ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಜಿಲ್ಲಾ 18 ಕನ್ನಡ ಸಾಹಿತ್ಯ ಸಮ್ಮೇಳನ ಫೆ.17ರಂದು ವಿದ್ಯುಕ್ತವಾಗಿ ಆರಂಭವಾಗಲಿದ್ದು ಸರ್ವಾಧ್ಯಕ್ಷರಾಗಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ನಿಯೋಜನೆಗೊಂಡಿದ್ದಾರೆ.ಇಲ್ಲಿನ ಜಿಜಿ ಸಮುದಾಯ ಭವನದಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಉದ್ಘಾಟಿಸುವರು. ಶಾಸಕ ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಪಾಲ್ಗೊಳ್ಳುವರು.
ಕೆ.ಆರ್. ಸಂಧ್ಯಾರೆಡ್ಡಿ ಸಮ್ಮೇಳನಾಧ್ಯಕ್ಷ ನುಡಿಗಳನ್ನಾಡುವರು.ಮಧ್ಯಾಹ್ನ 2 ರಿಂದ ಆರಂಭವಾಗುವ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಭದ್ರಾ ಮೇಲ್ದಂಡೆ ಅನುಷ್ಠಾನ ಸಾಧ್ಯತೆ ಮತ್ತು ಸವಾಲುಗಳ ಕುರಿತು ಮಾಜಿ ಸಂಸದ ಪಿ.ಕೋದಂಡರಾಮಯ್ಯ ವಿಷಯ ಮಂಡಿಸುವರು. ಬಯಲು ಸೀಮೆ ಕೃಷಿ ಮತ್ತು ಜಾಗತಿಕ ತಾಪಮಾನ ಕುರಿತು ರೈತ ಮುಖಂಡ ಈಚಗಟ್ಟದ ಸಿದ್ದವೀರಪ್ಪ ವಿಷಯ ಮಂಡಿಸುವರು. ಸಿದ್ದಯ್ಯನ ಕೋಟೆ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸುವರು. ಪತ್ರಕರ್ತ ಎಂ.ಎನ್.ಅಹೋಬಲಪತಿ, ರೈತ ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವರೆ್ಡ್ಡಿ, ಸೋಮಗುದ್ದು ರಂಗಸ್ವಾಮಿ, ಕಸಾಪ ದಾವಣಗೆರೆ ಅಧ್ಯಕ್ಷ ವಾಮದೇವಪ್ಪ, ಚಿಕ್ಕಮಗಳೂರು ಅಧ್ಯಕ್ಷ ಸೂರಿ ಶ್ರೀನಿವಾಸ್ ಉಪಸ್ಥಿತರಿರುವರು. ಮಧ್ಯಾಹ್ನ ನಾಲ್ಕರಿಂದ ನಡೆಯುವ ಮೂರನೇ ಎರಡನೇ ಗೋಷ್ಠಿಯಲ್ಲಿ ಚಿತ್ರದುರ್ಗ ಜಿಲ್ಲೆ ಸಾಹಿತ್ಯದ ಅಸ್ಮಿತೆ ಕುರಿತು ಡಾ.ಗುರುನಾಥ, ಚಿತ್ರದುರ್ಗ ಜಿಲ್ಲೆ ಜಾನಪದ ಬುಡಕಟ್ಟು ಕುರಿತು ಡಾ.ಸ್ನೇಹ ವಿಷಯ ಮಂಡಿಸುವರು. ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಅಧ್ಯಕ್ಷತೆ ವಹಿಸುವರು.