ಬಿಜೈ ಭಾರತ್ ಸಿನಿಮಾಸ್ನಲ್ಲಿ ನಡೆಯಲಿರುವ 3 ದಿನಗಳ ಕರಾವಳಿ ಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮ
ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಸಿನಿಮಾಗಳಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದ್ದು, ಪ್ರೇಕ್ಷಕರ ಆಸಕ್ತಿಗೆ ಪೂರಕವಾಗಿ ಇನ್ನಷ್ಟು ಚಿತ್ರಮಂದಿರಗಳು ಹೆಚ್ಚಬೇಕಿವೆ ಎಂದು ಚಿತ್ರನಟ ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.ಕರಾವಳಿ ಉತ್ಸವದ ಅಂಗವಾಗಿ ನಗರದ ಬಿಜೈ ಭಾರತ್ ಸಿನಿಮಾಸ್ನಲ್ಲಿ ನಡೆಯಲಿರುವ 3 ದಿನಗಳ ಕರಾವಳಿ ಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇತ್ತೀಚೆಗೆ ಕರಾವಳಿ ಜಿಲ್ಲೆಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಚಿತ್ರೋದ್ಯಮಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ. ಪ್ರೇಕ್ಷಕರ ಬೆಂಬಲದಿಂದ ಭವಿಷ್ಯದಲ್ಲಿ ಒಳ್ಳೆಯ ಕಥೆ, ಉತ್ತಮ ದೃಶ್ಯಗಳ ಸಿನಿಮಾಗಳು ಮೂಡಿಬರಲಿವೆ. ಈ ನಿಟ್ಟಿನಲ್ಲಿ ಸರ್ಕಾರ ಸ್ಪಂದಿಸಬೇಕು ಎಂದು ಅವರು ಹೇಳಿದರು.
ಕರಾವಳಿ ಚಲನಚಿತ್ರೋತ್ಸವವನ್ನು ಜಿಲ್ಲಾಡಳಿತ ಆಯೋಜಿಸಿರುವುದು ಶ್ಲಾಘನೀಯ. ಇದನ್ನು ಪ್ರತಿವರ್ಷ ನಿರಂತರವಾಗಿ ನಡೆಸಿಕೊಂಡು ಬರಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಚಿತ್ರ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ ಮಾತನಾಡಿ, ಕರಾವಳಿ ಚಲನಚಿತ್ರೋತ್ಸವ ಅಂಗವಾಗಿ 5 ಭಾಷೆಗಳ ಚಲನಚಿತ್ರಗಳನ್ನು ಒಂದೇ ಸೂರಿನಡಿ ನೋಡುವ ಅವಕಾಶ ಕಲ್ಪಿಸಿರುವುದು ಸಂತೋಷದ ಸಂಗತಿ. ಪ್ರಾದೇಶಿಕ ಭಾಷೆಯ ಚಲನಚಿತ್ರಗಳಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಧನರಾಜ್, ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ, ಟಿ.ಎ ಶ್ರೀನಿವಾಸ್, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ಯತೀಶ್ ಬೈಕಂಪಾಡಿ, ತಮ ಲಕ್ಷ್ಮಣ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್, ಬಾಲಕೃಷ್ಣ ಶೆಟ್ಟಿ ಮತ್ತಿತರರು ಇದ್ದರು.ಉದ್ಘಾಟನೆಯ ಅಂಗವಾಗಿ ತುಳು ಚಲನಚಿತ್ರ ‘ಏಸ’ ಪ್ರದರ್ಶನ ನಡೆಯಿತು.