆ ಮಾಡಿರುವುದು ಪತ್ತೆಯಾಗಿದೆ.

ವಿದ್ಯುತ್‌ ಅಪಘಾತ ಎಂಬಂತೆ ಬಿಂಬಿಸಲು ಯತ್ನ

ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮಗಳು ಪ್ರೀತಿಸುತ್ತಿರುವ ವಿಷಯ ತಿಳಿದು ನಾಗೇಶ್‌ ಅವಳಿಗೆ ಬೈಯ್ದು ಬುದ್ಧಿವಾದ ಹೇಳಿದ್ದರು . ಜೊತೆಗೆ ಮಗ ಸಹ ಹಣವನ್ನು ಹೆಚ್ಚಾಗಿ ಖರ್ಚು ಮಾಡುತ್ತಿದ್ದರಿಂದ ಆ ಖರ್ಚಿಗೂ ಕಡಿವಾಣ ಹಾಕಿದ್ದರು. ಈ ವಿಷಯ ಕುಟುಂಬದಲ್ಲಿ ವಾದ ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಮಕ್ಕಳಿಬ್ಬರು ತಂದೆಯ ಕೊಲೆಗೆ ಸ್ಕೇಚ್‌ ಹಾಕಿದ್ದರು. ಇದಕ್ಕೆ ಮಗಳ ಪ್ರಿಯಕರ ಆತನ ಸ್ನೇಹಿತರು ಹಾಗೂ ಮಗನ ಸ್ನೇಹಿತರು ಕೈ ಜೋಡಿಸಿ ಹುಲಿಯೂರು ದುರ್ಗ ಕ್ರಾಸ್‌ನಲ್ಲಿ ನಾಗೇಶ್‌ ಕಾರಿಗೆ ಡಿಕ್ಕಿ ಹೊಡೆಸಿ ಕೊಲೆ ಯತ್ನ ನಡೆಸಿದ್ದರು. ಅದು ವಿಫಲವಾಗಿತ್ತು. ಹೇಗಾದರೂ ಮಾಡಿ ಕೊಲೆ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಬಂದಿದ್ದ ಆರೋಪಿಗಳು ಶನಿವಾರ ಮಧ್ಯರಾತ್ರಿ ಐಸ್ ಫ್ಯಾಕ್ಟರಿಯಲ್ಲಿ ಮಲಗಿದ್ದ ನಾಗೇಶನ ಮೇಲೆ ದಾಳಿ ಮಾಡಿ ಮೊದಲು ಉಸಿರುಗಟ್ಟಿಸಿ ಎದೆ, ಹೊಟ್ಟೆ ಹಾಗೂ ಮರ್ಮಾಂಗಗಳಿಗೆ ಬಲವಾದ ಹೊಡೆತ ಹೊಡೆದು ಕೊಲೆ ಮಾಡಿದ್ದರು. ನಂತರ ಹಾಸಿಗೆಯಲ್ಲಿ ಮಲಗಿಸಿ ವಿದ್ಯುತ್ ಶಾಕ್ ಹೊಡೆದಿರುವ ರೀತಿ ಘಟನೆಯನ್ನು ಮರು ಸೃಷ್ಟಿ ಮಾಡಿ ಅಲ್ಲಿಂದ ಪರಾರಿಯಾಗಿ ಪ್ರಕರಣವನ್ನು ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದರು.

ಬೆಳಿಗ್ಗೆ ಫ್ಯಾಕ್ಟರಿಗೆ ಬಂದ ಕಾರ್ಮಿಕರು ಮಾಲೀಕನ ಶವವನ್ನು ಕಂಡು ಸ್ಥಳೀಯರಿಗೆ ಮತ್ತು ಪೊಲೀಸರಿಗೆ ತಿಳಿಸಿದ್ದರು. ಈ ವೇಳೆ ಮಗ ಸೂರ್ಯ ತಂದೆಯ ಶವದ ಮುಂದೆ ಕುಳಿತು ಅಳುವಂತೆ ನಾಟಕ ಮಾಡಿದ್ದ. ಈ ವೇಳೆ ಕೆಲವರು ಅನುಮಾನ ವ್ಯಕ್ತಪಡಿಸಿದಾಗ ಸೂರ್ಯ ಅಲ್ಲಿಂದ ಕಾಲ್ಕಿತ್ತಿದ್ದ. ಇದನ್ನು ನೋಡಿದ್ದ ಸ್ಥಳಿಯರು ಪೊಲೀಸರಿಗೆ ಈ ಎಲ್ಲ ವಿಚಾರ ತಿಳಿಸಿದ್ದರು. ಈ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ.