ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹೃದಯಬೇನೆಯಿಂದ ನರಳಿ ನಡೆಯಲು ಸಾಧ್ಯವಾಗದೆ ನಿತ್ರಾಣಗೊಂಡಿದ್ದ ಯುವತಿಯೋರ್ವಳಿಗೆ ಚಿತ್ರದುರ್ಗದ ರಾಘವೇಂದ್ರ ಸ್ವಾಮೀಜಿ ಮಠಕ್ಕೆ ಆಗಮಿಸಿದ ವೇಳೆ ತ್ರಾಣ ಮರಳಿ ಬಂದಿರುವ ಘಟನೆ ಜರುಗಿದೆ ಎನ್ನಲಾಗಿದ್ದು ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ವೀಲ್ ಚೇರ್ನಲ್ಲಿ ಮಠಕ್ಕೆ ಬಂದಿದ್ದ ಯುವತಿ ತುಸು ಹೊತ್ತಿನಲ್ಲಿಯೇ ಮಠವನ್ನು ಮೂರು ಸುತ್ತಿ ಹಾಕಿದಳು ಎಂಬುದೇ ಹೈಲೈಟ್ಸ್. ಅರ್ಚಕ ಹುಲಿರಾಜ್ ಜೋಯಿಸ್ರು ಕೂಡಾ ಇದನ್ನು ಖಚಿತಪಡಿಸಿದ್ದಾರೆ. ಬೆಂಗಳೂರು ಯಲಹಂಕ ಮೂಲದ ಶ್ರೀಕಾಂತ್ ದಂಪತಿಗಳು ಗುರುವಾರ ರಾಯರ ಮಠಕ್ಕೆ ಬಂದಿದ್ದರು. ಮಠದ ಹೊರಗೆ ಎರಡು ವೀಲ್ ಚೇರ್ಗಳಿದ್ದುದನ್ನು ಗಮನಿಸಿ ಅವರ ಪ್ರಶ್ನಿಸಿದರೆ, ನಮ್ಮ ಇಬ್ಬರು ಮಕ್ಕಳು ವಿಕಲಚೇತನರು ಎಂದು ಪೋಷಕರು ಹೇಳಿದರು. ವೈದ್ಯಕೀಯ ಪರೀಕ್ಷೆಗೆ ಶಿರಸಿ ಕಡೆ ಹೋಗಿ ವಾಪಾಸ್ ರಾಯರ ಮಠಕ್ಕೆ ಭೇಟಿ ನೀಡಲು ಬಂದೆವು. ಮಕ್ಕಳಿಗೆ ವೀಲ್ ಚೇರ್ ತಂದು ಪ್ರದಕ್ಷಿಣೆ ಮಾಡಿ ಎಂದು ಶ್ರೀಕಾಂತ್ ಸೂಚನೆ ಕೊಟ್ಟರು. ಮಗನಿಗೆ ವೀಲ್ ಚೇರ್ ಬಿಟ್ಟು ಎದ್ದೇಳಲು ಆಗಲೇ ಇಲ್ಲ. ತಾಯಿಯ ಅನುಮತಿಯೊಂದಿಗೆ ವೀಲ್ ಚೇರ್ನಿಂದ ಎದ್ದು ಮಗಳು ರಾಯರ ಪ್ರದಕ್ಷಿಣೆ ಹಾಕಿದಳು. ಮಗಳು ನಡೆದುಕೊಂಡೇ ಬಂದಿದ್ದು ಪೋಷಕರಿಗೆ ತುಂಬಾ ಆಶ್ಚರ್ಯವಾಯಿತು ಎಂದು ಹುಲಿರಾಜ್ ಜೋಯೀಸ್ ತಿಳಿಸಿದರು.
ನನ್ನ ಮಗಳು ತೇಜಸ್ವನಿ ಓಡಾಡದೇ ವೀಲ್ ಚೇರ್ ಅವಲಂಬಿಸಿದ್ದಳು. ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದ ತೇಜಸ್ವಿನಿ, ಕಳೆದ ಆರು ತಿಂಗಳಿಂದ ರಕ್ತನಾಳದ ಸಮಸ್ಯೆಯಿಂದ ಕಾಲಿನ ಸ್ವಾಧೀನ ತಪ್ಪಿತ್ತು. ಓಡಾಡುತ್ತಲೇ ಇರಲಿಲ್ಲ. ಅವಳಿಗೆ ಹೃದಯ ಸಂಬಂಧಿ ಕಾಯಿಲೆ ಕೂಡ ಇದೆ. ಒಂದು ಹೆಜ್ಜೆ ಇಟ್ಟು ನಡೆಯೋದಕ್ಕೂ ಕಷ್ಟ ಅಗ್ತದೆ. ಎಲ್ಲಾ ವೈದ್ಯರು ಕೈ ಬಿಟ್ಟಾಗ ನಾವು ರಾಯರ ಮೊರೆ ಹೋದೆವು. ಚಿತ್ರದುರ್ಗದ ರಾಯರ ದರ್ಶನ ಮಾಡಿದಾಗ ನನ್ನ ಮಗಳು ಒಂದು ಸುತ್ತು ನಡೆದುಕೊಂಡೇ ಬಂದಳು. ಬಳಿಕ ಯಾವ ಆಯಾಸವೂ ಅವಳಿಗೆ ಆಗಲಿಲ್ಲ ಎಂದು ತಂದೆ ಶ್ರೀಕಾಂತ ಖುಷಿ ಪಟ್ಟಿದ್ದಾರೆ.ಇಬ್ಬರು ವಿಕಲಚೇತನರನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಪೋಷಕರು ಹಿಂದೊಮ್ಮೆ ಚಿಂತಿಸಿದ್ದರಂತೆ. ಆದರೆ ನಿಲುವು ಬದಲಾಯಿಸಿ ಈಗ 35 ವಿಕಲಚೇತನರನ್ನ ಒಳಗೊಂಡ ಒಂದು ಶಾಲೆ ಮಾಡಿದ್ದಾರೆ. ರಾಯರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಶಾಲೆ ತೆರೆದಿದ್ದಾರೆ. ನಿನ್ನೆ ನಡೆದ ಘಟನೆಯಿಂದಾಗಿ ಆ ಮಕ್ಕಳ ಬಗ್ಗೆ ಹೆಚ್ಚು ಆಸಕ್ತಿ ಸಂತೋಷವಾಗಿದೆ.