ಚಿತ್ತಾಪುರದಲ್ಲಿ ಆರೆಸ್ಸೆಸ್‌ ಪಥಸಂಚಲನ ಇಂದು

| Published : Nov 16 2025, 02:00 AM IST

ಸಾರಾಂಶ

ದೇಶ ಹಾಗೂ ರಾಜ್ಯದಲ್ಲಿ ಬಹು ಚರ್ಚಿತವಾಗಿ ಜಿದ್ದಾ ಜಿದ್ದಿಗೆ ಕಾರಣವಾಗಿದ್ದ ಅರ್‌ಎಸ್‌ಎಸ್ ಪಥಸಂಚಲನವು ಹೈಕೋರ್ಟ್‌ ಅನುಮತಿಯೊಂದಿಗೆ ನ.16ರಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಚಿತ್ತಾಪುರದಲ್ಲಿ ನಡೆಯಲಿದೆ. ಇದಕ್ಕಾಗಿ ತಾಲೂಕು ಆಡಳಿತ ಹಾಗೂ 1000 ಪೊಲೀಸರು ಭಾರೀ ಭದ್ರತೆ ಕಲ್ಪಿಸಲಿದ್ದಾರೆ. ಇದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ಆಯೋಜಿಸಲಾಗಿದೆ.

- 350 ಆರೆಸ್ಸೆಸ್ಸಿಗರಿಗೆ 1000 ಖಾಕಿ ಭದ್ರತೆ

- ಸಿಸಿಟೀವಿ ನಿಗಾದಲ್ಲಿ ನಡೆಯಲಿದೆ ಪರೇಡ್‌

--

1 ತಿಂಗಳ ಜಟಾಪಟಿ

- ಚಿತ್ತಾಪುರ ಶಾಸಕ, ಸಚಿವ ಪ್ರಿಯಾಂಕ್‌ ಖರ್ಗೆ ಆರೆಸ್ಸೆಸ್‌ ವಿರುದ್ಧ ಹೇಳಿಕೆ ನೀಡಿದ್ದರು

- ಇದರ ಬೆನ್ನಲ್ಲೇ ಅವರ ಕ್ಷೇತ್ರದಲ್ಲಿ ನ.19ಕ್ಕೆ ಆರೆಸ್ಸೆಸ್‌ ಪರೇಡ್‌ಗೆ ತೀರ್ಮಾನಿಸಿತ್ತು

- ಆದರೆ ಪಥಸಂಚಲನಕ್ಕೆ ಚಿತ್ತಾಪುರ ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿತ್ತು

- ಇದರ ವಿರುದ್ಧ ಕೋರ್ಟಿಗೆ ಹೋಗಿದ್ದ ಸಂಘ. ಕೊನೆಗೆ ಪರೇಡ್‌ಗೆ ಕೋರ್ಟ್ ಅಸ್ತು

=--- ಕನ್ನಡಪ್ರಭ ವಾರ್ತೆ ಚಿತ್ತಾಪುರ

ದೇಶ ಹಾಗೂ ರಾಜ್ಯದಲ್ಲಿ ಬಹು ಚರ್ಚಿತವಾಗಿ ಜಿದ್ದಾ ಜಿದ್ದಿಗೆ ಕಾರಣವಾಗಿದ್ದ ಅರ್‌ಎಸ್‌ಎಸ್ ಪಥಸಂಚಲನವು ಹೈಕೋರ್ಟ್‌ ಅನುಮತಿಯೊಂದಿಗೆ ನ.16ರಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಚಿತ್ತಾಪುರದಲ್ಲಿ ನಡೆಯಲಿದೆ. ಇದಕ್ಕಾಗಿ ತಾಲೂಕು ಆಡಳಿತ ಹಾಗೂ 1000 ಪೊಲೀಸರು ಭಾರೀ ಭದ್ರತೆ ಕಲ್ಪಿಸಲಿದ್ದಾರೆ. ಇದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ನಗರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಣ್ಗಾವಲು ಆಯೋಜಿಸಲಾಗಿದೆ.

ಹೆಚ್ಚು ಕಡಿಮೆ 1 ತಿಂಗಳ ವಾದ ಪ್ರತಿವಾದ, ಚರ್ಚೆ, ಶಾಂತಿ ಸಭೆ ನಡೆದು ಕೊನೆಗೂ ಹೈಕೋರ್ಟ್‌ ನ.16ರಂದು ಪಥ ಸಂಚಲನಕ್ಕೆ 10 ಷರತ್ತುಗಳೊಂದಿಗೆ ಒಪ್ಪಿಗೆ ಸೂಚಿಸಿತ್ತು. ಅದರಂತೆ 50 ಬ್ಯಾಂಡ್‌ ಸೆಟ್‌ನವರು ಸೇರಿ ಸ್ಥಳೀಯ 350 ಗಣ ವೇಷಧಾರಿಗಳು ಪಥ ಸಂಚಲನ ನಡೆಸಲು ಒಪ್ಪಿಗೆ ನೀಡಲಾಗಿದೆ. ಪಥ ಸಂಚಲನವನ್ನು ಭಾನುವಾರ ಮಧ್ಯಾಹ್ನ 3ರಿಂದ ಸಂಜೆ 5.30ರೊಳಗೆ ನಡೆಸಲು ಸೂಚಿಸಲಾಗಿದೆ.

1000 ಪೊಲೀಸರ ಭದ್ರತೆ:

ಯಾವುದೇ ಅಹಿತಕರ ಘಟನೆ ನಡೆಯದಂತೆ ಕಲಬುರಗಿ ಉಪ ಪೊಲಿಸ್ ಅಧೀಕ್ಷಕ ಮೇಹೇಶ ಮೇಘಣ್ಣವರ ಹಾಗೂ ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಪಥಸಂಚಲನಕ್ಕೆ ಯಾವುದೇ ಅಡೆ ತಡೆ ಸೇರಿದಂತೆ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ.

ಕಲಬುರಗಿ, ಬೀದರ್‌, ಯಾದಗಿರಿ ಜಿಲ್ಲೆಯಿಂದ ಪೊಲೀಸ್ ಪಡೆ ಬಂದಿದ್ದು ಒಬ್ಬ ಉಪ ಪೊಲೀಸ್ ಅಧಿಕ್ಷಕ, ೫-ಡಿವೈಎಸ್‌ಪಿ, ೧೮ ಸಿಪಿಐ, ೫೧ ಪಿಎಸ್‌ಐ, ೧೧೦ ಎಎಸ್‌ಐ, ೫೦೧ ಮುಖ್ಯ ಪೇದೆಗಳು, ೬೮೬ ಪೊಲೀಸರು ಮತ್ತು ೨೫೦ ಹೋಮ್‌ಗಾರ್ಡ್‌, ೮ ಕೆಎಸ್‌ಅರ್‌ಪಿ ತುಕ್ಕಡಿ, ಒಂದು ಬಿಡಿಡಿಎಸ್, ಒಂದು ಎಎಸ್‌ಸಿ ತಂಡವನ್ನು ನಿಯೋಜಿಸಲಾಗಿದೆ. ಅಲ್ಲದೇ ಪಥಸಂಚಲನ ನಡೆಯುವ ಮಾರ್ಗದುದ್ದಕ್ಕೂ ೫೨ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ.

ಅ.19ರಿಂದ ಆರಂಭವಾಗದ್ದ ಜಟಾಪಟಿ:ಅ.19ರಂದು ಪಥ ಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್‌ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ಭದ್ರತೆ ಕಾರಣವೊಡ್ಡಿ ಅನುಮತಿ ನಿರಾಕರಿಸಿದ್ದರು. ಬಳಿಕ ಮತ್ತೊಂದು ದಿನಾಂಕ ನಿಗದಿ ಮಾಡಿ ಆರ್‌ಎಸ್‌ಎಸ್‌ ಅರ್ಜಿ ಸಲ್ಲಿಸಿತ್ತು. ಆಗ ದಲಿತ ಪರ ಸಂಘಟನೆಗಳು ಸೇರಿ ತಮಗೂ ಅನುಮತಿ ನೀಡುವಂತೆ ಕೋರಿದ್ದವು. ಬಳಿಕ ಈ ಪ್ರಕರಣ ಹೈಕೋರ್ಟ್‌ ಕಲಬುರಗಿ ಪೀಠದ ಮೆಟ್ಟಿಲೇರಿತ್ತು.

ಪಥ ಸಂಚಲನದ ಐತಿಹಾಸಿಕ ತೀರ್ಪು ನೀಡಲು ನಿರ್ಧರಿಸಿದ್ದ ಹೈಕೋರ್ಟ್‌, ಶಾಂತಿ ಸಭೆ ನಡೆಸಲು ಜಿಲ್ಲಾಧಿಕಾರಿಗೆ ಸೂಚಿಸಿತ್ತು. ಅದಂತೆ ನ.30ರಂದು ನಡೆದ ಸಭೆ ಗೊಂದಲಲ್ಲಿ ಮುಗಿದಿತ್ತು. ಬಳಿಕ ಹೈಕೋರ್ಟ್‌ ಅಡ್ವೋಕೆಟ್‌ ಜನರಲ್‌, ಆರ್‌ಎಸ್‌ಎಸ್‌ ಪರ ವಕೀಲರಿಗೆ ಸಭೆ ನಡೆಸಿ ತೀರ್ಮಾನಕ್ಕೆ ಬರಲು ಸೂಚಿಸಿದ್ದರು.

ಅದರಂತೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದ ಅಡ್ವೋಕೆಟ್‌ ಜನಲರ್‌ ಅವರಿಗೆ ನ.13 ಅಥವಾ ನ.16ಕ್ಕೆ ಪಥ ಸಂಚಲನ ನಡೆಸಲು ಅನುಮತಿ ನೀಡುವಂತೆ ಆರ್‌ಎಸ್‌ಎಸ್‌ ಮನವಿ ಮಾಡಿತ್ತು. ಬಳಿಕ ಈ ವಿಚಾರವನ್ನು ಹೈಕೋರ್ಟ್‌ಗೆ ತಿಳಿಸಲಾಗಿತ್ತು. ಅದರಂತೆ ಹೈಕೋರ್ಟ್‌ ಹಲವು ಷರತ್ತು ವಿಧಿಸಿ ಅನುಮತಿ ನೀಡಿತ್ತು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ವಿಷಯ ಸುಖಾಂತ್ಯಗೊಂಡಿದೆ.