ಜಿಲ್ಲಾಡಳಿತ ಮತ್ತು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎನ್.ಎಸ್.ಎಸ್., ಸ್ಥಳೀಯ ರಾಜ್ ಫೀಶ್ ಮಿಲ್ ಹಾಗೂ ಕೊಚ್ಚಿನ್ ಶಿಪ್ ಯಾರ್ಡ್‌ ಸಹಯೋಗದೊಂದಿಗೆ ಇಲ್ಲಿನ ಕಡಲ ತೀರದ ಸ್ವಚ್ಛತಾ ಕಾರ್ಯವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.

ಮಲ್ಪೆ: ಜಿಲ್ಲಾಡಳಿತ ಮತ್ತು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎನ್.ಎಸ್.ಎಸ್., ಸ್ಥಳೀಯ ರಾಜ್ ಫೀಶ್ ಮಿಲ್ ಹಾಗೂ ಕೊಚ್ಚಿನ್ ಶಿಪ್ ಯಾರ್ಡ್‌ ಸಹಯೋಗದೊಂದಿಗೆ ಇಲ್ಲಿನ ಕಡಲ ತೀರದ ಸ್ವಚ್ಛತಾ ಕಾರ್ಯವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಈ ಕಾರ್ಯಕ್ರಮವನ್ನು ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಚಾಲನೆ ನೀಡಿದರು ಮತ್ತು ನಮ್ಮ ಉಡುಪಿ ಸ್ವಚ್ಛ ಉಡುಪಿ ಲಾಂಛನವನ್ನು ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಅವರು, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹೊಂದಿರುವ ನಿಸರ್ಗದತ್ತವಾಗಿ ದೊರಕಿರುವ ಜಿಲ್ಲೆಯ ಸುಂದರವಾದ ಕಡಲ ತೀರಗಳನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಡಲು ಪ್ರತಿಯೊಬ್ಬ ನಾಗರಿಕರೂ ಪ್ರಯತ್ನಿಸಬೇಕು. ಪರಿಸರ ರಕ್ಷಣೆಗಾಗಿ ಪೂರಕ ಪ್ರಯತ್ನಗಳು ಹಾಗೂ ಚಟುವಟಿಗಳು ದೈನಂದಿನ ದಿನಚರಿಯ ಅಂಗವಾಗಬೇಕು ಎಂದರು.ಪ್ಲಾಸ್ಟಿಕ್‌ನಂತಹ ವಸ್ತುಗಳ ಅವ್ಯಾಹತ ಬಳಕೆ ಮತ್ತು ಅವೈಜ್ಞಾನಿಕ ವಿಲೇವಾರಿಯಿಂದ ಪರಿಸರ ನಾಶವಾಗುತ್ತಿದ್ದು, ಇದರ ವಿರುದ್ಧ ಬೀಚ್‌ಗೆ ಆಗಮಿಸುವ ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡುವಂತೆ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ ಸುರಕ್ಷಿತ ಸುಂದರ ಪರಿಸರವನ್ನು ನಿರ್ಮಿಸಲು ಸಹಕರಿಸುವಂತೆ ತಿಳಿಸಿದರು.ಸ್ವಚ್ಚತಾ ಕಾರ್ಯವನ್ನು ಇಲ್ಲಿನ ಗಾಂಧಿ ವೃತ್ತದ ಎಡ ಹಾಗೂ ಬಲ ಭಾಗದ ಎರಡು ಕಿ.ಮೀ. ವರೆಗೆ ಕೈಗೊಳ್ಳಲಾಯಿತು.

ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ರೋಶನ್ ಕುಮಾರ್ ಶೆಟ್ಟಿ, ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.