ಶಿಕ್ಷಕರ ಪರಿಶ್ರಮದಿಂದ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ ಎಂಬ ಸಂಗತಿ ಎಲ್ಲರ ಅರಿವಿನಲ್ಲಿದ್ದು, ಶಿಕ್ಷಕರು ಶಾಲೆಯ ಸಮಯಕ್ಕಿಂತ ಒಂದಷ್ಟು ಹೆಚ್ಚು ಸಮಯವನ್ನು ಮಕ್ಕಳ ಶೈಕ್ಷಣಿಕ ಹಿತಕ್ಕೆ ಮೀಸಲಾಗಿಡಿ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಶಿಕ್ಷಕರ ಪರಿಶ್ರಮದಿಂದ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ ಎಂಬ ಸಂಗತಿ ಎಲ್ಲರ ಅರಿವಿನಲ್ಲಿದ್ದು, ಶಿಕ್ಷಕರು ಶಾಲೆಯ ಸಮಯಕ್ಕಿಂತ ಒಂದಷ್ಟು ಹೆಚ್ಚು ಸಮಯವನ್ನು ಮಕ್ಕಳ ಶೈಕ್ಷಣಿಕ ಹಿತಕ್ಕೆ ಮೀಸಲಾಗಿಡಿ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಗುರುವಾರ ಇಲ್ಲಿನ ಎನ್‌ಸಿಜೆಸಿ ಕಾಲೇಜಿನಲ್ಲಿ ಹಾನಗಲ್ಲ ತಾಲೂಕಿನ 71 ಪ್ರೌಢಶಾಲಾ ಮುಖ್ಯ ಶಿಕ್ಷಕರಿಗಾಗಿ ಆಯೋಜಿಸಿದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಹಾನಗಲ್ಲ ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. ನೂರರಷ್ಟಾಗುವ ಜೊತೆಗೆ ಮತ್ತೆ ರಾಜ್ಯ ಪ್ರಥಮ ಸ್ಥಾನ ನಮ್ಮ ತಾಲೂಕಿನ ವಿದ್ಯಾರ್ಥಿಗಳ ಪಾಲಾಗಬೇಕು. ಸಮಯದ ಸಂಪೂರ್ಣ ಸದುಪಯೋಗ ಮತ್ತು ಮಕ್ಕಳಲ್ಲಿ ಓದಿನ ರುಚಿ ಬೆಳೆಸುವ ಕಾರ್ಯ ಶಿಕ್ಷಕರಿಂದಾಗಲಿ. ಅಲ್ಲದೆ ಮಕ್ಕಳೊಂದಿಗೆ ಹೆಚ್ಚು ಸಮಯ ಮೀಸಲಿಟ್ಟಲ್ಲಿ ಖಂಡಿತ ಈ ಬಾರಿ ಶೇ.100 ಫಲಿತಾಂಶ ನಿರೀಕ್ಷಿತ. ಶಿಕ್ಷಕರ ವೃತ್ತಿ ಮಕ್ಕಳ ಭವಿಷ್ಯಕ್ಕೆ ಉತ್ತಮ ಶೈಕ್ಷಣಿಕ ಯೋಜನೆ ಯೋಚನೆಗಳನ್ನು ಅಳವಡಿಸಿಕೊಳ್ಳುವಂತಾಗಲಿ. ಪರಿವರ್ತನ ಕಲಿಕಾ ಕೇಂದ್ರದಿಂದ ತಾಲೂಕಿನ 3580 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳ ಮಾರ್ಕ್ಸ ಸ್ಕೋರರ್ ಕೈಪಿಡಿಗಳನ್ನು ಒಂದು ವಾರದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಇದರ ಸದುಪಯೋಗದ ಮೂಲಕ ಈ ಬಾರಿ ಶೇ.ನೂರರಷ್ಟು ಫಲಿತಾಂಶಕ್ಕೆ ಸಹಕಾರಿಯಾಗಲಿ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಮಾತನಾಡಿ, ಈ ಬಾರಿ ಹಾನಗಲ್ಲ ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.ನೂರರಷ್ಟು ಸಾಧನೆಗೆ ಎಲ್ಲ ಸಿದ್ಧತೆ ನಡೆದಿದೆ. ಪ್ರತಿ ಗುರುವಾರ ಗುರುಗಳು ಬಂದರೂ ಶಾಲೆಗೆ ಕಾರ್ಯಕ್ರಮದ ಮೂಲಕ ಪ್ರೌಢಶಾಲೆಗಳ ಎಲ್ಲ ಶಿಕ್ಷಕರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಮಕ್ಕಳ ಹಾಗೂ ಪಾಲಕರೊಂದಿಗೆ ಚರ್ಚಿಸಿ ಫಲಿತಾಂಶ ಸುಧಾರಣೆಯಲ್ಲಿ ಎಲ್ಲರ ಪಾತ್ರದ ಬಗೆಗೆ ಅರಿವು ಮೂಡಿಸುತ್ತಿದ್ದಾರೆ. ಘಟಕ ಪರೀಕ್ಷೆ, ಮಿಶನ್-40 ತರಬೇತಿ ಕಾರ್ಯಾಗಾರ, ರಜೆಯಲ್ಲಿ ತರಗತಿಗಳನ್ನು ನಡೆಸುವುದು ಸೇರಿದಂತೆ ಹಲವು ಫಲಪ್ರದ ಯೋಜನೆಗಳನ್ನು ಫಲಿತಾಂಶಕ್ಕಾಗಿ ಸದುಪಯೋಗ ಮಾಡಿಕೊಳ್ಳಲಾಗಿದೆ. ಇವೆಲ್ಲವೂ ಫಲ ನೀಡುತ್ತವೆ ಎಂಬ ಭರವಸೆ ಇದೆ. ಹಾನಗಲ್ಲ ತಾಲೂಕಿನ ಶೈಕ್ಷಣಿಕ ಕಾಳಜಿ ಹೊಂದಿರುವ ಶಾಸಕ ಶ್ರೀನಿವಾಸ ಮಾನೆ ಅವರ ಕಳಕಳಿಯನ್ನು ಸಾರ್ಥಕ ಮಾಡೋಣ ಎಂದರು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ನೀಡಿದ ಮಾರಿಕಾಂಬಾ ಬಾಲಕಿಯರ ಪ್ರೌಢಶಾಲೆ ಕೂಸುನೂರ, ಸರ್ಕಾರಿ ಪ್ರೌಢಶಾಲೆ ಹಿರೇಬಾಸೂರು, ಮೊರಾರ್ಜಿದೇಸಾಯಿ ವಸತಿ ಪ್ರೌಢಶಾಲೆ ಯಳವಳ್ಳಿ, ಮಾರನಬೀಡ, ಆಕ್ಸಫರ್ಡ ಶಾಲೆ ಹಾನಗಲ್ಲ, ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹಾನಗಲ್ಲ ಶಾಲೆಗಳ ಮುಖ್ಯ ಶಿಕ್ಷಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ಸಮನ್ವಯಾಧಿಕಾರಿ ಡಿ.ನಾಗೇಂದ್ರಪ್ಪ, ವಿವಿಧ ಶಿಕ್ಷಕ ಸಂಘಟನೆಗಳ ಮುಖ್ಯಸ್ಥರಾದ ಶಿವಯೋಗಿ ನರೇಗಲ್ಲ, ಡಿ.ಡಿ. ಲಂಗೋಟಿ, ಎಸ್.ಆರ್. ದಾಸರ, ಬಿ. ಉಮೇಶ, ಸಾವಿತ್ರಿ ಉಪಾಧ್ಯಾಯ ವೇದಿಕೆಯಲ್ಲಿದ್ದರು.