ಸಾರಾಂಶ
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಭಾನುವಾರ ಬ್ರಹ್ಮಾವರ ಸಮೀಪದ ಅಪ್ಪ- ಅಮ್ಮ ಅನಾಥಾಶ್ರಮದ ನಿವಾಸಿಗಳೊಂದಿಗೆ ಕ್ರಿಸ್ಮಸ್ ಆಚರಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಭಾನುವಾರ ಬ್ರಹ್ಮಾವರ ಸಮೀಪದ ಅಪ್ಪ- ಅಮ್ಮ ಅನಾಥಾಶ್ರಮದ ನಿವಾಸಿಗಳೊಂದಿಗೆ ಕ್ರಿಸ್ಮಸ್ ಆಚರಣೆ ಮಾಡಲಾಯಿತು.ಕಾರ್ಯಕ್ರಮವನ್ನು ಕೇಕ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಸಂತೋಷ್ ಕರ್ನೆಲೀಯೋ ಮಾತನಾಡಿ, ಯೇಸು ಕ್ರಿಸ್ತರು ಈ ಧರೆಗೆ ಮಾನವರಾಗಿ ಜನಿಸಿ ಅಶಕ್ತರು, ನೊವುಂಡವರ ಏಳಿಗೆಗಾಗಿ ತನ್ನ ಜೀವನದ ಕೊನೆ ವರೆಗೂ ಶ್ರಮಿಸಿದರು. ಕ್ರಿಸ್ಮಸ್ ಹಬ್ಬ ನಮ್ಮಲ್ಲಿ ಇರುವುದನ್ನು ಪರರೊಂದಿಗೆ ಹಂಚಿಕೊಂಡು ಹಬ್ಬದ ಆಚರಣೆ ಮಾಡುವ ಸಂದೇಶವನ್ನು ಸಾರುತ್ತದೆ. ಪರಸ್ಪರ ಸಂತೋಷವನ್ನು ಹಂಚುವ ಮೂಲಕ ಹಬ್ಬವನ್ನು ಆಚರಿಸಿದಾಗ ಕ್ರಿಸ್ಮಸ್ ಹಬ್ಬಕ್ಕೆ ನಿಜವಾದ ಅರ್ಥ ಬರಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಸಂಘಟನೆ ಅನಾಥರಾಗಿರುವ ವೃದ್ಧರು ತಮ್ಮವರೆಂಬ ಭಾವನೆಯೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದೆ ಎಂದರು.ಸಂಘಟನೆಯ ವತಿಯಿಂದ ಆಶ್ರಮ ವಾಸಿಗಳ ಊಟದ ಖರ್ಚಿಗಾಗಿ 20,000 ರು.ಗಳ ಧನ ಸಹಾಯವನ್ನು ಹಸ್ತಾಂತರಿಸಲಾಯಿತು. ಹಬ್ಬದ ಆಚರಣೆಯ ಪ್ರಯುಕ್ತ ಆಶ್ರಮವಾಸಿಗಳಿಗೆ ವಿಶೇಷ ಊಟದ ವ್ಯವಸ್ಥೆಯನ್ನು ಮಾಡಲಾಯಿತು.ಈ ವೇಳೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶದ ನಿಯೋಜಿತ ಅಧ್ಯಕ್ಷ ರೋನಾಲ್ಡ್ ಡಿಆಲ್ಮೇಡಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾಜಿ ಅಧ್ಯಕ್ಷ ವಲೇರಿಯನ್ ಫರ್ನಾಂಡಿಸ್, ಪದಾಧಿಕಾರಿ ಶಾಂತಿ ಪಿರೇರಾ, ಕಲ್ಯಾಣಪುರ ವಲಯಾಧ್ಯಕ್ಷೆ ರೋಜಿ ಕ್ವಾಡ್ರಸ್, ಬ್ರಹ್ಮಾವರ ಘಟಕಾಧ್ಯಕ್ಷ ಜೊಯೇಲ್ ಡಿಆಲ್ಮೇಡಾ, ಕೋಶಾಧಿಕಾರಿ ಸ್ಟ್ಯಾನಿ ಡಿಸೋಜ ಉಪಸ್ಥಿತರಿದ್ದರು.