ಪೌರಕಾರ್ಮಿಕರು ಸುರಕ್ಷಾ ಪರಿಕರ ಧರಿಸಿ ಕಾರ್ಯ ನಿರ್ವಹಿಸಲಿ: ಚಂದ್ರಕಲಾ

| Published : Jul 26 2025, 12:30 AM IST

ಪೌರಕಾರ್ಮಿಕರು ಸುರಕ್ಷಾ ಪರಿಕರ ಧರಿಸಿ ಕಾರ್ಯ ನಿರ್ವಹಿಸಲಿ: ಚಂದ್ರಕಲಾ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ವ್ಯಾಪ್ತಿಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ, ಕಾರ್ಮಿಕರು, ಪೌರಕಾರ್ಮಿಕರು ತಪ್ಪದೇ ಸುರಕ್ಷಾ ಪರಿಕರಗಳನ್ನು ಧರಿಸಿ ಕಾರ್ಯನಿರ್ವಹಿಸಬೇಕು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಸೂಚನೆಕನ್ನಡಪ್ರಭ ವಾರ್ತೆ ಬಳ್ಳಾರಿ

ಜಿಲ್ಲಾ ವ್ಯಾಪ್ತಿಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ, ಕಾರ್ಮಿಕರು, ಪೌರಕಾರ್ಮಿಕರು ತಪ್ಪದೇ ಸುರಕ್ಷಾ ಪರಿಕರಗಳನ್ನು ಧರಿಸಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಹೇಳಿದರು.

ನಗರದ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ, ಕಾರ್ಮಿಕರು, ಪೌರಕಾರ್ಮಿಕರು ಮತ್ತು ಗುರುತಿಸಿದ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಮತ್ತು ಮೃತಪಟ್ಟ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಅವಲಂಬಿತರೊಂದಿಗೆ ಏರ್ಪಡಿಸಿದ್ದ ನೇರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪೌರಕಾರ್ಮಿಕರು ಕಸದ ಜತೆಯೇ ಕಾರ್ಯನಿರ್ವಹಿಸುತ್ತಾರೆ, ಸ್ವಚ್ಛತೆ ಕೈಗೊಳ್ಳುವ ಸ್ಥಳಗಳಲ್ಲಿ ಚೂಪಾದ ವಸ್ತು, ವಿಷಕಾರಿ ವಸ್ತುಗಳು ಕಂಡುಬರುತ್ತವೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪೌರಕಾರ್ಮಿಕರು ಸುರಕ್ಷತಾ ಪರಿಕರ ಧರಿಸದೇ ಕಾರ್ಯನಿರ್ವಹಿಸುವುದು ಕಂಡುಬಂದಿದೆ. ಹಾಗಾಗಿ ತಮ್ಮ ಸುರಕ್ಷತೆಗಾಗಿ ಮತ್ತು ಆರೋಗ್ಯ ಹಿತದೃಷ್ಟಿಯಿಂದ ತಪ್ಪದೇ ಸುರಕ್ಷತಾ ಪರಿಕರಗಳನ್ನು ಧರಿಸಬೇಕು ಎಂದು ಸೂಚಿಸಿದರು.

ಮಹಾನಗರ ಪಾಲಿಕೆ, ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳು ಸಕಾಲದಲ್ಲಿ ತಲುಪುತ್ತಿದೆಯೇ ಎಂಬುದರ ಮೇಲುಸ್ತುವಾರಿ ಪರಿಶೀಲನೆ ಕೈಗೊಳ್ಳುವುದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಮುಖಂಡರಾದ ರತ್ನಮ್ಮ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಲೋನ್ ವ್ಯವಸ್ಥೆ ನೀಡಬೇಕು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಬೇಕು ಮತ್ತು ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಯಾಗಿಲ್ಲ, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯದರ್ಶಿ ಗಮನಕ್ಕೆ ತಂದರು.

ಇನ್ನೋರ್ವ ಪೌರಕಾರ್ಮಿಕರಾದ ಕಲಾವತಿ ಮಾತನಾಡಿ, ಪಾಲಿಕೆಯಿಂದ ಎಲ್ಲ ಸುರಕ್ಷಿತ ಪರಿಕರಗಳನ್ನು ಕಾಲ-ಕಾಲಕ್ಕೆ ವಿತರಿಸಲಾಗುತ್ತಿದೆ. ಆದರೆ ವೇತನ ಪಾವತಿ ಕುರಿತಂತೆ ವಿಳಂಬವಾಗುತ್ತಿದೆ ಎಂದು ಪ್ರಸ್ತಾಪಿಸಿದರು. ಹೊಸದಾಗಿ ನೇಮಕವಾಗುವ ಪೌರಕಾರ್ಮಿಕರಿಗೆ ವೇತನ ವಿಳಂಬವಾಗುತ್ತದೆ. ಈ ಕುರಿತು ಪಾಲಿಕೆ ಆಯುಕ್ತರಿಗೆ ನಿರ್ದೇಶನ ಮಾಡಿ, ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಲಾಗುವುದು ಎಂದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಸುಸಜ್ಜಿತ ವಿಶ್ರಾಂತಿ ಕೊಠಡಿ ಸೌಲಭ್ಯವಿಲ್ಲ ಎಂದು ಪೌರಕಾರ್ಮಿಕರು ಕಾರ್ಯದರ್ಶಿ ಗಮನಕ್ಕೆ ತಂದಾಗ, ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ, ಶಾಸಕರ ಅನುದಾನದಲ್ಲಿ ಮುಂದಿನ ವರ್ಷದಲ್ಲಿ ನಗರದ ಮೂರು ಭಾಗದಲ್ಲಿ ಸುಸಜ್ಜಿತ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಿಕೊಡಲಾಗುವುದಾಗಿ ಹೇಳಿದರು.

ಬಳಿಕ ನಿವೇಶನ ಮತ್ತು ವಸತಿ ನೀಡಬೇಕು ಎಂದು ಪೌರಕಾರ್ಮಿಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಗರದ ಹೊರವಲಯದ ಮುಂಡರಗಿ ಆಶ್ರಯ ವಸತಿ ಯೋಜನೆಯಡಿ 5000 ಮನೆಗಳು ನಿರ್ಮಾಣಗೊಳ್ಳುತ್ತಿದ್ದು, ಇದರಲ್ಲಿ 200 ಮನೆಗಳನ್ನು ಪೌರಕಾರ್ಮಿಕರಿಗಾಗಿಯೇ ಮೀಸಲಿರಿಸಲಾಗಿದೆ. ಸರ್ಕಾರದ ಈ ವಸತಿ ಸೌಲಭ್ಯ ಪಡೆಯಲು ಪೌರಕಾರ್ಮಿಕರು ಮುಂದೆ ಬರಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸಂಶೋಧನಾಧಿಕಾರಿ ಮಹಾದೇವಸ್ವಾಮಿ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕಪ್ಪು ಬಣ್ಣದ ಸಮವಸ್ತ್ರ ನೀಡಿದ್ದು, ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಅವರು ಕಾರ್ಯನಿರ್ವಹಿಸುತ್ತಿರುವುದು ವಾಹನ ಸವಾರರಿಗೆ ಕಾಣಿಸುವುದಿಲ್ಲ. ಇದನ್ನು ಕೂಡಲೇ ಬದಲಾಯಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಇದೇ ವೇಳೆ ವೇತನ ಪಾವತಿ, ನೇರಪಾವತಿ, ಬೆಳಗಿನ ಉಪಾಹಾರ ವಿತರಣೆ, ಇಪಿಎಫ್ ಮತ್ತು ಇಎಸ್‌ಐ ಪಾವತಿ ಕುರಿತು ಪೌರಕಾರ್ಮಿಕರ ಜತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದ, ಜಿಲ್ಲಾ ಸಫಾಯಿ ಕರ್ಮಚಾರಿ ವಿಭಾಗದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಕಂದಕೂರು ರಾಮುಡು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿ ರಾಘು, ಜಿಲ್ಲಾ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಉಪಸ್ಥಿತರಿದ್ದರು.