ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕಕ್ಕಡ ಮಾಸ ಕಳೆದು ಪರಂಪರೆಯಂತೆ ಒಂಬತ್ತು ದಿವಸಗಳ ನಂತರ ‘ಚಿಞ್ಯಾರ್ ಪತ್ತಾಂಡ ನಮ್ಮೆ’ (ಸಿಂಹ ಮಾಸದ ಆರಾಧನೆ) ಆ. 27ರಂದು ನಡೆಯಲಿದೆ.
ನಾಪೋಕ್ಲು : ಇಲ್ಲಿಗೆ ಸಮೀಪದ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕಕ್ಕಡ ಮಾಸ ಕಳೆದು ಪರಂಪರೆಯಂತೆ ಒಂಬತ್ತು ದಿವಸಗಳ ನಂತರ ‘ಚಿಞ್ಯಾರ್ ಪತ್ತಾಂಡ ನಮ್ಮೆ’ (ಸಿಂಹ ಮಾಸದ ಆರಾಧನೆ) ಆ. 27ರಂದು ನಡೆಯಲಿದೆ. ಕಕ್ಕಡ ತಿಂಗಳಿನಲ್ಲಿ ಸುಮಾರು ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ತುಲಾಭಾರ ಸೇವೆ ಉತ್ಸವಾದಿಗಳು ಪುನಃ ಆರಂಭಗೊಳ್ಳುವುದರೊಂದಿಗೆ ಕೊಡಗಿನ ಎಲ್ಲ ದೇವಸ್ಥಾನಗಳಲ್ಲಿ ಹಬ್ಬ ಹರಿದಿನಗಳು ಶುರುವಾಗಲು ಮುನ್ನುಡಿಯಾಗುವ ಈ ಸಿಂಹ ಮಾಸದ ಆರಾಧನೆ ಪ್ರಾಚೀನ ಕಾಲದ ಹಿನ್ನೆಲೆ ಹೊಂದಿದೆ. ಸಂಪ್ರದಾಯದಂತೆ ಆ ದಿನ ದೇವತಕ್ಕರಾದ ಪರದಂಡ ಕುಟುಂಬಸ್ಥರ ಐನ್ಮನೆಯಿಂದ ಹಾಗೂ ಪಾಡಿ ಕ್ಷೇತ್ರಕ್ಕೆ ಸಂಬಂಧಿಸಿದ ತಕ್ಕ ಕುಟುಂಬಸ್ಥರ ಐನ್ ಮನೆಗಳಿಂದ ಪಾಲ್ ಬಯ್ಯಾಡ್ ಆಗಮನವಾಗುತ್ತದೆ.
ದೇವತಕ್ಕರು ಇತರ ತಕ್ಕರೊಂದಿಗೆ ಕೂಡಿ ದೇವಸ್ಥಾನದ ಪಶ್ಚಿಮ ಭಾಗದಲ್ಲಿರುವ ಶ್ರೀ ಅಯ್ಯಪ್ಪ ಕಟ್ಟೆ ಎದುರು ಸಂಪ್ರದಾಯದಂತೆ ಬಿಳಿ ಕುಪ್ಯ ಧರಿಸಿ ‘ಪಚ್ಚಿ ಪರಿಯೊ’ ಅಥವಾ ಪಿಸುಮಾತಿನ ಪ್ರಾರ್ಥನೆಯೊಂದಿಗೆ ಪಾಡಿ ಕ್ಷೇತ್ರವಲ್ಲದೆ ಕೊಡಗಿನ ಎಲ್ಲ ದೇವಸ್ಥಾನಗಳಲ್ಲಿ ಹಬ್ಬ ಹರಿದಿನಗಳಿಗೆ ಚಾಲನೆ ದೊರೆಯಲಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಸ್ಥಾನದದೇವತಕ್ಕರಾದ ಪರದಂಡ ಕುಟುಂಬಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.