ಪ್ರಜಾಪ್ರಭುತ್ವ ಮೌಲ್ಯ ಗಾಳಿಗೆ ತೂರಿ ನ. 21, 2025ರಂದು ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ತರುವ ಅಂತಿಮ ಪ್ರಕಟನೆ ಕೇಂದ್ರದ ಎನ್‍ಡಿಎ ಸರ್ಕಾರ ಮಾಡಿತು.

ಕೊಪ್ಪಳ: ಕೇಂದ್ರ ಸರ್ಕಾರ ನೂತನ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ನಿಯಮಾವಳಿಗಳ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಸಿಐಟಿಯು ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಅಶೋಕ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ಮೌಲ್ಯ ಗಾಳಿಗೆ ತೂರಿ ನ. 21, 2025ರಂದು ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ತರುವ ಅಂತಿಮ ಪ್ರಕಟನೆ ಕೇಂದ್ರದ ಎನ್‍ಡಿಎ ಸರ್ಕಾರ ಮಾಡಿತು. ಈ ನಾಲ್ಕು ಸಂಹಿತೆಗಳಿಗೆ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು. ಈ ಸಂಹಿತೆಗಳಿಗೆ ಕೇಂದ್ರ ಸರ್ಕಾರವು ನಿಯಮಾವಳಿ ಅಂತಿಮ ಪ್ರಕಟನೆ ಮಾಡದಿದ್ದ ಕಾರಣ ಈ ಸಂಹಿತೆಗಳು ಜಾರಿಗೆ ಬರಲಿಲ್ಲ. ಕೇಂದ್ರ ಸರ್ಕಾರ ಪ್ರಕಟಿಸಿದ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆ ಹಾಗೂ ಸಿಐಟಿಯು ಸಂಘಟನೆ ಸಲ್ಲಿಸಿದ ಯಾವುದೇ ಆಕ್ಷೇಪಣೆ ಪರಿಗಣಿಸದೆ ಅಂತಿಮ ನಿಯಮಾವಳಿ ಪ್ರಕಟಿಸಿ ನಾಲ್ಕು ಸಂಹಿತೆ ಅನುಷ್ಠಾನಕ್ಕೆ ತರಲಾಗಿದೆ. ಈಗ ಐದು ರಾಜ್ಯಗಳ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಆಸ್ಸಾಂ ಹಾಗು ಪಶ್ಚಿಮ ಬಂಗಾಳದಲ್ಲಿನ ಗೆಲುವು ನೀಡಿರುವ ಅಹಂಕಾರದೊಂದಿಗೆ ಈ ಕಪಟ ಹಾಗೂ ವಂಚನೆ ಕೇಂದ್ರಸರ್ಕಾರ ದೇಶದ ಕಾರ್ಮಿಕ ವರ್ಗದ ವಿರುದ್ಧ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಸಂಘಟನೆಯು ಈ ಸಂಹಿತೆ ಕಾರ್ಮಿಕರ ಜೀವನ ಮತ್ತು ಜೀವನೋಪಾಯಗಳ ಮೇಲಿನ ನರಮೇಧದ ದಾಳಿಗಳೆಂದು ಪರಿಗಣಿಸುತ್ತದೆ. ಈ ಸಂಹಿತೆಗಳು ಕಾರ್ಮಿಕರ ಮೇಲೆ ಗುಲಾಮಗಿರಿ ಹೇರುವುದು ಮಾತ್ರವಲ್ಲದೇ ಕಾರ್ಮಿಕರ ಪ್ರತಿಯೊಂದು ಹಕ್ಕು ಹಾಗೂ ಪ್ರತಿಭಟಿಸುವ ಅವಕಾಶ ಕಸಿದುಕೊಳ್ಳುತ್ತವೆ. ನಮ್ಮ ದೇಶದ ಮುಂದಿನ ತಲೆಮಾರುಗಳ ಸಮಸ್ತ ಭರವಸೆ, ನಂಬಿಕೆ ಮತ್ತು ಆಕಾಂಕ್ಷೆ ನಂದಿಸಿಬಿಡುತ್ತವೆ ಎಂದರು.

ರಾಜ್ಯ ಸರ್ಕಾರವು ಈ ಸಂಹಿತೆ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಬಾರದು. ದೇಶದ ಸಂವಿಧಾನವು ಖಾತರಿಪಡಿಸುವ ಒಕ್ಕೂಟ ತತ್ವ ಆಧರಿಸಿ ರಾಜ್ಯ ಸರ್ಕಾರವು ರಾಜ್ಯದ ಶ್ರಮ ಜೀವಿಗಳ ಹಿತ ರಕ್ಷಿಸಲು ಮುಂದಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡ ಕಾಸಿಂ ಸರ್ದಾರ್, ಕಿರ್ಲೋಸ್ಕರ್ ಕಾರ್ಮಿಕರ ಸಂಘದ ಮುಖಂಡ ಕಂಠಿ ಬಸವರಾಜ, ರವಿ ಜೋಶಿ, ರಾಮಕೃಷ್ಣ, ಅಮರೇಶ ಶರಣಾರ್ಥಿ, ನಾಗೇಶ ಮೋರೆ, ಬಸಪ್ಪ ಗುಡಸಲಮನಿ, ರವೀಂದ್ರ ಕೆರೂರ, ಗ್ರಾಪಂ ಸಂಘದ ಮುಖಂಡ ಅಮರೇಶ್ ಡಾಣಿ, ಕಳಕೇಶ, ಕೃಷಿ ಕೂಲಿಕಾರರ ಸಂಘದ ಸುಂಕಪ್ಪ ಗದಗ, ಕಾಲೇಸಾಬ್‌, ಎಪಿಎಂಸಿ ಹಮಾಲರ ಸಂಘದ ಮುಖಂಡ ಮಂಜುನಾಥ ಗೊಂಡಬಾಳ ಸೇರಿದಂತೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.