ಸಿನಿಮಾ ಭಾವನಾತ್ಮಕ ಜತೆಗೆ ವಿಜ್ಞಾನವೂ ಹೌದು: ಚಿತ್ರ ನಿರ್ದೇಶಕ ಡಿ.ಸತ್ಯಪ್ರಕಾಶ್

| Published : Oct 07 2024, 01:32 AM IST

ಸಿನಿಮಾ ಭಾವನಾತ್ಮಕ ಜತೆಗೆ ವಿಜ್ಞಾನವೂ ಹೌದು: ಚಿತ್ರ ನಿರ್ದೇಶಕ ಡಿ.ಸತ್ಯಪ್ರಕಾಶ್
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ನಗರದಲ್ಲಿ ದಸರಾ ಚಲನಚಿತ್ರೋತ್ಸವದ ಭಾಗವಾಗಿ ಆಯೋಜಿಸಿದ್ದ ಚಲನಚಿತ್ರ ರಸ ಗ್ರಹಣ ಕಾರ್ಯಕ್ರಮದಲ್ಲಿ ಡಿ. ಸತ್ಯಪ್ರಕಾಶ್, ಶ್ರೀಶ ಕೂದುವಳ್ಳಿ, ಗುರುಪ್ರಸಾದ ಕಾಶಿ ಹಾಗೂ ನಗರದ ಛಾಯಾಗ್ರಾಹಕರಾದ ಶಿವಮೊಗ್ಗ ನಾಗರಾಜ್, ಪ್ರದೀಪ್ ಕುಮಾರ್, ವಾಸುಕಿ ಕುಮಾರ್‌ರವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಿನಿಮಾ ಎನ್ನುವುದು ಮನರಂಜನೆಯ ಮೂಲಕ ಭಾವನೆಗಳ ಜೊತೆಗೆ ಆಟವಾಡುತ್ತಿದೆಯಾದರೂ, ಅದರಲ್ಲಿರುವ ವಿಜ್ಞಾನವನ್ನು ಮರೆಯುವಂತಿಲ್ಲ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಡಿ.ಸತ್ಯಪ್ರಕಾಶ್ ಹೇಳಿದರು.

ಶಿವಮೊಗ್ಗ ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜಗಳ ವತಿಯಿಂದ ಆಯೋಜಿಸಲಾದ ದಸರಾ ಚಲನಚಿತ್ರೋತ್ಸವದ ಭಾಗವಾಗಿ ಆಯೋಜಿಸಿದ್ದ ಚಲನಚಿತ್ರ ರಸ ಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತೀ ಚಲನಚಿತ್ರದಲ್ಲಿ ವೈಜ್ಞಾನಿಕ ಅಂಶಗಳು ಇರುವುದರಿಂದಲೇ ಅದು ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗಿದೆ ಎಂದರು.

ಯಾವುದೇ ಸಿನಿಮಾ ಆಗಲಿ, ಅದು ಕೇವಲ ಭಾವನೆಗಳ ಮೇಲಿನ ಆಟವಾಗಬಾರದು. ಅದರಲ್ಲಿ ವಿಜ್ಞಾನದ ಅಂಶಗಳ ಮೂಲಕ ಕಥೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿ ಕೊಡಲು ಸಾಧ್ಯ. ಹೀಗಾಗಿ ಪ್ರೇಕ್ಷಕರು ಕೂಡ ಈ ಮೂಲಕವೇ ಚಿತ್ರಗಳನ್ನು ಗ್ರಹಿಸಲು ಮುಂದಾಗಬೇಕು ಎಂದು ಆಶಿಸಿದ ಅವರು, ಈ ರೀತಿಯ ರಸಗ್ರಹಣ ಕಾರ್ಯಾಗಾರಗಳ ಮೂಲಕ ಚಲನಚಿತ್ರದ ವಿಜ್ಞಾನ ಅಂಶಗಳನ್ನು ಗುರುತಿಸಲು ಸಾಧ್ಯ ಎಂದರು.

ಇಂದು ಓದುವ ಸಂಸ್ಕೃತಿ ಮರೆಯಾಗುತ್ತಿದೆ. ಕಾದಂಬರಿಗಳನ್ನು ಓದುವ, ಆ ಮೂಲಕ ಕಾದಂಬರಿಕಾರರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸಬೇಕು. ಪ್ರತಿಯೊಂದು ಓದು ಕೂಡ, ವ್ಯಕ್ತಿಯ ಮನಸನ್ನು ವಿಕಸಿತಗೊಳಿಸುತ್ತದೆ. ಆ ಕಾದಂಬರಿ ಚಿತ್ರವಾಗಿ ತೆರೆಯ ಮೇಲೆ ಬಂದಾಗ, ಅದು ಇನ್ನಷ್ಟು ಆಪ್ತವಾಗುತ್ತದೆ ಎಂದ ಅವರು, ಇಂದು ಸಿನಿಮಾ ಕೇವಲ ಮನರಂಜನೆ ಮಾತ್ರವಲ್ಲ, ಅದೊಂದು ಅಧ್ಯಯನದ ವಸ್ತು ಎಂದರು.

ಒಂದು ಸಿನಿಮಾ ತೆರೆಯ ಮೇಲೆ ಬರಬೇಕಾದರೆ, ಸಾಕಷ್ಟು ತಂತ್ರಜ್ಞರು, ಕಲಾವಿದರ ಶ್ರಮ ಅಡಗಿರುತ್ತದೆ. ಸಿನಿಮಾ ಕೇವಲ ನಿರ್ದೇಶಕನ ಸ್ವತ್ತಲ್ಲ. ಆತ ಅದನ್ನು ತೆರೆಯ ಮೇಲೆ ತರುವ ಸಾಧಕ ಮಾತ್ರ. ಹೀಗಾಗಿ ಕಥೆಗೆ ಧಕ್ಕೆಯಾಗದಂತೆ ಚಿತ್ರವನ್ನು ನಿರೂಪಿಸುವ ಗುರುತರವಾದ ಜವಾಬ್ದಾರಿಯನ್ನು ಹೊಂದಿರುವ ನಿರ್ದೇಶಕನಿಗೆ ತಂತ್ರಜ್ಞರ ಪರಿಣಾಮಕಾರಿಯಾದ ಸಾಥ್ ಸಿಕ್ಕಿದರೆ, ಅತ್ಯುತ್ತಮ ಚಿತ್ರ ಮೂಡಿಬರಲು ಸಾಧ್ಯ ಎಂದರು.

ಇಂದು ಚಲನಚಿತ್ರ ಎನ್ನುವುದು ಉದ್ಯಮವಾಗಿದೆ. ಹೀಗಾಗಿ ಪ್ರತೀ ಸೆಕೆಂಡು ಕೂಡ ಹಣದ ಮೇಲೆ ಅವಲಂಬಿತವಾಗಿದೆ ಎಂದ ಅವರು, ನಿರ್ಮಾಪಕನಾದವನಿಗೆ ತಾನು ಹಾಕಿದ ಬಂಡವಾಳ ಲಾಭದೊಂದಿಗೆ ಹಿಂದಿರುಗಬೇಕು ಎಂಬ ಆಶಯ ಸಹಜ. ಆದರೆ, ಇದರಿಂದ ಸೃಜನಶೀಲತೆಗೆ ಧಕ್ಕೆಯಾಗುತ್ತಿದೆ. ಎಲ್ಲ ಕಾರಣಕ್ಕೂ ವ್ಯಾಪಾರೀಕರಣವೇ ಮುಖ್ಯವಾಗಬಾರದು ಎಂದರು.

ಕಾರ್ಯಾಗಾರದಲ್ಲಿ ಚಲನಚಿತ್ರದ ಛಾಯಾಗ್ರಹಣ ಒಂದು ಅನುಸಂಧಾನ ಕುರಿತು ಪ್ರಸಿದ್ಧ ಚಲನಚಿತ್ರ ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ, ಚಲನಚಿತ್ರ ಛಾಯಾಗ್ರಹಣ ಪರಂಪರೆ ಕುರಿತು ಗುರುಪ್ರಸಾದ ಕಾಶಿಯವರು ಮಾಹಿತಿ ಮಾರ್ಗದರ್ಶನ ನೀಡಿದರು.

ಕಾರ್ಯಾಗಾರವನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಡಿ. ಸತ್ಯಪ್ರಕಾಶ್, ಶ್ರೀಶ ಕೂದುವಳ್ಳಿ, ಗುರುಪ್ರಸಾದ ಕಾಶಿ ಹಾಗೂ ನಗರದ ಛಾಯಾಗ್ರಾಹಕರಾದ ಶಿವಮೊಗ್ಗ ನಾಗರಾಜ್, ಪ್ರದೀಪ್ ಕುಮಾರ್, ವಾಸುಕಿ ಕುಮಾರ್‌ರವರನ್ನು ಸನ್ಮಾನಿಸಲಾಯಿತು. ಡಾ. ಎಚ್. ಎಸ್. ನಾಗಭೂಷಣರವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಎಚ್.ಯು.ವೈದ್ಯನಾಥ್ ಉಪಸ್ಥಿತರಿದ್ದರು.ಬದಲಾವಣೆಗೆ ಪ್ರೇಕ್ಷಕ ಒಗ್ಗಿಕೊಳ್ಳಬೇಕು

ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎಂಬ ಆರೋಪ ಇದೆ. ಆದರೆ, ಇದು ಸರಿಯಲ್ಲ. ಈಗಲೂ ಕನ್ನಡದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಉತ್ತಮವಾದ ಚಿತ್ರಗಳು ಬರುತ್ತಿವೆ ಎಂದು ಹಲವು ಉದಾಹರಣೆಗಳನ್ನು ನೀಡಿದ ಅವರು, ಈ ಚಿತ್ರಗಳನ್ನು ತಮ್ಮದೆಂದು ಸ್ವೀಕರಿಸುವ ಮನಸ್ಥಿತಿ ಪ್ರತೀ ಪ್ರೇಕ್ಷಕನಿಗೆ ಬೇಕು ಖ್ಯಾತ ಚಲನಚಿತ್ರ ನಿರ್ದೇಶಕ ಡಿ.ಸತ್ಯಪ್ರಕಾಶ್ ಹೇಳಿದರು.ಬದಲಾವಣೆ ಜಗದ ನಿಯಮ. ಹೀಗಾಗಿ ಒಂದು ಪರದೆಯ ಚಿತ್ರಮಂದಿರಗಳ ಸ್ಥಾನದಲ್ಲಿ ಈಗ ಮಲ್ಟಿಪ್ಲೆಕ್ಸ್‌ಗಳು ಬಂದಿವೆ. ಈ ಬದಲಾವಣೆಗೆ ಪ್ರೇಕ್ಷಕ ಒಗ್ಗಿಕೊಳ್ಳಬೇಕು ಎಂದ ಅವರು, ಸಿನಿಮಾವನ್ನು ಸಿನಿಮಾ ಮಂದಿರಗಳಲ್ಲಿಯೇ ನೋಡುವ ಮಾನಸಿಕತೆ ಮುಖ್ಯ ಎಂದವರು ಪ್ರತಿಪಾದಿಸಿದರು.