ಕಾರ್ಮಿಕರ ಪ್ರತಿಭಟನೆ ಹಕ್ಕು, ಸಂಘಟಿತ ಹೋರಾಟದ ಅವಕಾಶ ಮತ್ತು ಸಾಮಾಜಿಕ ಭದ್ರತೆಗಳನ್ನು ಕುಗ್ಗಿಸುವ ಕೆಲಸ ಸರ್ಕಾರ ಮಾಡುತ್ತಿದೆ. ೨೦೧೯ರಲ್ಲಿ ವೇತನ ಸಂಹಿತೆ ಜಾರಿಗೆ ಬಂದ ನಂತರ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ೨೦೨೦ರ ಜನವರಿಯಲ್ಲಿ ಅಖಿಲ ಭಾರತ ಮುಷ್ಕರ, ಬಳಿಕ ನವೆಂಬರ್ ೨೬ರಂದು ಐತಿಹಾಸಿಕ ಸಾರ್ವತ್ರಿಕ ಮುಷ್ಕರ ನಡೆದಿತ್ತು. ೨೦೨೫ರ ಜುಲೈ ೬ರಂದು ನಡೆದ ಸಾರ್ವತ್ರಿಕ ಮುಷ್ಕರದಲ್ಲಿ ೨೫ ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರ ಎಂದು ಹೇಳಿದರು. ಕಾರ್ಮಿಕ ವರ್ಗ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳಶಾಹಿಗಳ ಪರವಾಗಿ ನಡೆದುಕೊಂಡಿದೆ. ಕಾರ್ಮಿಕ ಸಂಘಟನೆಗಳ ಮನವಿಗಳನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಸಂಘಟನೆ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಮಂಗಳವಾರ ನಗರದ ಅಂಬೇಡ್ಕರ್ ಪ್ರತಿಮೆ ವೃತ್ತದಲ್ಲಿ ಸಿಐಟಿಯು ಜಿಲ್ಲಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ನಗರದಲ್ಲಿ ಮಂಗಳವಾರ ನಾಲ್ಕು ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ನಗರದ ಅಂಬೇಡ್ಕರ್ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಕಾರ್ಮಿಕರು ಹಾಗೂ ಸಂಘಟನೆಯ ಮುಖಂಡರು ಕೇಂದ್ರ ಸರ್ಕಾರ ಪ್ರಕಟಿಸಿರುವ ಕಾರ್ಮಿಕ ಸಂಹಿತೆಗಳ ನಿಯಮಾವಳಿ ಪ್ರತಿಗಳನ್ನು ಸಾಮೂಹಿಕವಾಗಿ ಸುಟ್ಟು ಸರ್ಕಾರದ ಕ್ರಮವನ್ನು ಖಂಡಿಸಿದರು. ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕಾರ್ಮಿಕರ ಹಕ್ಕುಗಳು ಹಾಗೂ ಸಂವಿಧಾನಬದ್ಧ ಸೌಲಭ್ಯಗಳನ್ನು ಕಸಿದುಕೊಳ್ಳಲು ಈ ಸಂಹಿತೆಗಳನ್ನು ಜಾರಿಗೆ ತಂದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ, ಮೇ. ೩೦ ರಂದು ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ ಹಾಕಿ ಕಾರ್ಮಿಕ ಸಂಹಿತೆ ವಾಪಸ್ ಗೆ ಆಗ್ರಹಿಸಲಾಗುವುದು ಎಂದರು.ಇದೇ ವೇಳೆ ಸಿಐಟಿಯು ಅಧ್ಯಕ್ಷ ಧರ್ಮೇಶ್ ಮಾಧ್ಯಮದೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿದೆ. ಕಾರ್ಮಿಕ ಸಂಘಟನೆಗಳು ಹಾಗೂ ಸಿಐಟಿಯು ನೀಡಿದ್ದ ಆಕ್ಷೇಪಣೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಸರ್ಕಾರ ಏಕಪಕ್ಷೀಯವಾಗಿ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದರು. ಸಿಐಟಿಯು ಪ್ರಕಾರ, ಹಲವು ದಶಕಗಳ ಕಾಲ ನಡೆದ ಹೋರಾಟಗಳಿಂದ ಕಾರ್ಮಿಕರು ಗಳಿಸಿಕೊಂಡಿದ್ದ ಮೂಲಭೂತ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಈ ಸಂಹಿತೆಗಳು ದುರ್ಬಲಗೊಳಿಸುತ್ತವೆ. ಖಾಯಂ ಉದ್ಯೋಗದ ಅವಕಾಶಗಳನ್ನು ಕಡಿಮೆ ಮಾಡಿ ಗುತ್ತಿಗೆ ಆಧಾರಿತ ಹಾಗೂ ಅಸ್ಥಿರ ಉದ್ಯೋಗ ವ್ಯವಸ್ಥೆಗೆ ಯುವಕರನ್ನು ತಳ್ಳುವ ಪ್ರಯತ್ನ ಇದಾಗಿದೆ ಎಂದು ಸಂಘಟನೆ ಟೀಕಿಸಿದರು. ಕಾರ್ಮಿಕರ ಮೇಲೆ ನವ ಗುಲಾಮಗಿರಿ ಹೇರುವ ಉದ್ದೇಶದಿಂದಲೇ ಈ ಸಂಹಿತೆಗಳನ್ನು ರೂಪಿಸಲಾಗಿದೆ. ಕಾರ್ಮಿಕರ ಪ್ರತಿಭಟನೆ ಹಕ್ಕು, ಸಂಘಟಿತ ಹೋರಾಟದ ಅವಕಾಶ ಮತ್ತು ಸಾಮಾಜಿಕ ಭದ್ರತೆಗಳನ್ನು ಕುಗ್ಗಿಸುವ ಕೆಲಸ ಸರ್ಕಾರ ಮಾಡುತ್ತಿದೆ. ೨೦೧೯ರಲ್ಲಿ ವೇತನ ಸಂಹಿತೆ ಜಾರಿಗೆ ಬಂದ ನಂತರ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ೨೦೨೦ರ ಜನವರಿಯಲ್ಲಿ ಅಖಿಲ ಭಾರತ ಮುಷ್ಕರ, ಬಳಿಕ ನವೆಂಬರ್ ೨೬ರಂದು ಐತಿಹಾಸಿಕ ಸಾರ್ವತ್ರಿಕ ಮುಷ್ಕರ ನಡೆದಿತ್ತು. ೨೦೨೫ರ ಜುಲೈ ೬ರಂದು ನಡೆದ ಸಾರ್ವತ್ರಿಕ ಮುಷ್ಕರದಲ್ಲಿ ೨೫ ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರ ಎಂದು ಹೇಳಿದರು. ಕಾರ್ಮಿಕ ವರ್ಗ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳಶಾಹಿಗಳ ಪರವಾಗಿ ನಡೆದುಕೊಂಡಿದೆ. ಕಾರ್ಮಿಕ ಸಂಘಟನೆಗಳ ಮನವಿಗಳನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಸಂಘಟನೆ ಆರೋಪಿಸಿದರು.ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಸಂಹಿತೆಗಳನ್ನು ಜಾರಿಗೊಳಿಸಿರುವುದು ಸರ್ಕಾರ ತನ್ನದೇ ಪ್ರಜೆಗಳ ವಿರುದ್ಧ ಯುದ್ಧ ಘೋಷಿಸಿದಂತಾಗಿದೆ ಎಂದು ಸಿಐಟಿಯು ಟೀಕಿಸಿದರು. ಈ ಸಂಹಿತೆಗಳು ಕಾರ್ಮಿಕರ ಬದುಕು ಮತ್ತು ಜೀವನೋಪಾಯಗಳ ಮೇಲಿನ ನರಮೇಧದ ದಾಳಿಗಳಾಗಿವೆ. ಮುಂದಿನ ತಲೆಮಾರುಗಳ ಭರವಸೆ ಮತ್ತು ಉದ್ಯೋಗ ಭದ್ರತೆಯನ್ನೇ ನಾಶಮಾಡುವ ಅಪಾಯಕಾರಿ ಕ್ರಮ ಇದು ಎಚ್ಚರಿಸಿದರು. ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಈ ಸಂಹಿತೆಗಳನ್ನು ಜಾರಿಗೆ ತರಬಾರದು. ಸಂವಿಧಾನಬದ್ಧ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಿ ರಾಜ್ಯದ ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು. ಅಖಿಲ ಭಾರತ ಸಿಐಟಿಯು ಸಮಿತಿಯ ಕರೆಯಂತೆ ಹಾಸನದಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಟಿ. ಎಚ್. ಜಯಂತಿ, ಖಜಾಂಚಿ ಅರವಿಂದ್, ಮೀನಾಕ್ಷಿ, ದಾಕ್ಷಾಯಿಣಿ, ಕುಮಾರ್, ಹಾದೇವ್, ನಾಗರತ್ನಪದ್ಮ ಶಾಂತಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.