ಸಾರಾಂಶ
ಪ್ರತಿ ವಿದ್ಯಾರ್ಥಿಯು ಕಲಾ ತರಬೇತಿಯಲ್ಲಿ ರಚಿಸಿದ ಆರು ಕಲಾಕೃತಿ ಪ್ರದರ್ಶಿಸಿದರು. ವನ್ಯಜೀವಿ ಛಾಯಾಗ್ರಾಹಕ ಸಂಜೀವ ಘನಾಟೆ ಅವರಿಗೆ ಶ್ರೀನಿವಾಸ ಕಲಾಸಂಗಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಧಾರವಾಡ:
ಇಲ್ಲಿಯ ಶ್ರೀನಿವಾಸ ಆರ್ಟ್ ಗ್ಯಾಲರಿಯಲ್ಲಿ ಇತ್ತೀಚೆಗೆ ಶ್ರೀನಿವಾಸ ಕಲಾ ಸಂಗಮ ಮತ್ತು ಕಲಾಶ್ರೀ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಮಕ್ಕಳ ಚಿತ್ರಕಲಾ ಪ್ರದರ್ಶನ ನಡೆಯಿತು.ಪ್ರದರ್ಶನದಲ್ಲಿ 9 ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರತಿ ವಿದ್ಯಾರ್ಥಿಯು ಕಲಾ ತರಬೇತಿಯಲ್ಲಿ ರಚಿಸಿದ ಆರು ಕಲಾಕೃತಿ ಪ್ರದರ್ಶಿಸಿದರು. ವನ್ಯಜೀವಿ ಛಾಯಾಗ್ರಾಹಕ ಸಂಜೀವ ಘನಾಟೆ ಅವರಿಗೆ ಶ್ರೀನಿವಾಸ ಕಲಾಸಂಗಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರದರ್ಶನ ಉದ್ಘಾಟಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಎಫ್.ವಿ. ಚಿಕ್ಕಮಠ, ಚಿತ್ರಕಲೆಯು ಭೌತಿಕ ಬೆಳವಣಿಗೆಗೆ ಅತಿ ಮುಖ್ಯವಾಗಿದೆ. ಅಭ್ಯಾಸದೊಂದಿಗೆ ಚಿತ್ರಕಲೆಯನ್ನು ಮಕ್ಕಳು ರೂಢಿಸಿಕೊಳ್ಳಬೇಕು ಎಂದರು.ಕವಿವಿ ಮನೋವಿಜ್ಞಾನ ಉಪನ್ಯಾಸಕ ಡಾ. ಶಿವಕುಮಾರ ಕೆ., ಮಾತನಾಡಿ, ಮಕ್ಕಳು ಕಲಾಕೃತಿಗಳನ್ನು ಚೆನ್ನಾಗಿ ರಚಿಸಿದ್ದಾರೆ. ಮಗುವಿನ ಮಾನಸಿಕ ಬೆಳವಣಿಗೆ ಮತ್ತು ಸೃಜನಾತ್ಮಕತೆ ಉತ್ತಮವಾಗಲು ಚಿತ್ರಕಲೆಯು ತುಂಬಾ ಸಹಕಾರಿ ಆಗಿದೆ ಎಂದು ಹೇಳಿದರು.
ಹುಬ್ಬಳ್ಳಿಯ ಶ್ರೀನಿವಾಸ ಕಲಾ ಸಂಗಮದ ಸಂಸ್ಥಾಪಕ ಅಧ್ಯಕ್ಷ ರಾಜಶೇಖರ ಮಾಣಿಕ್ಯಂ ಮಾತನಾಡಿ, ಮಕ್ಕಳು ಚಿತ್ರಕಲೆಯನ್ನು ರೂಢಿಯಲ್ಲಿ ಇಟ್ಟುಕೊಳ್ಳುವುದರಿಂದ ಮಾನಸಿಕ ಆಯಾಸವು ಕಡಿಮೆಯಾಗುತ್ತದೆ ಎಂದರು.ಮಾಜಿ ಮೇಯರ್ ಶಿವು ಹಿರೇಮಠ, ಪಾಲಿಕೆ ಸದಸ್ಯೆ ಜ್ಯೋತಿ ಪಾಟೀಲ್, ಹಿರೇಮಲ್ಲೂರು ಪ್ರಾಂಶುಪಾಲ ಶಶಿಧರ ತೊಡಕರ ಇದ್ದರು. ವಿನಾಯಕ್ ಭಟ್ ವಂದಿಸಿದರು. ಸಂಗೀತಾ ಮಲ್ಲಣ್ಣವರ ನಿರೂಪಿಸಿದರು.