ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಆಹಾರ ಮೇಳ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟನೆ ಮಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸೃದೃಢ ಆರೋಗ್ಯಕ್ಕಾಗಿ ಶುಚಿ, ರುಚಿಯಾದ ಆಹಾರ ಬಹಳ ಮುಖ್ಯ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಆಹಾರ ಮೇಳ ಹಾಗೂ ಬಸವೇಶ್ವರ ಆಸ್ಪತ್ರೆ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರು ಆರೋಗ್ಯವಾಗಿರಬೇಕಾದರೆ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಬೇಕು. ಶರಣರು ಆಹಾರವನ್ನು ಪ್ರಸಾದವೆಂದು ಕರೆಯುತ್ತಾರೆ. ಮನಸ್ಸು ಮತ್ತು ದೇಹಕ್ಕೆ ಪ್ರಸನ್ನತೆ ಕೊಡುವುದೇ ಪ್ರಸಾದ. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಯಾವುದರಲ್ಲೂ ಕಮ್ಮಿಯಿಲ್ಲ. ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್‍ರವರು ಬಹಳ ವರ್ಷಗಳ ಕಾಲ ಮುರುಘಾಮಠದಲ್ಲಿಯೂ ಸೇವೆ ಸಲ್ಲಿಸಿದ್ದರು. ಹಾಗಾಗಿ ಅವರಿಗೆ ಶಿಕ್ಷಣ ಸಂಸ್ಥೆಯನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕೆಂಬ ಬುದ್ದಿವಂತಿಕೆಯಿದೆ ಎಂದರು.

ಡಾ.ರಾಜೇಶ್ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಶೇ.25ರಷ್ಟು ರಿಯಾಯಿತಿಯಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಿದ್ದೇವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಚಿಕ್ಕಂದಿನಲ್ಲಿಯೇ ಮಕ್ಕಳು ಆಹಾರ ಮೇಳ ನಡೆಸುವುದರಿಂದ ಶಿಕ್ಷಣದ ಜೊತೆ ವ್ಯವಹಾರಿಕ ಜ್ಞಾನ ಮೂಡಿಸಿದಂತಾಗುತ್ತದೆ ಎಂದರು.

ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಕೆ.ಎಂ.ಚೇತನ್ ಮಾತನಾಡಿ, ಹಣ, ಆಸ್ತಿ, ಅಂತಸ್ತನ್ನು ಗಳಿಸಬಹುದು. ಆದರೆ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು ಕಷ್ಟ. ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಮುಖ್ಯ. ಪರಿಸರ ಕಲುಷಿತ ಗೊಂಡಿರುವುದರಿಂದ ಪ್ರತಿಯೊಬ್ಬರು ಆರೋಗ್ಯದ ಕಡೆ ಕಾಳಜಿ ವಹಿಸಬೇಕಾಗಿದೆ. ಮಕ್ಕಳಲ್ಲಿ ಮಾರುಕಟ್ಟೆ, ವ್ಯವಹಾರದ ಬಗ್ಗೆ ಅರಿವು ಮೂಡಿಸುವುದು ಆಹಾರ ಮೇಳದ ಉದ್ದೇಶ ಎಂದರು.

ಈ ವೇಳೆ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್, ಬಿ.ಇಡಿ.ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ, ಉಪ ಪ್ರಾಚಾರ್ಯ ಶಿವಕುಮಾರ್, ಉಪನ್ಯಾಸಕ ಹನುಮಂತರೆಡ್ಡಿ, ಝಮಾಟೋದ ಮಂಜುನಾಥ್ ಸೇರಿದಂತೆ ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಮಕ್ಕಳು ಆಹಾರ ಮೇಳದಲ್ಲಿ ಭಾಗವಹಿಸಿದ್ದರು. ವೈದ್ಯರಾದ ಸುಹಾಸ್, ನಿರಂಜನ್, ಸೌಂದರ್ಯ, ರೂಪ ಮುಂತಾದವರು ಉಚಿತ ಆರೋಗ್ಯ ತಪಾಸಣೆ ನಡೆಸಿದರು. ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಮಕ್ಕಳು ವಿವಿಧ ಬಗೆಯ ತಿಂಡಿ ತಿನಿಸು, ಸಿಹಿ ಪದಾರ್ಥ, ಹೋಳಿಗೆ, ಚಪಾತಿ, ಪಾನಿ ಪೂರಿ, ಪಲಾವ್, ಕರಿದ ತಿಂಡಿಗಳನ್ನು ತಾವೆ ತಯಾರಿಸಿ ಆಹಾರ ಮೇಳದಲ್ಲಿ ಪ್ರದರ್ಶಿಸಿದರು.