ಕೇವಲ ಓದಿನತ್ತ ಗಮನಹರಿಸಿರುವ ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆಯನ್ನು ಈ ಶಿಬಿರದ ಮೂಲಕ ಧಾರವಾಡ ರಂಗಾಯಣ ಕಲ್ಪಿಸುತ್ತಿದೆ ಎಂದು ರಂಗಸಮಾಜ ಸದಸ್ಯ ಎಸ್. ಜಹಾಂಗೀರ್ ಅವರು ಹೇಳಿದರು.
ಧಾರವಾಡ: ಕೇವಲ ಓದಿನತ್ತ ಗಮನಹರಿಸಿರುವ ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆಯನ್ನು ಈ ಶಿಬಿರದ ಮೂಲಕ ಧಾರವಾಡ ರಂಗಾಯಣ ಕಲ್ಪಿಸುತ್ತಿದೆ ಎಂದು ರಂಗಸಮಾಜ ಸದಸ್ಯ ಎಸ್. ಜಹಾಂಗೀರ್ ಅವರು ಹೇಳಿದರು.
ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಧಾರವಾಡ ರಂಗಾಯಣ ಭಾನುವಾರದಿಂದ ಮೇ 3ರ ವರೆಗೆ “ಅಭಿನಯ-ಅಭಿವ್ಯಕ್ತಿ” ಧ್ಯೇಯವಾಕ್ಯದಡಿ ಹಮ್ಮಿಕೊಂಡಿರುವ ಚಿಣ್ಣರಮೇಳ-2026 ಉದ್ಘಾಟಿಸಿ ಮಾತನಾಡಿದರು.ಮಕ್ಕಳೆಲ್ಲರೂ ತಮ್ಮ ಪಠ್ಯವನ್ನು ಮರೆತು ಇಲ್ಲಿ ಕಲಿಸುವ ಸಂಗೀತ, ನೃತ್ಯ, ನಾಟಕ ಹಾಗೂ ವ್ಯಕ್ತಿತ್ವ ಗುರುತಿಸುವ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಮಕ್ಕಳು ಚಿಕ್ಕವರಿದ್ದಾಗಲೆ ಭವಿಷ್ಯದ ಕುರಿತು ಉತ್ತಮ ಮಾರ್ಗವನ್ನು ನೀಡಬೇಕು. ಶಿಬಿರದಲ್ಲಿ ಹಲವಾರು ಕಲೆಗಳ ಕುರಿತು, ವಿಚಾರ, ಪ್ರಸ್ತುತ ವಿದ್ಯಮಾನ ಸೇರಿದಂತೆ ಬೇರೆ ಬೇರೆ ವಿಷಯಗಳ ಕುರಿತು ಪರಿಣಿತರಿಂದ ಮಕ್ಕಳಿಗೆ ತಿಳಿಸುವುದರ ಮೂಲಕ ಅವರನ್ನು ಉತ್ತಮ ನಾಗರಿಕನ್ನಾಗಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ರಂಗಸಮಾಜ ಸದಸ್ಯರಾದ ಮಹಾಂತೇಶ ಗಜೇಂದ್ರಗಡ ಮಾತನಾಡಿ, ರಂಗಭೂಮಿ ಕಲಿಸುವ ಪಾಠವನ್ನು ಯಾವುದೇ ಶಾಲೆಗಳಲ್ಲಿ ಹೇಳಿಕೊಡುವುದಿಲ್ಲ. ಇಲ್ಲಿ ಕಲಿತ ಮಕ್ಕಳು ಎಲ್ಲರೊಂದಿಗೆ ಬೆರೆತು ಸಮಾಜದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಸಂಬಂಧಗಳ ಮಹತ್ವ ಹಾಗೂ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ರಂಗಭೂಮಿ ಪೂರಕ ವಾತಾವರಣವನ್ನು ಸೃಷ್ಟಿಸುತ್ತದೆ. ಮಕ್ಕಳೆಲ್ಲರೂ ಮೊಬೈಲ್ನ ಗೀಳು ಬಿಟ್ಟು ಶಿಬಿರದಲ್ಲಿ ಭಾಗವಹಿಸಿ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಸಿದರು.ಚಿಣ್ಣರಮೇಳದ ಸಂಚಾಲಕ ಅರುಣಕುಮಾರ ಮೇದಾರ, ತರಬೇತುದಾರ ರಾಜ್ ಕವಡೆನವರ, ಸಂಗೀತಗಾರ ಸುನಂದಾ ನಿಂಬನಗೌಡರ ಉಪಸ್ಥಿತರಿದ್ದರು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ವಿನೋದ ದಂಡಿನ ನಿರೂಪಿಸಿದರು. ನಂತರ “ಮರಳಿ ಮಹಾತ್ಮನೆಡೆಗೆ” ನಾಟಕ ಹಾಗೂ ರಂಗಸಂಗೀತವನ್ನು ರಂಗಾಯಣ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸಿದರು.