ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕಾಲ್ತುಳಿತದ ಸಾವಿನ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತರ ಅಮಾನತು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ರಾಮಸ್ವಾಮಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿದರು.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕಪ್ ವಿಜೇತ ಆರ್.ಸಿ.ಬಿ ತಂಡ ನೋಡಲು ಆಗಮಿಸಿದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಬೆಂಗಳೂರು ಪೊಲೀಸ್ ಕಮಿಷಿನರ್ ಅಮಾನತು ಮಾಡಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿದರು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತಮ್ಮ ಪ್ರಚಾರಕ್ಕೆ 11 ಮಂದಿ ಅಮಾಯಕರ ಬಲಿ ಪಡೆದ ಕೆಟ್ಟ ಸರ್ಕಾರ ಇದಾಗಿದೆ ಎಂದರು.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎ 1, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎ2, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎ3 ಆರೋಪಿಗಳಾಗಿ ಮಾಡಬೇಕು. ಅಲ್ಲದೇ, ಈ ಮೂವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಈ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ದುರಂತಕ್ಕೆ ಪೊಲೀಸ್ ಅಧಿಕಾರಿಗಳು ಹೊಣೆ ಎಂದು ಅಮಾನತ್ತು ಮಾಡಿದ್ದಾರೆ. ಅದೇ ಮೈಸೂರು ಮುಡಾ ಹಗರಣದಲ್ಲಿ ಅಧಿಕಾರಿಗಳ ಮೇಲೆ ಯಾಕೆ ಕ್ರಮ ಆಗಿಲ್ಲ ಎಂದು ಪ್ರಶ್ನಿಸಿದರು.ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳನ್ನು ತಮ್ಮ ಲಾಭ ಹಾಗೂ ಅನುಕೂಲಕ್ಕೆ ತಕ್ಕಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರ ಪ್ರಚಾರವಾದರೇ ಸಾಕು. ಅಧಿಕಾರಿಗಳು ಏನಾದರು ಇವರಿಗೆ ಏನು ಇಲ್ಲ. ಈ ರೀತಿಯ ನಡೆಯನ್ನು ನಾವು ಖಂಡಿಸುತ್ತೇವೆ ಎಂದು ಕಿಡಿಕಾರಿದರು. ವಿಧಾನಸೌಧದ ಬಳಿ ಕಾರ್ಯಕ್ರಮ ಮಾಡಲು ಅನುಮತಿ ಕೊಟ್ಟವರು ಯಾರು? ಒಂದೇ ದಿನ ಎರಡು ಕಡೆ ಕಾರ್ಯಕ್ರಮ ಮಾಡಿರುವುದು ಸರಿಯೇ? ಡಿಸಿಎಂ ಡಿ.ಕೆ. ಶಿವಕುಮಾರ ಅವರು ಆರ್.ಸಿ.ಬಿ ಬಾವುಟ ಹಿಡಿದು ತಮ್ಮ ಪ್ರಚಾರವನ್ನು ಚೆನ್ನಾಗಿ ಮಾಡಿಕೊಂಡಿದ್ದಾರೆ. 11 ಮಂದಿ ಸಾವಿಗೆ ನೇರ ಹೊಣೆ ಸಿಎಂ ಹಾಗೂ ಡಿಸಿಎಂ. ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸ್ ಇಲಾಖೆಯನ್ನೇ ಬಲಿ ಪಶುಮಾಡಿದ್ದಾರೆ ಎಂದು ಅವರು ದೂರಿದರು.ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಮಾತನಾಡಿ, ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು, ಕೋತಿ ತಿಂದು ಮೇಕೆ ಬಾಯಿಗೆ ಒರೆಸಿದಂತಾಗಿದೆ ಎಂದು ಟೀಕಿಸಿದರು.ಸಿಎಂ, ಡಿಸಿಎಂ, ಸೇರಿದಂತೆ ಸಚಿವರ ಮಕ್ಕಳು , ಮೊಮ್ಮಕ್ಕಳು ಐಪಿಎಲ್ ಕಪ್ ಗೆದ್ದ ಆರ್.ಸಿ.ಬಿ ಆಟಗಾರರ ಜತೆಗೆ ಫೋಟೋ ತೆಗೆದುಕೊಳ್ಳಲು ವಿಧಾನಸೌಧದ ಮುಂಭಾಗಕ್ಕೆ ಕರೆಸಿಕೊಂಡಿದ್ದಾರೆ. ಇವರ ಕುಟುಂಬ ಸದಸ್ಯರ ಫೋಟೋ ತೆಗೆಸಲು. ಹಾಗೂ ಇವರ ಪ್ರಚಾರಕ್ಕೆ11 ಮಂದಿ ಅಮಾಯಕರು ಬಲಿಯಾಗಿದ್ದಾರೆ. ಆರ್.ಸಿ.ಬಿ ಅಭಿಮಾನಿಗಳ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಆದ್ದರೀಗ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಆರ್. ರಘು ಕೌಟಿಲ್ಯ, ಬಿ.ವಿ. ಮಂಜುನಾಥ್, ಜೋಗಿ ಮಂಜು, ಅನಿಲ್ ಥಾಮಸ್, ಗಿರಿಧರ್, ಗೋಕುಲ್ ಗೋವರ್ಧನ್, ಕಿರಣ್ಗೌಡ, ಮಂಗಳಾ ಸೋಮಶೇಖರ್, ಕೇಬಲ್ ಮಹೇಶ್, ಮಾಜಿ ಮೇಯರ್ ಶಿವಕುಮಾರ್ , ಮಾಜಿ ಉಪ ಮೇಯರ್ ಶೈಲೇಂದ್ರ ಮೊದಲಾದವರು ಇದ್ದರು.