ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಜೆಪಿ ನಗರದ ಮಹಿಳಾ ಸೊಸೈಟಿ ಪಡಿತರ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದ ಕೂಲಿ ಕಾರ್ಮಿಕರು ಬೆಳಗಿನಿಂದ ಸಂಜೆವರೆಗೆ ಕಾಯುವ ಪರಿಸ್ಥಿತಿ ಉಂಟಾಗಿದ್ದು ಪಡಿತರ ಆಹಾರಕ್ಕಾಗಿ ದಿನ ನಿತ್ಯ ಪರದಾಡುವಂತಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಮಾತನಾಡಿ ಸರ್ಕಾರದ ಅನ್ನಭಾಗ್ಯ ಪಡಿತರವನ್ನು ಪಡೆಯಲು ನಾಗರಿಕರು ಬಂದ ಸಂದರ್ಭದಲ್ಲಿ ಸರ್ವರ್‌ ಸಮಸ್ಯೆ ನೆಪ ಹೇಳಿ ಅಂಗಡಿ ಮಾಲೀಕರು ಸಾರ್ವಜನಿಕರನ್ನು ಹಲವು ದಿನಗಳಿಂದ ಸತಾಯಿಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗೆ ಬಂದಾಗ ಸರ್ವರ್ ಸಮಸ್ಯೆ ಇದೆ ಎಂದು ಹೇಳಲಾಗುತ್ತಾರೆ . ಇದರಿಂದಾಗಿ ಜನರು ಎರಡು- ಮೂರು ದಿನಗಳಿಂದ ಅಂಗಡಿ ಮುಂದೆ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ವಯೋವೃದ್ಧರು ಹಾಗೂ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.ರೇಷನ್ ಅಂಗಡಿಯ ಸಿಬ್ಬಂದಿ ಸಮಯಕ್ಕೆ ಬರುವುದಿಲ್ಲ, ಬೆಳಿಗ್ಗೆ ಬೇಗ ವಿತರಣೆ ಆರಂಭಿಸುವ ಬದಲು 11 ಗಂಟೆಗೆ ಬಂದು, ಮಧ್ಯಾಹ್ನ 3 ಗಂಟೆ ವೇಳೆಗೆ ಅಂಗಡಿ ಮುಚ್ಚಿಕೊಂಡು ಹೋಗುತ್ತಾರೆ. ಈ ತಿಂಗಳ 15 ರಿಂದಲೇ ಅಕ್ಕಿ ವಿತರಣೆ ಆರಂಭವಾಗಬೇಕಾಗಿದ್ದರೂ, 28ನೇ ತಾರೀಖು ಬಂದರೂ ಇನ್ನೂ ವಿತರಣೆ ಪೂರ್ಣಗೊಂಡಿಲ್ಲ. ಸುತ್ತಮುತ್ತಲಿನ ಇತರ ಎಲ್ಲಾ ಸೊಸೈಟಿ ಹಾಗೂ ಪಡಿತರ ಅಂಗಡಿಗಳಲ್ಲಿ ವಿತರಣೆ ಪೂರ್ಣಗೊಂಡಿದ್ದರೂ, ಇಲ್ಲಿ ಮಾತ್ರ ಈ ರೀತಿಯ ನಿರ್ಲಕ್ಷ್ಯ ನಡೆಯುತ್ತಿರುವುದು ಏಕೆ ಎಂಬುದನ್ನು ಗಮನಹರಿಸಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸರಿಯಾದ ರೀತಿಯಲ್ಲಿ ಪಡಿತರ ವಿತರಣೆ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.