ಸಾರಾಂಶ
ಹುಬ್ಬಳ್ಳಿ: ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆಯುವುದು ತಪಸ್ಸು ಇದ್ದಂತೆ. ಗುರಿಯ ಬಗ್ಗೆ ಸ್ಪಷ್ಟತೆ ಇದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹು-ಧಾ. ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
ಇಲ್ಲಿನ ರೈಲ್ವೆ ನಿಲ್ದಾಣ ಬಳಿಯ ಸ್ವರ್ಣಾ ಪ್ಯಾರಾಡೈಸ್ ಹೊಟೇಲ್ ಭವನದಲ್ಲಿ ಭಾನುವಾರ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಲಕ್ಷ್ಯ-೨.೦ ಊಹಿಸಿ ಮತ್ತು ಗೆಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಸಮಯಪ್ರಜೆ, ಅರ್ಹತೆ, ಪರಿಪೂರ್ಣ ವ್ಯಕ್ತಿತ್ವ ಹಾಗೂ ಕೃತಜ್ಞತಾಭಾವ ಮುಖ್ಯ. ನೀವು ಸಮಯವನ್ನು ಗೌರವಿಸಿದಾಗ ಅದು ನಿಮ್ಮನ್ನು ಗೌರವಿಸುತ್ತದೆ. ನಿಮ್ಮಲ್ಲಿ ಅರ್ಹತೆ ಇರಬೇಕು. ಅದನ್ನು ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಯಶಸ್ವಿಯಾಗಲು ಇರುವುದೊಂದೇ ಅವಕಾಶ. ಅದಕ್ಕೆ ಪರಿಶ್ರಮ ಮುಖ್ಯ ಎಂದು ಹೇಳಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಕಲೆ, ಕೃತಜ್ಞತಾಭಾವ ಬೆಳೆಸಿಕೊಳ್ಳಬೇಕು. ಅಂದಾಗ ನಿಮ್ಮಲ್ಲಿ ಸರಳತೆ ಬೆಳೆಯುತ್ತದೆ. ನಿಮ್ಮಲ್ಲಿ ಸ್ಪಷ್ಟತೆ ಮುಖ್ಯ. ಆಗ ಯೋಜನೆ ರೂಪಿಸಲು. ನಿಗದಿತ ಗುರಿ ತಲುಪಲು ಸಾಧ್ಯ. ಎಲ್ಲರಿಗಿಂತ ನಾವೇ ಉತ್ತಮ ಎಂದುಕೊಂಡು ನಡೆದರೆ ಅದು ಜೀವನದ ಅಂತ್ಯದ ಆರಂಭ ಎಂದು ಹೇಳಿದರು.ಸ್ವರ್ಣಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಜೀವನದಲ್ಲಿ ಸಮರ್ಪಣಾ ಮನೋಭಾವ ಬೆಳೆಸಿಕೊಳ್ಳಬೇಕು. ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಬೇಕು. ಕಂಡ ಕನಸು ನನಸಾಗಿಸಿಕೊಳ್ಳಲು ಕಠಿಣ ಪರಿಶ್ರಮ ಪಡಬೇಕು. ನಮ್ಮ ಗುರಿ ತಲುಪುವ ಮೂಲಕ ಸಾಧನೆ ಮಾಡಬೇಕು. ಮಕ್ಕಳ ಕಲಿಕೆಗೆ ಪಾಲಕರ ಪ್ರೋತ್ಸಾಹ, ಬೆಂಬಲ ಮುಖ್ಯ ಎಂದರು.
ಲಕ್ಷ್ಯ ೨.೦ ಊಹಿಸಿ ಮತ್ತು ಗೆಲ್ಲಿ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ೧೦ನೇ ತರಗತಿಯ ೫ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ೨೫ ಟಾಪ್ ವಿದ್ಯಾರ್ಥಿಗಳು ತಾವು ಊಹಿಸಿದ ಅಂಕಗಳಿಗೆ ಅತ್ಯಂತ ಸಮೀಪವಾಗಿ ನಿಖರವಾಗಿ ಸಾಧನೆ ಮಾಡಿದ್ದಾರೆ. ಅವರಲ್ಲಿ ಕೆ.ಇ. ಬೋರ್ಡ್ ಆಂಗ್ಲ ಮಾಧ್ಯಮ ಶಾಲೆಯ ಸಮರ್ಥ ಉಮರ್ಜಿ ಪ್ರಥಮ, ಚಿನ್ಮಯ ಇಂಗ್ಲಿಷ್ ಪ್ರೈಮರಿಯ ಧನ್ವಿ ನಾಯಕ ದ್ವಿತೀಯ, ಚಿನ್ಮಯ ವಿದ್ಯಾಲಯದ ವೇದಾ ಸಮುದ್ಯತಾ ತೃತೀಯ, ಸುಮೇದ ಪುರಾಣಿಕ ಚತುರ್ಥ, ಸಾನಿಕಾ ಕೊಡಂಚಾ ಐದನೇ ಸ್ಥಾನ ಪಡೆದರು. ವಿಜೇತರಿಗೆ ಲ್ಯಾಪ್ಟಾಪ್, ಡೆಸ್ಕ್ ಟಾಪ್, ಬ್ಲೂಟೂತ್ ಹೆಡ್ಫೋನ್, ಸ್ಮಾರ್ಟ್ವಾಚ್, ಇಯರ್ಬಡ್ಸ್ ಕೊಡಮಾಡಲಾಯಿತು.ಟೆಕ್ ಸ್ಟೋರ್ ಸಂಸ್ಥಾಪಕ ಆನಂದ ಬೈದ್, ಲಕ್ಷ್ಮಿತಾ ಬೈದ್, ವಿಶಾಖಾ ಕುಲಕರ್ಣಿ, ಕೇಶವ ಚಿಕ್ಕಮಠ, ಅಕ್ಷತಾ ಸೇರಿದಂತಿ ವಿದ್ಯಾರ್ಥಿಗಳು, ಅವರ ಪಾಲಕರು ಮೊದಲಾದವರಿದ್ದರು. ಪ್ರತಿಭಾ ಚೋಪ್ರಾ ಪರಿಚಯಿಸಿದರು.